ಸಾರಾಂಶ
ಸಾರ್ವಜನಿಕರಿಂದ ಹಲ್ಲೆಯಾಗುವ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಿಬ್ಬಂದಿ ರಕ್ಷಣೆಗಾಗಿ ಗನ್ ಪರವಾನಗಿ ಪಡೆಯಲು ಅನುಮತಿ ನೀಡುವಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ನಿರ್ವಾಹಕರೊಬ್ಬರು ಪತ್ರ ಬರೆದಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿಎಂಟಿಸಿ ನಿರ್ವಾಹಕ ಮತ್ತು ಚಾಲಕರ ಮೇಲೆ ಪ್ರಯಾಣಿಕರು ಹಾಗೂ ಸಾರ್ವಜನಿಕರಿಂದ ಹಲ್ಲೆಯಾಗುವ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಿಬ್ಬಂದಿ ರಕ್ಷಣೆಗಾಗಿ ಗನ್ ಪರವಾನಗಿ ಪಡೆಯಲು ಅನುಮತಿ ನೀಡುವಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ನಿರ್ವಾಹಕರೊಬ್ಬರು ಪತ್ರ ಬರೆದಿದ್ದಾರೆ.ಐಟಿಪಿಎಲ್ ಬಸ್ ನಿಲ್ದಾಣ ಬಳಿ ಬಿಎಂಟಿಸಿ ವೋಲ್ವೋ ಬಸ್ ನಿರ್ವಾಹಕನ ಮೇಲೆ ಪ್ರಯಾಣಿಕನೋರ್ವ ಮಾರಣಾಂತಿಕ ಹಲ್ಲೆ ಮಾಡಿದ್ದ. ಬಸ್ನ ದ್ವಾರದ ಬಳಿ ನಿಲ್ಲದೆ ಒಳಗೆ ಬರುವಂತೆ ಹೇಳಿದ್ದಕ್ಕಾಗಿ ಪ್ರಯಾಣಿಕ ಈ ಹಲ್ಲೆ ಮಾಡಿದ್ದ. ಈ ರೀತಿಯ ಪ್ರಕರಣಗಳು ಪದೇಪದೆ ಮರುಕಳಿಸುತ್ತಿದೆ. ಹಲವು ಕಾರಣದಿಂದಾಗಿ ಮಾನಸಿಕವಾಗಿ ಕುಗ್ಗಿರುವ ಸಿಬ್ಬಂದಿ ಮೇಲೆ ಹಲ್ಲೆ ನಡೆಯುತ್ತಿರುವುದು ಖಂಡನೀಯ. ಹೀಗಾಗಿ ಬಿಎಂಟಿಸಿ ಚಾಲಕ ಮತ್ತು ನಿರ್ವಾಹಕರು ಜೀವ ರಕ್ಷಣೆಗಾಗಿ ಗನ್ ಪರವಾಗಿ ಪಡೆಯಲು ಅನುಮತಿ ಕೊಡಿಸುವಂತೆ ಯೋಗೀಶ್ ಗೌಡ ಎಂಬ ಚಾಲಕ ಕಂ ನಿರ್ವಾಹಕರು ಪತ್ರದಲ್ಲಿ ಕೋರಿದ್ದಾರೆ.