ಕೊಪ್ಪಳ: ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ,ನಿವೃತ್ತಿಯಾದವರನ್ನು ಕರ್ತವ್ಯದಲ್ಲಿದ್ದವರು ಸ್ಮರಿಸಬೇಕು.ಈ ಕಾರಣಕ್ಕಾಗಿಯೇ ಪೊಲೀಸ್ ಧ್ವಜ ದಿನಾಚರಣೆ ಆಚರಿಸಲಾಗುತ್ತದೆ ಎಂದು ಕೊಪ್ಪಳ ಎಸ್ಪಿ ಡಾ. ರಾಮ್ ಎಲ್ ಅರಸಿದ್ದಿ ಹೇಳಿದರು.

ನಗರದ ಪೊಲೀಸ್ ಕವಾಯತ್ ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ೧೯೬೫ ಏ.೨ರಂದು ಕರ್ನಾಟಕ ರಾಜ್ಯ ಪೊಲೀಸ್ ಕಾಯ್ದೆ ಜಾರಿಗೆ ಬಂದಿದ್ದು,ಅದರ ನೆನಪಿಗಾಗಿ ಪೊಲೀಸ್ ಧ್ವಜ ದಿನಾಚರಣೆ ಪ್ರತಿ ವರ್ಷ ಆಚರಿಸಲಾಗುತ್ತಿದೆ. ಧ್ವಜ ದಿನಾಚರಣೆಯು ಇಲಾಖೆಯಲ್ಲಿರುವಾಗ ಸಲ್ಲಿಸಿರುವ ಅವಿಸ್ಮರಣಿಯ ಸೇವೆಯ ಸ್ಮರಣಾರ್ಥವಾಗಿ ಮತ್ತು ಇಲಾಖೆಯಲ್ಲಿ ನಿವೃತ್ತಿ ಹೊಂದಿದ ಸಿಬ್ಬಂದಿ ವರ್ಗದವರ ಯೋಗಕ್ಷೇಮ ಹಾಗೂ ಕಲ್ಯಾಣ ಯೋಜನೆ ಕೈಗೊಳ್ಳುವ ಉದ್ದೇಶವಾಗಿದೆ. ಈ ದಿನಾಚರಣೆಯ ಉದ್ದೇಶ ಕರ್ನಾಟಕ ರಾಜ್ಯ ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿ ಧ್ವಜಗಳ ಮಾರಾಟ ಮಾಡುವ ಮೂಲಕ ಅದರಿಂದ ಬಂದ ನಿಧಿ ಸಂಗ್ರಹಿಸಿದ ಹಣದಲ್ಲಿ ಶೇ. ೫೦ ಮೊತ್ತವನ್ನು ಕೇಂದ್ರ ನಿವೃತ್ತ ಪೊಲೀಸ್ ಅಧಿಕಾರಿ,ಸಿಬ್ಬಂದಿಗಳ ಆರೋಗ್ಯ ಭಾಗ್ಯ ಟ್ರಸ್ಟ್ ಹಾಗೂ ಇನ್ನುಳಿದ ಶೇ. ೫೦ ಮೊತ್ತ ಕೊಪ್ಪಳ ಜಿಲ್ಲಾ ಪೊಲೀಸ್ ಘಟಕದ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮ ನಿಧಿಗೆ ಜಮೆ ಮಾಡಿ ಮಾಡಲಾಗುತ್ತದೆ ಎಂದರು.

೨೦೧೮-೧೯ನೇ ಸಾಲಿನಿಂದ ನಿವೃತ್ತ ಪೊಲೀಸ್ ಅಧಿಕಾರಿ,ಸಿಬ್ಬಂದಿಗಳಿಗೆ ಆರೋಗ್ಯ ಭಾಗ್ಯ ಯೋಜನೆ ಪ್ರಾರಂಭಿಸಲಾಗಿದ್ದು, ಜಿಲ್ಲಾ ಪೊಲೀಸ್ ಘಟಕದಲ್ಲಿ ೨೦೨೫-೨೬ನೇ ಸಾಲಿನಲ್ಲಿ ೬೮ ಜನ ನಿವೃತ್ತ ಪೊಲೀಸ್ ಅಧಿಕಾರಿ,ಸಿಬ್ಬಂದಿ ಆರೋಗ್ಯ ಭಾಗ್ಯ ಯೋಜನೆಯಡಿ ಚಿಕಿತ್ಸೆಯ ಸೌಲಭ್ಯ ಪಡೆದ್ದಾರೆ. ೨೦೨೫-೨೬ನೇ ಸಾಲಿನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮ ನಿಧಿಯಿಂದ ವೈದ್ಯಕೀಯ ಚಿಕಿತ್ಸೆಯ ಧನ ಸಹಾಯ ಕೋರಿ ಒಟ್ಟು ೧೨೩ ಅರ್ಜಿಗಳು ಸ್ವೀಕೃತಗೊಂಡಿದ್ದು, ಎಲ್ಲ ಅರ್ಜಿಗಳನ್ನು ಇತರ್ಥ್ಯಪಡಿಸಿ ಒಟ್ಟು ₹೯.೧೨.೫೦೦ ಧನ ಸಹಾಯ ಒದಗಿಸಲಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿವೃತ್ತ ಪಿಎಸ್‌ಐ ಶ್ರೀಶೈಲ್‌ರಾವ್ ಕುಲಕರ್ಣಿ ತಮ್ಮ ಸೇವಾ ಅನುಭವ ಹಂಚಿಕೊಂಡರು. ೬ ತುಕಡಿಗಳಿಂದ ಆಕರ್ಷಕ ಕವಾಯಿತು ನಡೆಯಿತು. ೧೩ ಜನ ಸಿಬ್ಬಂದಿಗಳಿಗೆ ಅಧಿಕಾರಿಗಳಿಗೆ ಗೌರವ ಸನ್ಮಾನ ನೆರವೇರಿತು. ಎಎಸ್‌ಪಿ ಹೇಮಂತ್ ಕುಮಾರ್ ಸ್ವಾಗತಿಸಿದರೆ, ಡಿಎಸ್ಪಿ ಮುತ್ತಣ್ಣ ಸರವಗೋಳ ವಂದಿಸಿದರು. ನಗರ ಠಾಣೆಯ ಕೆ.ಎಚ್. ಕಲಕಬಂಡಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಅಧಿಕಾರಿಗಳು ಸಾರ್ವಜನಿಕರು ಹಾಗೂ ನಿವೃತ್ತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿದ್ದರು.