ಗಂಡು ಮಗು ಹುಟ್ಟಿದರೆ ಮಾತ್ರ ಸಿಹಿ ಹಂಚಿ ಸಂಭ್ರಮಿಸುವ ಸಮಾಜವು, ಹೆಣ್ಣು ಮಗು ಹುಟ್ಟಿದರೂ ಸಂತೋಷದಿಂದ ಸಿಹಿ ನೀಡುವಂತಾಗಬೇಕು

ಕುಷ್ಟಗಿ: ಮಹಿಳಾ ದಿನಾಚರಣೆಯಂದು ಮಾತ್ರ ಮಹಿಳೆಯರನ್ನು ಗೌರವಿಸದೆ ವರ್ಷಪೂರ್ತಿ ಮಹಿಳೆಯರನ್ನು ಗೌರವಿಸಬೇಕು ಎಂದು ಡಾ. ಕಾವೇರಿ ಶ್ಯಾವಿ ಹೇಳಿದರು.

ತಾಲೂಕಿನ ತಾವರಗೇರಾ ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಸಭಾಂಗಣದಲ್ಲಿ ನೀಲಕಂಠೇಶ್ವರ ಮಹಿಳಾ ಸ್ವ ಸಹಾಯ ಸಂಘ ಹಾಗೂ ವಿವಿಧ ಮಹಿಳಾ ಸಂಘಗಳ ನೇತೃತ್ವದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮನೆಯಲ್ಲಿ ಒಂದು ಸಂಸಾರ ಚೆನ್ನಾಗಿ ನಡೆದಿದೆ ಎಂದರೆ ಅಲ್ಲಿ ಮಹಿಳೆ ಕಾರಣ. ಹುಟ್ಟಿದ ಮನೆ ಬಿಟ್ಟು, ಗಂಡನ ಮನೆಯಲ್ಲಿ ಕಷ್ಟ, ನೋವು, ನಲಿವು ಸಹಿಸಿಕೊಂಡು ಜೀವನ ನಡೆಯುವ ತಾಯಿ ಅಥವಾ ಮಹಿಳೆಯ ತಾಳ್ಮೆ ಶ್ಲಾಘನೀಯ. ಮಹಿಳಾ ದಿನಾಚರಣೆಗೆ ಅಷ್ಟೆ ಸೀಮಿತವಾಗದೇ ಯಾವಾಗಲೂ ಮಹಿಳೆಯರನ್ನು ಗೌರವಿಸುವ ಸಮಾಜ ನಿರ್ಮಾಣವಾಗಬೇಕು ಎಂದರು.

ಗಂಡು ಮಗು ಹುಟ್ಟಿದರೆ ಮಾತ್ರ ಸಿಹಿ ಹಂಚಿ ಸಂಭ್ರಮಿಸುವ ಸಮಾಜವು, ಹೆಣ್ಣು ಮಗು ಹುಟ್ಟಿದರೂ ಸಂತೋಷದಿಂದ ಸಿಹಿ ನೀಡುವಂತಾಗಬೇಕು. ಸಮಾಜದಲ್ಲಿ ಬದುಕು ರೂಪಿಸುವ, ಜೀವನ ಸಾಗಿಸುವ ಏಕೈಕ ಜೀವ ಅದು ಮಹಿಳೆ ಮಾತ್ರ ಎಂದರು.

ಕವಿಯಿತ್ರಿ ಸುಜಾತಾ ಹಿರೇಮಠ ಮಾತನಾಡಿದರು. ಪಪಂ ಸದಸ್ಯೆ ಬೇಬಿ ರೇಖಾ ಅಧ್ಯಕ್ಷತೆ ವಹಿಸಿದ್ದರು. ರಾಜೇಶ್ವರಿ ಐಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸೂಲಗಿತ್ತಿ ಶ್ಯಾಮಮ್ಮ, ಯೋಗ ಸಾಧಕಿ ಶಕೀಲಾ ಶೆಟ್ಟಿ ಮತ್ತು ಕೃಷಿಕ ಮಹಿಳೆ ಮಹಾಂತಮ್ಮ ಪಾಟೀಲ್, ಆಶಾ ಕಾರ್ಯಕರ್ತೆಯರು, ಪಪಂ ಪೌರಕಾರ್ಮಿಕರು, ಸ್ವಸಹಾಯ ಸಂಘದ ಮೇಲ್ವಿಚಾರಕರು, ಹೀಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ 25 ಮಹಿಳಾ ಸಾಧಕರನ್ನು ಗೌರವಿಸಲಾಯಿತು.

ಚಂದ್ರಕಲಾ ಐಲಿ, ಕಲಾವತಿ, ಸುಚಿತ್ರಾ ಐಲಿ, ಸವಿತಾ ಮತ್ತು ನೀಲಕಂಠೇಶ್ವರ ಮಹಿಳಾ ಸಂಘದ ಸದಸ್ಯರು ಇದ್ದರು.