ಮಹದೇವಪುರ ರಸ್ತೆಯ ರಮ್ಮನಹಳ್ಳಿಗೆ ಸೇರಿದ ಆಟದ ಮೈದಾನದ ಬಳಿ 2 ಗೌಜಲ ಹಕ್ಕಿಗಳನ್ನು ಮಾರಾಟಕ್ಕೆ ಯತ್ನಿಸುತ್ತಿರುವುದಾಗಿ ದೊರೆತ ಮಾಹಿತಿ ಮೇರೆಗೆ ಸಿಐಡಿ ಅರಣ್ಯ ಸಂಚಾರಿ ದಳದ ಪೊಲೀಸರು ದಾಳಿ

ಕನ್ನಡಪ್ರಭ ವಾರ್ತೆ ಮೈಸೂರು

ಅಕ್ರಮವಾಗಿ ಗೌಜಲ ಹಕ್ಕಿ ಮಾರಾಟಕ್ಕೆ ಯತ್ನಿಸಿದ ಒಬ್ಬ ವ್ಯಕ್ತಿಯನ್ನು ಮೈಸೂರು ಸಿಐಡಿ ಅರಣ್ಯ ಸಂಚಾರಿ ದಳದ ಪೊಲೀಸರು ಮಂಗಳವಾರ ಬಂಧಿಸಿ, 2 ಗೌಜಲ ಹಕ್ಕಿ ಮತ್ತು 1 ಪಂಜರವನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರು ತಾಲೂಕು ರಮ್ಮನಹಳ್ಳಿ ನಿವಾಸಿ ಲೇ. ಕರಿಶೆಟ್ಟಿ ಎಂಬವರ ಪುತ್ರ ಶಿವಣ್ಣ(50) ಬಂಧಿತ ಆರೋಪಿ. ಇವರನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮಹದೇವಪುರ ರಸ್ತೆಯ ರಮ್ಮನಹಳ್ಳಿಗೆ ಸೇರಿದ ಆಟದ ಮೈದಾನದ ಬಳಿ 2 ಗೌಜಲ ಹಕ್ಕಿಗಳನ್ನು ಮಾರಾಟಕ್ಕೆ ಯತ್ನಿಸುತ್ತಿರುವುದಾಗಿ ದೊರೆತ ಮಾಹಿತಿ ಮೇರೆಗೆ ಸಿಐಡಿ ಅರಣ್ಯ ಸಂಚಾರಿ ದಳದ ಪೊಲೀಸರು ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿ, ಆತನ ಬಳಿಯಿದ್ದ ಎರಡು ಗೌಜಲ ಹಕ್ಕಿಗಳೊಂದಿಗೆ 1 ಪಂಜರವನ್ನು ವಶಪಡಿಸಿಕೊಂಡಿದ್ದಾರೆ.

ಮಡಿಕೇರಿ ಸಿಐಡಿ ಅರಣ್ಯ ಘಟಕದ ಎಸ್ಪಿ ಪವನ್ ನೆಜ್ಜೂರು ಮಾರ್ಗದರ್ಶನದಲ್ಲಿ ಮೈಸೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಎಸ್‌ಐ ಪಿ. ಕಿರಣ್ ಕುಮಾರ್, ಸಿಬ್ಬಂದಿ ವೆಂಕಟೇಶ್, ರಾಮಕೃಷ್ಣ, ಯತೀಶ್ ಕುಮಾರ್, ಶಶಿಧರ್, ಅರುಣ್ ಈ ದಾಳಿ ನಡೆಸಿದ್ದಾರೆ.