ಶಾಸಕರೇ ನನ್ನನ್ನು ವೀಕ್ ಎಂದಿದ್ದೀರಾ? ಯಾರು ವೀಕ್, ಯಾರು ಸ್ಟ್ರಾಂಗ್ ಯಾರು ಎಂದು ಜನ ತೀರ್ಮಾನಿಸಲಿ, ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸಿ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್ ಸವಾಲು ಹಾಕಿದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಶಾಸಕರೇ ನನ್ನನ್ನು ವೀಕ್ ಎಂದಿದ್ದೀರಾ? ಯಾರು ವೀಕ್, ಯಾರು ಸ್ಟ್ರಾಂಗ್ ಯಾರು ಎಂದು ಜನ ತೀರ್ಮಾನಿಸಲಿ, ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸಿ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್ ಸವಾಲು ಹಾಕಿದರು.ತಾಲೂಕಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆರೆಗಳಿಗೆ ನೀರು ಬಂದಿಲ್ಲ, ನಿಮ್ಮ ಅಧಿಕಾರಿಗಳು ನಿಮ್ಮ ಮಾತೇ ಕೇಳುತ್ತಿಲ್ಲ. ಕೆರೆಗೆ ನೀರು ಬಿಡಬೇಕು ಎಂದು ಬಿಜೆಪಿಗರು ಹಾಗೂ ರೈತರು ನಡೆಸಿದರೆ ನಾನು ವೀಕಾ? ನೀರು ಬಿಡುವ ದಿನ ಹೇಳಕ್ಕಾಗದವರು, ನೀರು ಬಿಡಿಸುತ್ತೇನೆ ಎಂದು ಭರವಸೆ ನೀಡಿ ಮಾತಿಗೆ ತಪ್ಪಿದವರು ನೀವು ಸ್ಟ್ರಾಂಗಾ ಹೇಳಿ ಎಂದು ಕಿಚಾಯಿಸಿದರು.
ಕೆರೆಗೆ ನೀರು ತುಂಬಿಸಲಿಲ್ಲ? ಸಾಗುವಳಿ ಚೀಟಿ ನೀಡಲಿಲ್ಲ. ನೀವು ಬಹಳ ಸ್ಟ್ರಾಂಗ್ ತಾನೇ? ಯಾಕೆ ನೀವು ಹೇಳಿದ್ದ ಮಾತಿನಂತೆ ಏಕೆ ಕೆರೆ ತುಂಬಿಸಲು ಆಗಲಿಲ್ಲ. ನಾನು ವೀಕೂ, ನೀವು ಸ್ಟ್ರಾಂಗ್ ಎನ್ನುತ್ತೀರಲ್ಲ, ರಾಜೀನಾಮೆ ನೀಡಿ ಚುನಾವಣೆ ಎದುರಿಸಿ ಎಂದರು.ನಿಮ್ಮ ಕೈಯಲ್ಲಿ ಯಾವುದೇ ಕೆಲಸ ಮಾಡಲು ಆಗುತ್ತಿಲ್ಲ ಎಂಬುದು ಜನತೆಗೆ ಗೊತ್ತಾಗಿ ಬಿಟ್ಟಿದೆ. ನೀವು ಚುನಾವಣೆಯಲ್ಲಿ ಗೆದ್ದಿದ್ದು ನಿಮ್ಮ ಸ್ವಂತ ಶಕ್ತಿಯಿಂದ ಅಲ್ಲ, ಬಿಟ್ಟಿ ಗ್ಯಾರಂಟಿಗಳಿಂದ ಎನ್ನೋದು ಜನತೆಗೆ ಗೊತ್ತಿದೆ. ಶಾಸಕರಾಗಿದ್ದೀರಾ ಕಾಲಹರಣ ಮಾಡದೆ ಕೆರೆಗಳಿಗೆ ನೀರು ಬಿಡಿಸಿ, ಸಾಗುವಳಿ ಕೊಡಿಸಿ ಎಂದು ಸಲಹೆ ನೀಡಿದರು.
ನೀರು ಬಿಡುವ ದಿನ ಹೇಳಿ:ಕೆರೆಗಳಿಗೆ ಕಳೆದ ಸೆ.೬ ರಿಂದ ನೂರು ದಿನಗಳ ಕಾಲ ನೀರು ಬಿಡುವುದಾಗಿ ಭರವಸೆ ಕೊಟ್ಟಿದ್ರೀ,ಆದ್ರೆ ಸೆ.೧೬ ರಾದರೂ ನೀರು ಹರಿಸುವ ಕೆಲಸ ಅರಂಭಿಸಲಿಲ್ಲ; ನೀರು ಬಿಡುವ ದಿನ ಹೇಳಿ?೧.೫ ವರ್ಷದಿಂದಲೂ ಕೆರೆ ನೀರಿಗಾಗಿ ಪ್ರತಿಭಟನೆ,ಅಹೋ ರಾತ್ರಿ ಧರಣಿ,ಪಾದಯಾತ್ರೆ ನಡೆಸಿದ್ದಾರೆ ಇದು ಕಾಣುತ್ತಿಲ್ಲವೇ ಎಂದರು.
