ಸಂಕಷ್ಟದಲ್ಲಿ ರಾಜ್ಯಕ್ಕೆ ಬಾರದ ಮೋದಿ ತಿರಸ್ಕರಿಸಿ: ಸಚಿವ ಶಿವಾನಂದ ಪಾಟೀಲ

| Published : Mar 21 2024, 01:01 AM IST

ಸಾರಾಂಶ

ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿ ಜಿಲ್ಲೆಗೆ ಯಾವುದೇ ಕೊಡುಗೆ ನೀಡದ ಬಸವರಾಜ ಬೊಮ್ಮಾಯಿ ಅವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಹಾವೇರಿ

ಸಂಕಷ್ಟದ ಸಂದರ್ಭದಲ್ಲಿ ರಾಜ್ಯಕ್ಕೆ ಬಾರದೇ ಚುನಾವಣೆ ವೇಳೆ ಮಾತ್ರ ಆಗಮಿಸುವ ಪ್ರಧಾನಿ ಮೋದಿ ಮತ್ತು ಸಿಎಂ ಆಗಿದ್ದರೂ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸದ ಬಸವರಾಜ ಬೊಮ್ಮಾಯಿ ಅವರಿಗೆ ಮತದಾರರು ತಕ್ಕ ಪಾಠ ಕಲಿಸಬೇಕು. ಅವರನ್ನು ತಿರಸ್ಕರಿಸಿ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠಗೆ ಮತ ನೀಡಿ ಗೆಲ್ಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮನವಿ ಮಾಡಿದರು.

ನಗರದ ಸಿದ್ಧರಾಮೇಶ್ವರ ಕಲ್ಯಾಣ ಮಂಟಪದಲ್ಲಿ ಲೋಕಸಭಾ ಚುನಾವಣೆ ಅಂಗವಾಗಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಬಿಜೆಪಿಯಿಂದ ಸಂಸದರಾಗಿದ್ದ ಶಿವಕುಮಾರ ಉದಾಸಿ ಅವರ ಬಗ್ಗೆ ಅಭಿಮಾನವಿದೆ. ಕಾರಣ ಅವರು ಪ್ರಾಮಾಣಿಕವಾಗಿ ಚುನಾವಣಾ ಕಣದಿಂದ ಹಿಂದಕ್ಕೆ ಸರಿದಿದ್ದಾರೆ. ಆದರೆ, ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿ ಜಿಲ್ಲೆಗೆ ಯಾವುದೇ ಕೊಡುಗೆ ನೀಡದ ಬಸವರಾಜ ಬೊಮ್ಮಾಯಿ ಅವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದರು.

ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ದ್ವೇಷ ಅಳಿಸಿ ಪ್ರೀತಿ ಗಳಿಸಿ ತತ್ವದಡಿ ದೇಶವನ್ನು ಸದೃಢಗೊಳಿಸಲು ಹೊರಟಿರುವ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆಗಳ ಮೂಲಕ ಕ್ರಾಂತಿಕಾರಿ ಹೆಜ್ಜೆಯನ್ನಿರಿಸಿದೆ. ಪ್ರಧಾನಿ ಮೋದಿ ಅವರು ಶ್ರೀಮಂತರ ಹತ್ತು ಲಕ್ಷ ಕೋಟಿ ರು. ಮನ್ನಾ ಮಾಡಿದರು. ಕಾಂಗ್ರೆಸ್ ಬಡವರ ಗ್ಯಾರಂಟಿಗೆ ಅನುದಾನ ಮೀಸಲಿಟ್ಟರೆ ದೇಶ ದಿವಾಳಿ ಆಗುತ್ತದೆ ಎಂದು ಆಪಾದಿಸಿದರು. ಬಡವರ, ರೈತರ, ಗ್ರಾಮೀಣ ಜನರ, ಧ್ವನಿ ಇಲ್ಲದವರ ಪರ ಕಾಂಗ್ರೆಸ್ ಸದಾ ನಿಲ್ಲುತ್ತದೆ. ಅದಕ್ಕಾಗಿ ಪಕ್ಷದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಗೆಲುವಿಗೆ ಶ್ರಮಿಸೋಣ ಎಂದರು.

ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾತನಾಡಿ, ಪ್ರಧಾನಿ ಮೋದಿ ತಮ್ಮ ಹತ್ತು ವರ್ಷಗಳ ಅಧಿಕಾರಾವಧಿಯಲ್ಲಿ ನೀಡಿದ ಭರವಸೆಯಂತೆ ಕಪ್ಪು ಹಣ ವಾಪಸ್ ತರಲಿಲ್ಲ. ಬೆಲೆ ಏರಿಕೆ ನಿಯಂತ್ರಿಸದ ಕಾರಣ ಬಿಜೆಪಿಗೆ ಧಿಕ್ಕರಿಸಿ, ಸರ್ವ ಜನಾಂಗದ ತೋಟವನ್ನಾಗಿಸಿ ನುಡಿದಂತೆ ನಡೆದ ಕಾಂಗ್ರೆಸ್ ಪಕ್ಷದ ಕನಿಷ್ಠ 20 ಸಂಸದರನ್ನು ಆರಿಸಿ ಕಳಿಸಬೇಕಿದೆ. ಅದಕ್ಕಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಬೆಂಬಲಿಸಿ ಎಂದರು.

