-ಮಹತ್ವದ ಯೋಜನೆ ಶೀಘ್ರ ಅನುಷ್ಠಾನಕ್ಕೆ ಶಾಸಕ ಎಂ. ವೈ. ಪಾಟೀಲ ಕೇಂದ್ರ ರಸ್ತೆ ಸಾರಿಗೆ ರಸ್ತೆ ಸಾರಿಗೆ ಸಂಸ್ಥೆಗಳ ಸಂಘದ ಉಮಾಶಂಕರ್ ಗೆ ಮನವಿ
-----ಕನ್ನಡಪ್ರಭ ವಾರ್ತೆ ದೇವಲ ಗಾಣಗಾಪೂರ
ಅಫಜಲಪುರ ಸಮಗ್ರ ಅಭಿವೃದ್ಧಿ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಹಲವು ಮಹತ್ವದ ಯೋಜನೆಗಳನ್ನು ಶೀಘ್ರ ಅನುಷ್ಠಾನಗೊಳಿಸುವಂತೆ ಶಾಸಕ ಎಂ. ವೈ. ಪಾಟೀಲ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಹಾಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಸಂಘದ (ಎಎಸ್ಆರ್ಟಿಯು) ಅಧ್ಯಕ್ಷ ವಿ. ಉಮಾಶಂಕರ್, ಐಎಎಸ್ ಅವರಿಗೆ ಮನವಿ ಸಲ್ಲಿಸಿದರು.ನವದೆಹಲಿಯಲ್ಲಿ ನಡೆದ ಸೌಹಾರ್ದಯುತ ಭೇಟಿಯ ವೇಳೆ ಕ್ಷೇತ್ರದ ರಸ್ತೆ ಸಂಪರ್ಕ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಹಾಗೂ ವಿದ್ಯುತ್ ಚಾಲಿತ ಬಸ್ಗಳ ಹಂಚಿಕೆ ಸೇರಿದಂತೆ ವಿವಿಧ ಅಭಿವೃದ್ಧಿ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ದೇವಲ ಗಾಣಗಾಪುರ ಕ್ಷೇತ್ರಕ್ಕೆ ಸಮಗ್ರ ರಸ್ತೆ ಸಂಪರ್ಕ ಕಲ್ಪಿಸುವಲ್ಲಿ ಚೌಡಾಪುರದಿಂದ ದೇವಲ ಗಾಣಗಾಪುರಕ್ಕೆ ಚೆನ್ನೈ–ಸೂರತ್ ಆರ್ಥಿಕ ಕಾರಿಡಾರ್ಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಿಸುವುದು ಹಾಗೂ ಕಲಬುರಗಿಯಿಂದ ಅತನೂರ (ಚೆನ್ನೈ–ಸೂರತ್ ದ್ರುತಗತಿ ಹೆದ್ದಾರಿ ಸಂಪರ್ಕ ಕೇಂದ್ರ)ವರೆಗೆ ರಾಷ್ಟ್ರೀಯ ಹೆದ್ದಾರಿ–150ಇ ಅನ್ನು ನಾಲ್ಕು ಪಥಗಳ ಹೆದ್ದಾರಿಯಾಗಿ ಅಭಿವೃದ್ಧಿಪಡಿಸುವಂತೆ ಮನವಿ ಮಾಡಲಾಯಿತು. ಈ ಯೋಜನೆ ಜಾರಿಯಾದರೆ ಸಿರಸಗಿ, ಹಡಗಿಲ್, ಕೊಳ್ಳೂರ, ಗೊಬ್ಬೂರ(ಬಿ) ಹಾಗೂ ಚೌಡಾಪುರ ಸೇರಿದಂತೆ ಅನೇಕ ಗ್ರಾಮಗಳಿಗೆ ಉತ್ತಮ ರಸ್ತೆ ಸಂಪರ್ಕ ದೊರೆತು, ಪ್ರಾದೇಶಿಕ ಅಭಿವೃದ್ಧಿ, ಪ್ರವಾಸೋದ್ಯಮ, ವ್ಯಾಪಾರ ಮತ್ತು ಸಾರಿಗೆ ವ್ಯವಸ್ಥೆಗೆ ಹೊಸ ಚೈತನ್ಯ ದೊರೆಯಲಿದೆ ಎಂದು ಮನವಿ ಮಾಡಲಾಯಿತು.