ಗಣೇಶ ಮಳೆ ಕೊಟ್ಟ:ಗೌರಿ ಗಣೇಶನ ಕೃಪೆಯಿಂದ ರೈತರಿಗೆ ಮಳೆ ಕೊಟ್ಟ ಪರಿಣಾಮ ಕೊಡಸೋಗೆ,ಸೋಮನಪುರ,ಕಂದೇಗಾ ಸುತ್ತ ಮುತ್ತ ಜೋರು ಮಳೆ ಬಂದಿದೆ. ಕೆರೆಕಟ್ಟೆಗಳಿಗೆ ಅಲ್ಪ ಪ್ರಮಾಣದಲ್ಲಿ ಕೆರೆಗಳಿಗೆ ನೀರು ಬಂದ ಕಾರಣ ಗಣೇಶ ಗೌರಿಗೆ ಕೃತಜ್ಞತೆ ಸಲ್ಲಿಸುವೆ ಎಂದರು.
ನಮ್ಮ ತಾಲೂಕಿನ ಗೀತಾ ಮತ್ತು ಗಣೇಶ ಕೆರೆಗಳಿಗೆ ನೀರು ತುಂಬಿಸಲಿಲ್ಲ. ರೈತರ ಕಷ್ಟ ಅರಿಯಲಿಲ್ಲ. ಗೌರಿ-ಗಣೇಶನಿಗೆ ರೈತರ ಸಂಕಷ್ಟ ಅರ್ಥವಾಗಿ ಮಳೆ ಸುರಿಸಿದ ಎಂದು ಸಾಮಾಜಿಕ ಜಾಲತಾಣದಲ್ಲಿ ಸ್ಥಳೀಯ ಶಾಸಕರ ಬಗ್ಗೆ ವ್ಯಂಗ್ಯವಾಡಿದ್ದು ಸರಿಯಾಗಿಯೇ ಇದೆ ಎಂದರು.ಮಂಡಲ ಅಧ್ಯಕ್ಷ ಸಿ.ಮಹದೇವಪ್ರಸಾದ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮಾಡ್ರಹಳ್ಳಿ ನಾಗೇಂದ್ರ, ಪುರಸಭೆ ಮಾಜಿ ಅಧ್ಯಕ್ಷ ಎಲ್.ಸುರೇಶ್, ಮುಖಂಡರಾದ ಮಂಚಹಳ್ಳಿ ಬಾಬು, ಹಂಗಳಪುರ ರೇವಣ್ಣ, ಬಸವರಾಜು, ಮಹೇಂದ್ರ, ಸುನೀಲ್ ಮೂಡ್ಲು, ನಾಗೇಶ್ ಹಲವರು ಇದ್ದರು.
‘ನೀರು ಕೇಳಿದ್ದಕ್ಕೆ ಬಿಜೆಪಿಗರು ಲೂಸ್ಗಳಾ?’ಶಾಸಕರೇ ನಿಮ್ಮ ಕೈಯಲ್ಲಿ ನೀರು ಬಿಡಿಸಲು ಆಗುತ್ತಿಲ್ಲ,ನೀವು ಅಸಮರ್ಥರು ಎಂದು ಫೇಸ್ಬುಕ್ನಲ್ಲಿ ಜನ ಪ್ರಶ್ನೆ ಮಾಡಿದ್ದಕ್ಕೆ, ಹೋರಾಟ ಮಾಡಿದವರನ್ನೆಲ್ಲ ಲೂಸ್ ಎನ್ನುವ ಪದ ಬಳಕೆ ಮಾಡಿದ್ದೀರಾ? ಇದು ಶಾಸಕರಾಡುವ ನುಡಿ ಮುತ್ತಾ ಎಂದು ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ತಿರುಗೇಟು ನೀಡಿದರು.
ನೀರು ಬಿಡಿಸಲು ಆಗದೆ ಅಸಹಾಯಕತೆ ತೋರಿ,ನೀರು ಬಿಡಿಸಲು ಡೇಟ್ ಕೊಡಲು ಆಗದೆ ಕೈಚೆಲ್ಲಿ ಕುಳಿತ ಶಾಸಕರು ಇತ್ತೀಚಿಗೆ ಬಿಜೆಪಿಗರನ್ನು ಲೂಸ್ಗಳು ಎಂದು ಹೇಳಿದ್ದಾರೆಂದರೆ ಅವರ ಮಾನಸಿಕ ಸ್ಥಿತಿ ಹೇಗಿದೆ ನೋಡಿ ಎಂದು ಟೀಕಿಸಿದರು.