ನೇಕಾರರು ಸಂಘಟಿತವಾದ್ರೆ ಮಾತ್ರ ಪ್ರಾತಿನಿಧ್ಯ ಸಾಧ್ಯ: ಕೀರ್ತಿ ಗಣೇಶ

| Published : Jun 27 2025, 12:48 AM IST

ನೇಕಾರರು ಸಂಘಟಿತವಾದ್ರೆ ಮಾತ್ರ ಪ್ರಾತಿನಿಧ್ಯ ಸಾಧ್ಯ: ಕೀರ್ತಿ ಗಣೇಶ
Share this Article
  • FB
  • TW
  • Linkdin
  • Email

ಸಾರಾಂಶ

ನೇಕಾರ ಸಮಾಜಕ್ಕೆ ರಾಜಕೀಯ ಶಕ್ತಿಯ ಕೊರತೆ ಇದೆ. ಸಮಾಜದಲ್ಲಿ ಸಂಘಟನೆಯಾದಾಗ ಮಾತ್ರ ರಾಜ್ಯದಲ್ಲಿ ನೇಕಾರ ಸಮಾಜ ರಾಜಕೀಯ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಪ್ರಬಲವಾಗಿ ಬೆಳೆಯಲು ಸಾಧ್ಯ. ರಾಜ್ಯದಲ್ಲಿ ಸುಮಾರು 60ಲಕ್ಷಕ್ಕೂ ಹೆಚ್ಚು ನೇಕಾರರಿದ್ದು, ನಮ್ಮಲ್ಲಿ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿದೆ. ಸಂಘಟಿತ ಹೋರಾಟದಿಂದ ರಾಜಕೀಯ ಪ್ರಾಬಲ್ಯ ದೊರಕಿಸಿಕೊಳ್ಳಲು ಸಾಧ್ಯವೆಂದು ಬಸವರಾಜ ಪಟ್ಟದಾರ್ಯ ಶ್ರೀಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ನೇಕಾರ ಸಮಾಜಕ್ಕೆ ರಾಜಕೀಯ ಶಕ್ತಿಯ ಕೊರತೆ ಇದೆ. ಸಮಾಜದಲ್ಲಿ ಸಂಘಟನೆಯಾದಾಗ ಮಾತ್ರ ರಾಜ್ಯದಲ್ಲಿ ನೇಕಾರ ಸಮಾಜ ರಾಜಕೀಯ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಪ್ರಬಲವಾಗಿ ಬೆಳೆಯಲು ಸಾಧ್ಯ. ರಾಜ್ಯದಲ್ಲಿ ಸುಮಾರು 60ಲಕ್ಷಕ್ಕೂ ಹೆಚ್ಚು ನೇಕಾರರಿದ್ದು, ನಮ್ಮಲ್ಲಿ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿದೆ. ಸಂಘಟಿತ ಹೋರಾಟದಿಂದ ರಾಜಕೀಯ ಪ್ರಾಬಲ್ಯ ದೊರಕಿಸಿಕೊಳ್ಳಲು ಸಾಧ್ಯವೆಂದು ಬಸವರಾಜ ಪಟ್ಟದಾರ್ಯ ಶ್ರೀಗಳು ಹೇಳಿದರು.

ಗುರುವಾರ ಪಟ್ಟಣದ ಶ್ರೀಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠಕ್ಕೆ ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮ ಅಧ್ಯಕ್ಷ ಕೀರ್ತಿ ಗಣೇಶ ಭೇಟಿ ನೀಡಿದ ಸಂದರ್ಭದಲ್ಲಿ ಅವರಿಗೆ ಸನ್ಮಾನಿಸಿ ಮಾತನಾಡಿ, ಒಳಪಂಗಡಗಳು ಸೇರಿ ಸಮಾಜದಲ್ಲಿ ಒಗ್ಗಟ್ಟು ಮೂಡಬೇಕಿದೆ. ಎಲ್ಲ ನೇಕಾರರು ಒಂದು ಎನ್ನುವ ಕೂಗು ಕೇಳಿದಾಗ ಮಾತ್ರ ನೇಕಾರರಿಗೆ ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಶಕ್ತಿ ದೊರೆಯುತ್ತದೆ ಎಂದು ಹೇಳಿದರು.

ಗುರುಸಿದ್ದ ಪಟ್ಟದಾರ್ಯ ಶ್ರೀಗಳು ಮಾತನಾಡಿ, ಚಿಕ್ಕ ವಯಸ್ಸಿನಲ್ಲಿ ರಾಜಕೀಯವಾಗಿ ಎತ್ತರಕ್ಕೆ ಬೆಳೆದಿದ್ದೀರಿ. ಸಮಾಜದಲ್ಲಿ ಸಂಘಟನೆ ಮೂಡುವ ಮೂಲಕ ನೇಕಾರರಿಗೆ ಸರ್ಕಾರಿ ಸೌಲಭ್ಯಗಳು ದೊರೆಯುವಂತೆ ಅವಕಾಶ ಕಲ್ಪಿಸಿ ಎಂದು ಸಲಹೆ ನೀಡಿದರು.

ಡಿ.ದೇವರಾಜ ಅರಸ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಅಧ್ಯಕ್ಷ ಕೀರ್ತಿ ಗಣೇಶ ಸನ್ಮಾನ ಸ್ವೀಕರಿಸಿ ಮಾತನಾಡಿ, ನೇಕಾರರಲ್ಲಿ ಒಗ್ಗಟ್ಟು ಮೂಡಿಸುವ ಹಾಗೂ ಹೆಚ್ಚು ಸರ್ಕಾರಿ ಸೌಲಭ್ಯಗಳು ಸಿಗುವಂತೆ ಮಾಡುತ್ತೇನೆ. ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಶ್ರಮಿಸುತ್ತೇನೆ. ನಿಗಮದಿಂದ ಸಿಗುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿ ನೇಕಾರರಿಗೆ ದೊರಕಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದರು.

ನಿಗಮದ ಜಿಲ್ಲಾ ವ್ಯವಸ್ಥಾಪಕ ಎಂ.ಜಿ. ಬಿರಾದಾರ, ಅಧ್ಯಕ್ಷರ ಆಪ್ತ ಸಹಾಯಕ ಲಕ್ಷ್ಮೀಕಾಂತ ಕೆಂದೂರ, ತಾಲೂಕು ಅಭಿವೃದ್ಧಿ ಅಧಿಕಾರಿ ಮಹಾಂತೇಶ ಶಿವನಕ್ಕನವರ, ಜಿಲ್ಲಾ ಅಭಿವೃದ್ಧಿ ಅಧಿಕಾರಿ ಗುರುರಾಜ ಕುಲಕರ್ಣಿ, ರವಿ ಬಾಡಗಿ, ನಾರಾಯಣ ದಡಿ, ಪತ್ರಕರ್ತ ಮಲ್ಲಿಕಾರ್ಜುನ ರಾಜನಾಳ, ವಿವೇಕಾನಂದ ಹುಲ್ಯಾಳ ಇದ್ದರು.