ಸಾರಾಂಶ
ಕಾಲೇಜಿನ ಆಡಳಿತ ಅಧಿಕಾರಿ ಪ್ರೊ.ಬಾಲಕೃಷ್ಣ ಶೆಟ್ಟಿ ಮಾತನಾಡಿ ನಮ್ಮ ಜೀವನದ ಸಾರ್ಥಕತೆಯ ಕ್ಷಣ ಇನ್ನೊಬ್ಬರ ಮುಖದಲ್ಲಿ ನಗು ಮೂಡಿಸಿದಾಗ ಪಡೆಯಲು ಸಾಧ್ಯ ಎಂದರು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಸಂಶೋಧನೆಯು ಮಾನಸಿಕ ಸದೃಢತೆ, ಶ್ರಮ, ಅಧ್ಯಯನ, ತರ್ಕ, ತಾರ್ಕಿಕ ಚಿಂತನೆಗಳ ಒಟ್ಟು ಫಲ ಎಂದು ಸಿದ್ದಕಟ್ಟೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಅಜಕ್ಕಳ ಗಿರೀಶ್ ಭಟ್ ನುಡಿದರು.ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಫೋರಂ ವತಿಯಿಂದ ಗುರುವಾರ ಪಿಜಿ ಸೆಮಿನಾರ್ ಹಾಲ್ನಲ್ಲಿ ನಡೆದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಶೋಧನಾ ಕ್ಷೇತ್ರಕ್ಕೆ ಬರುವ ಮೊದಲು ವಿದ್ಯಾರ್ಥಿಗಳು ಓದು, ಚರ್ಚೆ ಮತ್ತು ಬೌದ್ಧಿಕ ಚಿಂತನೆಯ ಮೂಲಕ ಮಾನಸಿಕವಾಗಿ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಬೇಕು. ವಿಜ್ಞಾನ ಸಂಶೋಧನೆಯು ತಂತ್ರಜ್ಞಾನ ಮತ್ತು ನಾವೀನ್ಯತೆಗೆ ಕಾರಣವಾದರೆ, ಸಮಾಜ ವಿಜ್ಞಾನದ ಸಂಶೋಧನೆಗಳು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವುದರ ಜೊತೆಗೆ ನೀತಿ ನಿಯಮಗಳ ಮೇಲೆ ಪ್ರಭಾವ ಬೀರಿ ಆಡಳಿತ, ಪರಿಸರ, ಕೈಗಾರಿಕೆ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಬದಲಾವಣೆ ತರಬಲ್ಲದು ಎಂದರು.ಕಾಲೇಜಿನ ಆಡಳಿತ ಅಧಿಕಾರಿ ಪ್ರೊ.ಬಾಲಕೃಷ್ಣ ಶೆಟ್ಟಿ ಮಾತನಾಡಿ ನಮ್ಮ ಜೀವನದ ಸಾರ್ಥಕತೆಯ ಕ್ಷಣ ಇನ್ನೊಬ್ಬರ ಮುಖದಲ್ಲಿ ನಗು ಮೂಡಿಸಿದಾಗ ಪಡೆಯಲು ಸಾಧ್ಯ ಎಂದರು.
ಪ್ರಾಚರ್ಯ ಡಾ ಕುರಿಯನ್ ಮಾತನಾಡಿ, ಸಮಾಜ ಕರ್ಯ ವಿಭಾಗದ ಫೋರಂ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳನ್ನು ಸದಾ ಕ್ರಿಯಾಶೀಲರನ್ನಾಗಿಡಲು ಸಾಧ್ಯ ಎಂದರು.ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಡಾ.ಮಧುಮಾಲ ಕೆಯ, ಫೋರಂ ಸಂಯೋಜಕ ಕೃಷ್ಣಮೂರ್ತಿ ಬಿ., ಸಮಾಜ ಕಾರ್ಯ ಫೊರಂ ಅಧ್ಯಕ್ಷ ಶ್ರೇಯಸ್ ಹೆಗ್ಡೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಸ್ವಾತಿ ನಿರೂಪಿಸಿದರು. ಅತುಲ್ ಸ್ವಾಗತಿಸಿದರು. ಮಂಜುಶ್ರೀ ವಂದಿಸಿದರು.