ಪೌರ ಕಾರ್ಮಿಕರ ಸೇವೆ ಪ್ರತಿಯೊಬ್ಬರೂ ಗೌರವಿಸಿ: ಎಂ.ಶ್ರೀಕಾಂತ್ ಕಿವಿಮಾತು

| Published : Oct 08 2024, 01:04 AM IST

ಪೌರ ಕಾರ್ಮಿಕರ ಸೇವೆ ಪ್ರತಿಯೊಬ್ಬರೂ ಗೌರವಿಸಿ: ಎಂ.ಶ್ರೀಕಾಂತ್ ಕಿವಿಮಾತು
Share this Article
  • FB
  • TW
  • Linkdin
  • Email

ಸಾರಾಂಶ

ನಾಡಹಬ್ಬ ದಸರಾ ಹಬ್ಬದ ಪ್ರಯುಕ್ತ ಕ್ರಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್ ಸಾರಥ್ಯದ ಸದ್ಭಾವನ ಎಜುಕೇಷನ್ ಮತ್ತು ಚಾರಿಟೆಬಲ್ ಟ್ರಸ್ಟ್ ವತಿಯಿಂದ ಮಹಿಳಾ ಪೌರ ಕಾರ್ಮಿಕರಿಗೆ ಸೀರೆ ವಿತರಿಸುವ ಮೂಲಕ ಬಾಗಿನ ನೀಡಿ, ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಾಡಹಬ್ಬ ದಸರಾ ಹಬ್ಬದ ಪ್ರಯುಕ್ತ ಕ್ರಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್ ಸಾರಥ್ಯದ ಸದ್ಭಾವನ ಎಜುಕೇಷನ್ ಮತ್ತು ಚಾರಿಟೆಬಲ್ ಟ್ರಸ್ಟ್ ವತಿಯಿಂದ ಸೋಮವಾರ ಮಹಾನಗರ ಪಾಲಿಕೆಯ ಮಹಿಳಾ ಪೌರ ಕಾರ್ಮಿಕರಿಗೆ ಸೀರೆ ವಿತರಿಸುವ ಮೂಲಕ ಬಾಗಿನ ನೀಡಿ, ಗೌರವಿಸಲಾಯಿತು.

ನಗರದ ವೀರಶೈವ ಕಲ್ಯಾಣಮಂದಿರದ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಹಾನಗರ ಪಾಲಿಕೆಯ ನೂರಾರು ಮಂದಿ ಮಹಿಳಾ ಪೌರ ಕಾರ್ಮಿಕರಿಗೆ ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್ ನೇತೃತ್ವದಲ್ಲಿ ಹಲವು ಮಂದಿ ಗಣ್ಯರು ಹಾಜರಿದ್ದು, ಸೀರೆ ವಿತರಿಸುವ ಮೂಲಕ ಗೌರವಿಸಿದರು.

ವೇದಿಕೆಯಲ್ಲಿ ಬಾಗಿನ ಸ್ವೀಕರಿಸಿ ಮಾತನಾಡಿದ ಮಹಿಳಾ ಪೌರ ಕಾರ್ಮಿಕರಾದ ನೇತ್ರಾವತಿ, ಸೀರೆ ಕೊಟ್ಟು ಬಾಗಿನ ನೀಡುವ ಮೂಲಕ ನಮ್ಮನ್ನು ಸಹೋದರಿಯರಂತೆ ಕಾಣುವ ಶ್ರೀಕಾಂತ್ ಅವರು ಇಂತಹದೊಂದು ಪುಣ್ಯದ ಕೆಲಸವನ್ನು ಅವರು ನಿರಂತರವಾಗಿ ಮಾಡುತ್ತಾ ಬಂದಿರುವುದು ನಮಗೆಲ್ಲಾ ಅತೀವ ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಬರುವ ದಿನಗಳಲ್ಲಿ ಅವರಿಗೆ ರಾಜಕೀಯವಾಗಿ ದೊಡ್ಡ ಶಕ್ತಿ ಸಿಗಲಿ, ಅಧಿಕಾರದಲ್ಲಿದ್ದಾಗ ಅವರು ಇನ್ನಷ್ಟು ಸಂತಸದಿಂದ ಬಾಗಿನ ನೀಡಲಿ ಎಂದು ಮಹಿಳಾ ಪೌರಕಾರ್ಮಿಕರಾದ ಗಂಗಮ್ಮ ಹಾರೈಸಿದರು.

ವೇದಿಕೆಯಲ್ಲಿ ಐದು ಮಂದಿ ಪಾಲಿಕೆಯ ಮಹಿಳಾ ಪೌರ ಕಾರ್ಮಿಕರಿಗೆ ಸೀತೆ ವಿತರಿಸಿದ ಬಳಿಕ ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್ ಮಾತನಾಡಿ, ಪ್ರತಿ ವರ್ಷ ಗೌರಿ ಹಬ್ಬದ ವೇಳೆಯೇ ನಾವು ಪಾಲಿಕೆಯ ಮಹಿಳಾಪೌರ ಕಾರ್ಮಿಕರಿಗೆ ಸೀರೆ ವಿತರಿಸಲಾಗುತ್ತಿತ್ತು. ಈ ಬಾರಿ ಸ್ವಲ್ಪ ತಡವಾಯಿತು ಎಂದರಲ್ಲದೆ, ಪೌರ ಕಾರ್ಮಿಕರ ಸೇವೆಯನ್ನು ಪ್ರತಿಯೊಬ್ಬರೂ ಗೌರವಿಸಬೇಕಿದೆ. ಯಾಕೆಂದರೆ ನಗರವನ್ನು ಸ್ವಚ್ಛವಾಗಿಡುವ ಅವರ ಕೆಲಸದಿಂದಲೇ ಜನಪ್ರತಿನಿಧಿಗಳಿಗೂ ಗೌರವ ಸಿಗುತ್ತದೆ. ಹಾಗಾಗಿ ಅವರನ್ನು ಗೌರವಿಸುವ ಕೆಲಸ ಎಲ್ಲರಿಂದಲೂ ಆಗಬೇಕು ಎಂದು ಹೇಳಿದರು.

ವೀರ ಶೈವ ಸಮಾಜದ ಮುಖಂಡ ಮಹೇಶ್ವರಪ್ಪ ಮಾತನಾಡಿ, ಮುಖಂಡರಾದ ಶ್ರೀಕಾಂತ್ ಅವರು ಅಧಿಕಾರ ಇರಲಿ, ಇಲ್ಲದಿರಲಿ ಅವರು ಸಾಮಾಜಿಕ ಸೇವೆಯನ್ನು ಎಂದಿಗೂ ಮರೆತಿಲ್ಲ, ಅವರಿಗೆ ರಾಜಕೀಯವಾಗಿ ಒಳ್ಳೆಯದಾಗಲಿ ಎಂದರು.

ಪಾಲಿಕೆ ಪೌರ ಕಾರ್ಮಿಕರ ನೌಕರರ ಸಂಘದ ಅಧ್ಯಕ್ಷ ಎನ್. ಗೋವಿಂದಣ್ಣ ಮಾತನಾಡಿ, ಶ್ರೀಕಾಂತ್ ಅವರ ಈ ಸಾಮಜಿಕ ಕಳಕಳಿಯನ್ನುಶ್ಲಾಘಿಸಿದರು.

ವೇದಿಕೆಯಲ್ಲಿ ಶಿವಮೊಗ್ಗ ನಗರಸಭೆ ಮಾಜಿ ಸದಸ್ಯೆ ನಿರ್ಮಲ ಕಾಶಿ, ಪಾಲಿಕೆಮಾಜಿ ಮೇಯರ್ ನಾಗರಾಜ್ ಕಂಕಾರಿ, ಮಾಜಿ ಉಪಮೇಯರ್ ಪಾಲಾಕ್ಷಿ, ಪಾಲಿಕೆ ಮಾಜಿ ಸದಸ್ಯೆ ಗಾಡಿಕೊಪ್ಪ ರಾಜಣ್ಣ, ಪೌರ ಕಾರ್ಮಿಕರ ಸಂಘದ ಮುಖಂಡರಾದ ಪ್ರಕಾಶ್, ಕುಮಾರ್, ಮಂಜುನಾಥ್ ,ಪಾಲಿಕೆ ಆರೋಗ್ಯಾಧಿಕಾರಿ ವೇಣುಗೋಪಾಲ್ ಸೇರಿ ಹಲವರು ಇದ್ದರು.