ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ನಗರದ ಹೊರವಲಯ ಅರಸೀಕೆರೆ ರಸ್ತೆ, ಬಿ. ಕಾಟಿಹಳ್ಳಿ ಬಳಿ ಇರುವ ಸಾರಿಗೆ ಇಲಾಖೆಯ ಆವರಣದಲ್ಲಿ ಗುರುವಾರ ಸುಮಾರು ೬೩ ಲಕ್ಷ ರು. ವೆಚ್ಚದಲ್ಲಿ ನವೀಕರಣಗೊಂಡ ಕಟ್ಟಡ ಹಾಗೂ ದುರಸ್ತಿಗೊಂಡ ಆರ್.ಟಿ.ಒ. ಕಚೇರಿಯನ್ನು ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಟೇಪ್ ಕತ್ತರಿಸಿ ಪೂಜೆ ಸಲ್ಲಿಸುವುದರ ಮೂಲಕ ಉದ್ಘಾಟಿಸಿದರು. ನಂತರ ಮಾಧ್ಯಮದೊಂದಿಗೆ ಮಾತನಾಡಿ, ಆರ್.ಟಿ.ಒ ಕಚೇರಿ ದುರಸ್ತಿಯಲ್ಲಿತ್ತು. ಬಹಳ ಹಳೆಯದಾದ ಕಟ್ಟಡ. ಸಾರಿಗೆ ಸಚಿವರಾದ ರಾಮಲಿಂಗರೆಡ್ಡಿ ಅವರನ್ನು ಜಿಲ್ಲಾ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ. ಕೃಷ್ಣೇಗೌಡ ಮತ್ತು ಸಾರಿಗೆ ಅಧಿಕಾರಿ ರಾಜಕುಮಾರ್ ಅವರು ಸೇರಿದಂತೆ ಎಲ್ಲಾರೂ ಕೂಡ ಮನವಿ ಮಾಡಲಾಯಿತು. ನಂತರದಲ್ಲಿ ೬೩ ಲಕ್ಷ ರು. ಗಳ ಅನುದಾನ ಬಿಡುಗಡೆ ಮಾಡಿದರು. ಆರ್ಟಿಒ ಇಲಾಖೆ ದುರಸ್ತಿ ಮತ್ತು ಗುಣಮಟ್ಟದ ಹೊಸ ಕೊಠಡಿಯನ್ನು ಕೂಡ ನಿರ್ಮಿಸಿ ಉದ್ಘಾಟಿಸಲಾಗಿದೆ ಎಂದರು.ಹಾಸನ ಆರ್ಟಿಒ ಇಲಾಖೆಯಲ್ಲಿ ಯಾವ ದೊಡ್ಡ ಮಟ್ಟದ ಸಮಸ್ಯೆ ಯಾವುದು ಕಾಣಿಸುತ್ತಿಲ್ಲ. ಪ್ರಾದೇಶಿಕ ಸಾರಿಗೆ ಸಂಸ್ಥೆಯು ಉತ್ತಮವಾದ ಕೆಲಸ ಮಾಡಿಕೊಂಡು ಹೋಗುತ್ತಿದೆ ಇನ್ನು ಹೊರಭಾಗದಲ್ಲಿ ಬೈಪಾಸ್ ರಸ್ತೆ ಮಧ್ಯೆ ಕಾಮಗಾರಿ ನಡೆಯುತ್ತಿರುವುದರಿಂದ ನಗರ ಭಾಗದಲ್ಲಿ ಹೆಚ್ಚು ವಾಹನಗಳು ಸಂಚರಿಸುತ್ತಿದೆ. ಆರ್ಟಿಒ ಇಲಾಖೆಯವರು ಗಮನ ವಹಿಸಬೇಕು ಎಂದು ಹೇಳಿದರು. ಇಲಾಖೆಯಲ್ಲಿ ಇರುವ ಹೆಚ್ಚಿನ ಕೆಲಸ ನಿರ್ವಹಿಸಲು ಇನ್ನಷ್ಟು ಹೆಚ್ಚಿನ ಕೊಠಡಿಗಳ ಅಗತ್ಯವಿದೆ ಅವುಗಳನ್ನು ಶೀಘ್ರವಾಗಿ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು. ಹೊರ ಭಾಗದಲ್ಲಿ ಬೈಪಾಸ್ ರಸ್ತೆ ಮಧ್ಯೆ ಕಾಮಗಾರಿ ನಡೆಯುತ್ತಿರುವುದರಿಂದ ನಗರ ಭಾಗದಲ್ಲಿ ಹೆಚ್ಚು ವಾಹನಗಳು ಸಂಚರಿಸುತ್ತಿದೆ. ಆರ್ಟಿಒ ಇಲಾಖೆಯವರು ಗಮನವಹಿಸಬೇಕು ಎಂದು ಸೂಚಿಸಿದರು. ಸಹಾಯಕ ಸಾರಿಗೆ ಅಧಿಕಾರಿ ಮತ್ತು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ. ಕೃಷ್ಣೇಗೌಡ ಮಾತನಾಡಿ, ನಮ್ಮ ಆರ್ಟಿಒ ಇಲಾಖೆಯಲ್ಲಿ ಸಿಬ್ಬಂದಿ ಬಹಳ ಕಡಿಮೆ ಇದ್ದು, ಐದು ಜನ ಇದ್ದ ಇನ್ಸ್ಪೆಕ್ಟರ್ ಈಗ ನಾಲ್ಕು ಜನರು ಮಾತ್ರ ಇದ್ದಾರೆ. ಬೇರೆ ಕಡೆಯಿಂದ ಒಟ್ಟು ೧೫ ಇಲಾಖೆ ಜೀಪುಗಳು ಬಂದು ವಾಹನ ತಪಾಸಣೆಯಲ್ಲಿ ಮೂರು ದಿವಸದಲ್ಲೆ ೪೦೦ ಕೇಸು ದಾಖಲಿಸಲಾಗಿದೆ. ತಪಾಸಣೆ ವೇಳೆ ಲೋಕಲ್ನಲ್ಲಿ ಅನೇಕರು ಗಲಾಟೆ ಮಾಡಿದರೂ ವಿಧಿಯಿಲ್ಲದೇ ಕೇಸು ದಾಖಲಿಸಬೇಕಾಯಿತು. ಬೇರೆ ರಾಜ್ಯಗಳಿಂದ ವಾಹನ ಬಂದಾಗ ಒಂದೊಂದು ವಾಹನಕ್ಕೆ ೧ ಲಕ್ಷದಿಂದ ನಾಲ್ಕು ಲಕ್ಷದವರೆಗೂ ಟ್ಯಾಕ್ಸ್ ಕಟ್ಟುತ್ತಾರೆ. ವಾಹನ ಚಾಲಕರು ಸರಿಯಾದ ಸಮಯಕ್ಕೆ ಎಫ್.ಸಿ. ಮಾಡಿಸಿ ಟ್ಯಾಕ್ಸ್ ಕಟ್ಟಬೇಕು. ಇನ್ನು ಸರಿಯಾಗಿ ವಾಯುಮಾಲಿನ್ಯ ತಡೆಗಟ್ಟುವ ವಾಹನವನ್ನು ಬಳಸಿ ಎಂದು ವಾಹನ ಮಾಲಿಕರಲ್ಲಿ ಮನವಿ ಮಾಡುತ್ತೇವೆ ಎಂದರು.
ಕಾನೂನು ಉಲ್ಲಂಘನೆ ಮಾಡದೇ ವಾಹನ ಚಲಾಯಿಸಿ ಏನಾದರೂ ಕಾನೂನು ಉಲ್ಲಂಘನೆ ಮಾಡಿದರೇ ಯಾವ ಮುಲಾಜು ಇಲ್ಲದೇ ದಂಡ ಹಾಕುತ್ತೇವೆ ಎಂದು ಎಚ್ಚರಿಸಿದರು. ಒಂದೇ ವಾಹನದ ನಂಬರನ್ನು ವಾಹನಕ್ಕೆ ಬಳಕೆ ಮಾಡುತ್ತಿರುವುದು ಕಂಡು ಬಂದರೇ ಅಂತಹ ವಾಹನ ಕಂಡರೇ ನಮಗೆ ತಿಳಿಸಿ ಎಂದು ಕೋರಿದರು. ಶಾಲಾ ವಾಹನದ ಬಗ್ಗೆಯೂ ಗಮನಹರಿಸಲಾಗಿದ್ದು, ಮಕ್ಕಳ ಹಿತಾ ದೃಷ್ಠಿಯಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.ಆರ್ಟಿಒ ಇಲಾಖೆ ಅಧಿಕಾರಿ ರಾಜಕುಮಾರ್ ಮಾತನಾಡಿ, ವಾಯುಮಾಲಿನ್ಯ ಹೆಚ್ಚಿಸುವ ವಾಹನ ಸೇರಿದಂತೆ ಇತರೆ ಉಲ್ಲಂಘನೆಯ ಸುಮಾರು ೪೦೦ ವಾಹನಗಳಿಗೆ ಕೇಸು ದಾಖಲಿಸಲಾಗಿದೆ. ಮೂರು ದಿನದಲ್ಲೇ ೨೦ ಲಕ್ಷ ರು.ದಂಡ ವಿಧಿಸಲಾಗಿದೆ. ಹೆಚ್ಚು ಹೊಗೆ ಬರುವ ವಾಹನಗಳ ಬಗ್ಗೆ ಗಮನಹರಿಸಿ ಅಂತವರಿಗೆ ದಂಡ ವಿಧಿಸುವ ಪ್ರಕ್ರಿಯೆ ಹೆಚ್ಚು ಮಾಡಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಆರ್.ಟಿ.ಒ. ಇಲಾಖೆಯ ನೂತನ ವಾಹನದ ಕೀಯನ್ನು ಶಾಸಕರಾದ ಎಚ್.ಪಿ. ಸ್ವರೂಪ್ ಹಸ್ತಾಂತರಿಸಿದರು.
ಇದೇ ವೇಳೆ ಆರ್.ಟಿ.ಒ. ಇಲಾಖೆ ಸಾರಿಗೆ ಅಧಿಕಾರಿ ರಾಜಕುಮಾರ್, ಯಶವಂತ್, ಕಾರ್ಯಪಾಲಕ ಅಭಿಯಂತರ ಅಣ್ಣಪ್ಪ, ನವ್ಯಶ್ರೀ ಇತರರು ಉಪಸ್ಥಿತರಿದ್ದರು.