ಸಾರಾಂಶ
ಚಾಮರಾಜನಗರದ ಜನಾರ್ಧನ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್. ಭಾರತಿ ನೂತನ ಸಂವತ್ಸರದ ಪಂಚಾಂಗಗಳನ್ನು ಬಿಡುಗಡೆಗೊಳಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರವಿಶ್ವಾವಸುನಾಮ ಸಂವತ್ಸರದ ಒಂಟಿಕೊಪ್ಪಲ್, ಉಡುಪಿ ಉತ್ತರಾದಿ ಮತ್ತು ರಾಘವೇಂದ್ರ ಮಠದ ಪಂಚಾಂಗಗಳನ್ನು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಬಿಡುಗಡೆಗೊಳಿಸಿದರು.ಜನಾರ್ಧನ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿ ಮಾತನಾಡಿ, ಒಂಟಿಕೊಪ್ಪಲ್ ಪಂಚಾಂಗ ಬಹಳ ಹಳೆಯದು, ಹಿಂದಿನಿಂದಲೂ ಪಂಚಾಂಗಗಳು ಮನುಷ್ಯ ಜೀವನದಲ್ಲಿ ಹಾಸು ಹೊಕ್ಕಾಗಿವೆ ಎಂದರು. ಜನಾರ್ಧನ ಪ್ರತಿಷ್ಠಾನದ ಅಧ್ಯಕ್ಷ, ಅರ್ಚಕ ಅನಂತಪ್ರಸಾದ್ ಮಾತನಾಡಿ, ನಾವು ಯಾವುದೇ ಶುಭ ಮತ್ತು ಅಶುಭ ಕಾರ್ಯಗಳೇ ಇರಲಿ ಪಂಚಾಂಗ ನೋಡಿ ಮುಂದಿನ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ ಎಂದರು.
ಹಿಂದೂಗಳ ಸೌರಮಾನ, ಚಾಂದ್ರಮಾನ ರೀತಿಯ ಕಾಲಗಣನೆಗೆ ಪಂಚಾಂಗವೆಂದು ಕರೆಯುತ್ತಾರೆ. ಪಂಚಾಂಗವೆಂದರೆ, ಐದು ಅಂಗಗಳನ್ನು ಒಳಗೊಂಡದ್ದು. ತಿಥಿ, ವಾರ, ನಕ್ಷತ್ರ, ಯೋಗ, ಮತ್ತು ಕರಣಗಳು ಇವೇ ಆ ಐದು ಅಂಗಗಳು ಇವುಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ತಿಳಿಸುವಂಥದ್ದು ಪಂಚಾಂಗ ಎಂದರು.ವರ್ಷಪೂರ್ತಿ ಬರುವ ಎಲ್ಲಾ ಹಬ್ಬ ಹರಿದಿನಗಳು, ರಥೋತ್ಸವಗಳು, ಮಹಾತ್ಮರ ಜನ್ಮಾದಿನಾಚರಣೆಗಳ ಬಗ್ಗೆ ಪೂರ್ಣ ವಿವರಗಳನ್ನು ಪಂಚಾಂಗಗಳು ಕೊಡುತ್ತವೆ, ರಾಶಿ ಆಧಾರದ ಮೇಲೆ ವೃತ್ತಿ, ಹಣಕಾಸು, ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕ್ಷೇತ್ರಗಳ ವಿಶ್ಲೇಷಣೆ. ಈ ಭವಿಷ್ಯವಾಣಿಗಳು ಗುರು, ಶನಿ, ರಾಹು ಮತ್ತು ಕೇತುಗಳ ಸಂಚಾರಗಳ ಮೇಲೆ ಆಧಾರಿತವಾಗಿವೆ. ವೃತ್ತಿ, ಶಿಕ್ಷಣ, ಆದಾಯ, ಆರೋಗ್ಯ ಮತ್ತು ಕುಟುಂಬದಂತಹ ಜೀವನದ ಬಗ್ಗೆ ವಾರ್ಷಿಕ ಜಾತಕವು ನಿಮಗೆ ಒಂದು ದೃಷ್ಟಿಕೋನ ನೀಡುತ್ತದೆ. ಮೇಷದಿಂದ ಮೀನರಾಶಿಯವರೆಗಿನ ಪ್ರತಿಯೊಂದು ರಾಶಿಗೂ ಪ್ರತ್ಯೇಕ ವರದಿಯನ್ನು ಪಂಚಾಂಗಗಳು ನೀಡುತ್ತವೆ ಎಂದರು. ಈ ಸಂದರ್ಭದಲ್ಲಿ ರಾಜಶೇಖರ್, ಸಿ.ವಿ.ನಾಗರಾಜು ವಾಸುದೇವರಾವ್, ಎಚ್.ವಿ.ಪವನ್ಚಾರ್ ಇದ್ದರು.