ಸಾರಾಂಶ
-ರೈತ ಸಂಘದಿಂದ ಬೆಳಗಾವಿ ಸುವರ್ಣ ಸೌಧದ ಎದುರು ಧರಣಿ । ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮನವಿ
-----ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲೆಯ ರೈತರ ವಿವಿಧ ಬೇಡಿಕೆ ಹಾಗೂ ಮೂರೂ ನೂತನ ತಾಲೂಕುಗಳಲ್ಲಿ ತಾಲೂಕು ಕಚೇರಿಗಳ ಆರಂಭಿಸುವುದರ ಜೊತೆಗೆ ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬೆಳಗಾವಿಯ ಸುವರ್ಣ ಸೌಧದ ಎದುರು ರಾಜ್ಯಾಧ್ಯಕ್ಷ ವಾಸುದೇವ್ ಮೇಟಿ ಅವರ ನೇತೃತ್ವದಲ್ಲಿ ಧರಣಿ ಹಮ್ಮಿಕೊಳ್ಳಲಾಗಿತ್ತು.ಈ ವೇಳೆ ಧರಣಿ ಸ್ಥಳಕ್ಕೆ ಸರ್ಕಾರದ ಪರವಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಗಮಿಸಿದಾಗ, ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲನಗೌಡ ಹಗರಟಗಿ ಹಾಗೂ ಇನ್ನಿತರರು ಸೇರಿ ಸಚಿವರಿಗೆ ಮನವಿ ಸಲ್ಲಿಸಿದರು. ಜಿಲ್ಲೆಯಲ್ಲಿ ನೂತನವಾಗಿ ಘೋಷಣೆ ಮಾಡಿರುವ ಮೂರು ತಾಲೂಕುಗಳಾದ ಗುರುಮಠಕಲ್, ವಡಗೇರಾ ಮತ್ತು ಹುಣಸಗಿ ತಾಲೂಕು ಕೇಂದ್ರಗಳಲ್ಲಿ ವಿವಿಧ ಸರ್ಕಾರ ಕಚೇರಿಗಳ ಆರಂಭಿಸುವುದರ ಜೊತೆಗೆ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕು ಮತ್ತು ಆಕಸ್ಮಿಕ ಮಳೆಗೆ ಭತ್ತ, ಹತ್ತಿ ಬೆಳೆ ಹಾನಿಯಾಗಿದ್ದು, ಇತ್ತೀಚಿಗೆ ತೊಗರಿ ಬೆಳೆಗೆ ನೆಟೆ ರೋಗ ಬಂದಿದ್ದು, ತುಂಬಾ ಹಾನಿಯಾಗಿದೆ. ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು.
ರೈತರು ಬೆಳೆವಿಮೆ ತುಂಬಿದ್ದು, ಕೆಲ ಬೆಳೆವಿಮಾ ಕಂಪನಿಗಳು ರೈತರಿಗೆ ಸಮರ್ಪಕವಾಗಿ ಹಣ ನೀಡದೆ ಮೋಸ ಮಾಡುತ್ತಿದ್ದಾರೆ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಪ್ರಮುಖವಾಗಿ ವಡಗೇರಾ ಪಟ್ಟಣಕ್ಕೆ ಶಾಶ್ವತ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸುವಲ್ಲಿ ಸರ್ಕಾರ ಮುಂದಾಗಬೇಕು ಸೇರಿದಂತೆ ರೈತರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು, ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು. ಕಲಬುರಗಿ ಜಿಲ್ಲಾಧ್ಯಕ್ಷ ಪ್ರಶಾಂತ್ ಗೌಡ ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಶರಣಪ್ಪ ಸಾಹುಕಾರ ತಡಿಬಿಡಿ, ಹುಣಸಗಿ ತಾಲೂಕಾಧ್ಯಕ್ಷ ಮಲ್ಲನಗೌಡ ಬಿರಾದಾರ್, ಕಾರ್ಯಾಧ್ಯಕ್ಷ ಮಲ್ಲೇಶಪ್ಪಗೌಡ ಪಾಟೀಲ್, ವಡಗೇರಾ ತಾಲೂಕಾಧ್ಯಕ್ಷ ವಿದ್ಯಾಧರ್ ಜಾಕಾ, ಗುರು ಗುಂಡಕನಾಳ, ಪರಶುರಾಮ್ ಇಸ್ಲಾಂಪುರ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು, ರೈತ ಮುಖಂಡರು ಇದ್ದರು.
-----ಫೋಟೊ: ಯಾದಗಿರಿ ಜಿಲ್ಲೆಯ ಹೊಸ ಮೂರು ತಾಲೂಕುಗಳಲ್ಲಿ ಕಚೇರಿಗಳ ಆರಂಭಿಸಲು ಹಾಗೂ ಅಭಿವೃದ್ಧಿ ಪಡಿಸುವಂತೆ ಆಗ್ರಹಿಸಿ ರೈತ ಸಂಘದ ವತಿಯಿಂದ ಬೆಳಗಾವಿ ಸುವರ್ಣ ಸೌಧದ ಎದುರುಗಡೆ ಧರಣಿ ನಡೆಸಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಲಾಯಿತು.
12ವೈಡಿಆರ್1