ಮಹಾರಾಷ್ಟ್ರ ಗಡಿಯ ಮುರ್ರುಮ್ನಿಂದ ವಿಜಯಪುರ ಸಂಪರ್ಕ ಕೇಂದ್ರದವರೆಗೆ ರಾಷ್ಟ್ರೀಯ ಹೆದ್ದಾರಿ–548ಬಿ ಅನ್ನು ಡಾಂಬರು ಬದಿಪಟ್ಟಿ ಹೊಂದಿದ ಎರಡು ಪಥದ ರಸ್ತೆಯಾಗಿ ಅಗಲೀಕರಣ ಹಾಗೂ ಸಮಗ್ರ ಸುಧಾರಣಾ ಕಾಮಗಾರಿಯನ್ನು ಶೀಘ್ರ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಲಾಯಿತು.
ಇದರಿಂದ, ಅಫಜಲಪುರ ಸೇರಿದಂತೆ ಈ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಸುರಕ್ಷಿತ, ಸುಗಮ ಹಾಗೂ ವೇಗದ ಸಂಚಾರ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಲಿದೆ ಎಂದು ಶಾಸಕ ಪಾಟೀಲ್ ಅಧಿಕಾರಿಗಳಿಗೆ ಮನವರಿಕೆ ಮಾಡಿದರು.ಕೆಕೆಆರ್ಟಿಸಿ ಅಧ್ಯಕ್ಷ ಅರುಣಕುಮಾರ ಎಂ.ವೈ ಪಾಟೀಲ್ ಮಾತನಾಡಿ, ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ವಿದ್ಯುತ್ ಚಾಲಿತ ವಾಹನ ಯೋಜನೆಯಡಿ ಈಗಾಗಲೇ ಮಂಜೂರಾಗಿರುವ ವಿದ್ಯುತ್ ಚಾಲಿತ ಬಸ್ಗಳ ಜೊತೆಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಹೆಚ್ಚುವರಿ ವಿದ್ಯುತ್ ಚಾಲಿತ ಬಸ್ಗಳನ್ನು ಹಂಚಿಕೆ ಮಾಡುವಂತೆಯೂ ಕೋರಿದರಲ್ಲದೆ, ಇದರಿಂದ ಪರಿಸರ ಸ್ನೇಹಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತಷ್ಟು ಬಲಗೊಂಡು, ಪ್ರಯಾಣಿಕರಿಗೆ ಗುಣಮಟ್ಟದ ಹಾಗೂ ಆಧುನಿಕ ಸಾರಿಗೆ ಸೇವೆ ಒದಗಿಸಲು ಅನುಕೂಲವಾಗಲಿದೆ ಎಂದು ಮನವಿಯಲ್ಲಿ ಮಾಡಿದರು.
ಈ ಸಂದರ್ಭದಲ್ಲಿ ಕಲಬುರಗಿ, ಬೀದರ್ ಹಾಗೂ ಯಾದಗಿರಿ ಹಾಲು ಒಕ್ಕೂಟದ ಅಧ್ಯಕ್ಷ ಆರ್. ಕೆ. ಪಾಟೀಲ ಉಪಸ್ಥಿತರಿದ್ದರು.ಫೋಟೊ
ಅಫಜಲಪುರ ಸಮಗ್ರ ಅಭಿವೃದ್ಧಿ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಹಲವು ಮಹತ್ವದ ಯೋಜನೆಗಳನ್ನು ಶೀಘ್ರ ಅನುಷ್ಠಾನಗೊಳಿಸುವಂತೆ ಶಾಸಕ ಎಂ. ವೈ. ಪಾಟೀಲ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಹಾಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಸಂಘದ ಅಧ್ಯಕ್ಷ ವಿ. ಉಮಾಶಂಕರ್, ಐಎಎಸ್ ಅವರಿಗೆ ಮನವಿ ಸಲ್ಲಿಸಿದರು.