ಶಾಸಕರಾದ ಯು.ಬಿ. ಬಣಕಾರ, ಶ್ರೀನಿವಾಸ ಮಾನೆ, ಪ್ರಕಾಶ ಕೋಳಿವಾಡ, ಜಿ.ಎಸ್. ಪಾಟೀಲ, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಟಿ. ಈಶ್ವರ್‌, ಮಹಿಳಾ ಅಧ್ಯಕ್ಷೆ ಪ್ರೇಮಾ ಪಾಟೀಲ ಇತರರು ಮಾತನಾಡಿದರು.

ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ, ಡಿ.ಆರ್. ಪಾಟೀಲ, ರಾಮಣ್ಣ ಲಮಾಣಿ, ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ, ಪಕ್ಷದ ಮುಖಂಡರಾದ ಕೊಟ್ರೇಶಪ್ಪ ಬಸೇಗಣ್ಣಿ, ಯಾಶೀರ್ ಖಾನ್ ಪಠಾಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಮೈದೂರ, ಪ್ರಭುಗೌಡ ಬಿಷ್ಟನಗೌಡರ, ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಪ್ರಸನ್ನ ಹಿರೇಮಠ ಇತರರು ಇದ್ದರು.

ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಸಂಜೀವ್ ಕುಮಾರ ನೀರಲಗಿ ಕಾರ್ಯಕ್ರಮ ನಿರ್ವಹಿಸಿದರು.

ತತ್ವಸಿದ್ಧಾಂತಗಳಡಿ ಮತಯಾಚನೆ

ನಾನು ಜಾತಿ ಮತ್ತು ಧರ್ಮದ ಆಧಾರದಲ್ಲಿ ಮತಯಾಚಿಸದೆ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳಡಿಯಲ್ಲಿ ಮತಯಾಚಿಸಿ ತಮ್ಮ ಒಡನಾಡಿಯಾಗಿ ಸೇವೆ ಸಲ್ಲಿಸುವೆ. ನೀರಾವರಿ ಯೋಜನೆಗಳಿಗೆ, ಉದ್ಯೋಗಾವಕಾಶ ಹೆಚ್ಚಳ ಸೇರಿದಂತೆ ನಮ್ಮ ಪಕ್ಷದ ಮುಖಂಡರ ಮಾರ್ಗದರ್ಶನದಲ್ಲಿ ತಮ್ಮ ಸೋದರನಂತೆ ಸೇವೆ ಮಾಡಿ ವಿಶ್ವಾಸ ಉಳಿಸಿಕೊಳ್ಳುವೆ.

ಆನಂದಸ್ವಾಮಿ ಗಡ್ಡದೇವರಮಠ, ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ.

ವಿಷ ಬೀಜ ಬಿತ್ತುವ ಬಿಜೆಪಿನಮ್ಮ ಮನೆ ಮಗನಿಂತಿರುವ ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಪಕ್ಷದ ಶಕ್ತಿಯನ್ನು ತೋರಿಸೋಣ. ಬಿಜೆಪಿಯು ಚುನಾವಣೆ ಸಂದರ್ಭದಲ್ಲಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುತ್ತಿದ್ದು, ಮತದಾರರು ಇದಕ್ಕೆ ಮರುಳಾಗದೇ ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸಬೇಕು.

ಬಸವರಾಜ ಶಿವಣ್ಣನವರ, ಶಾಸಕರು ಬ್ಯಾಡಗಿ.

ಸ್ಪರ್ಧೆಗೆ ಹಿಂದೇಟು ಹಾಕಿಲ್ಲ: ಎಚ್‌.ಕೆ.ಪಾಟೀಲ

ಹಾವೇರಿ: ಲೋಕಸಭೆ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿ ವಿರುದ್ಧ ಸ್ಪರ್ಧಿಸಲು ನಾವು ಹಿಂದೇಟು ಹಾಕಿಲ್ಲ. ನಮ್ಮ ವಿರುದ್ಧ ನಿಲ್ಲಲು ಬಿಜೆಪಿಯವರು ಹಿಂದೇಟು ಹಾಕ್ತಿದ್ದಾರೆ. ರಾಜ್ಯದಲ್ಲಿ ಈ ಬಾರಿ 18ರಿಂದ 20 ಸೀಟು ಗೆಲ್ಲುತ್ತೇವೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಟಿಕೆಟ್ ಘೋಷಣೆಯಿಂದಾಗಿ ಶಿವಮೊಗ್ಗ, ಕೊಪ್ಪಳ ಲೋಕಸಭೆ ಕ್ಷೇತ್ರದ ಬಿಜೆಪಿಯಲ್ಲಿ ಅಸಮಾಧಾನ ಹೆಚ್ಚಾಗಿದೆ. ಹೀಗಾಗಿ ಬಿಜೆಪಿಯವರು ಹತಾಶ ಭಾವದಿಂದ ಹೀಗೆ ಹೇಳುತ್ತಿದ್ದಾರೆ ಎಂದು ಕುಟುಕಿದರು.ಹಾವೇರಿ ಲೋಕಸಭೆ ಮತಕ್ಷೇತ್ರದ ಜಿಲ್ಲಾ ಕಾಂಗ್ರೆಸ್ ಸಭೆ ನಡೆಯುತ್ತಿದ್ದು, ಸರ್ವಾನುಮತದಿಂದ ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಯುವಕ ಕಣಕ್ಕೆ ಇಳಿದ ಕಾರಣ ಕ್ಷೇತ್ರದಲ್ಲಿ ಯುವಕರ ಹುಮ್ಮಸು ಹೆಚ್ಚಾಗಿದೆ ಎಂದರು.