ಸಾರಾಂಶ
ಮುಂಡಗೋಡ: ಸರ್ವ ಧರ್ಮವನ್ನು ಗೌರವಿಸುವ ಮನಸ್ಥಿತಿಯಿಂದ ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ. ದ್ವೇಷ, ಅಸೂಯೆಯಿಂದ ಏನನ್ನೂ ಸಾದಿಸಲು ಸಾಧ್ಯವಿಲ್ಲ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.ಶುಕ್ರವಾರ ತಾಲೂಕಿನ ಇಂದೂರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಮೌಲಾಲಿ ಸಭಾ ಭವನ ಉದ್ಘಾಟಿಸಿ ಅವರು ಮಾತನಾಡಿದರು.
ಒಳ್ಳೆಯ ಕೆಲಸ ಮಾಡುವುದೇ ನಿಜವಾದ ಧರ್ಮ. ಎಲ್ಲ ಧರ್ಮಗಳು ಕೂಡ ಒಳಿತನ್ನೇ ಸೂಚಿಸುತ್ತವೆ. ಸಮಾಜದಲ್ಲಿ ಸಮಾನತೆಯ ಸಂದೇಶ ಹಾಗೂ ಶಾಂತಿಯಿಂದ ಎಲ್ಲವನ್ನು ಗೆಲ್ಲಬಹುದು ಕ್ರಾಂತಿಯಿಂದಲ್ಲ. ಎಲ್ಲ ಧರ್ಮೀಯರು ನೆಲೆಸಿರುವ ಮುಂಡಗೋಡ ತಾಲೂಕು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಸಮಾಜದಲ್ಲಿ ಎಲ್ಲರು ಭಾವೈಕ್ಯತೆಯಿಂದ ಒಗ್ಗಟ್ಟಿನಿಂದ ಬಾಳಬೇಕು ಎಂದರು.ಶಿರಹಟ್ಟಿ ಫಕೀರ ಸಿದ್ದರಾಮೇಶ್ವರ ಮಹಾಸ್ವಾಮಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಮನುಷತ್ವ ಅರಿತು ಬಾಳಿದರೆ ಮಾನವ ಜೀವನ ಸ್ವಾರ್ಥಕವಾಗುತ್ತದೆ. ಯಾವುದೇ ತೀರ್ಥಯಾತ್ರೆ ದೇವರ ದರ್ಶನ ಮಾಡುವುದರಿಂದ ಪುಣ್ಯ ಲಭಿಸುವುದಿಲ್ಲ. ಬದಲಾಗಿ ಬೇರೆಯವರ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳಬೇಕು. ದ್ವೇಷ ಬಿಟ್ಟು ಪ್ರೀತಿ ಮಾಡಬೇಕು. ಎಲ್ಲರನ್ನು ಪ್ರೀತಿಯಿಂದ ಕಾಣಬೇಕು. ಹಿಂದೂ-ಮುಸ್ಲಿಂ ಎಂಬ ಭೇದ ಮಾಡಬಾರದು. ನಾವೆಲ್ಲ ಮನುಷ್ಯರು ಎಂದು ಅರಿತು ನಡೆಯಬೇಕು ಎಂದರು.
ಹುಬ್ಬಳ್ಳಿ ಎರಡೆತ್ತಿನ ಮಠದ ಸಿದ್ದಲಿಂಗ ಮಹಾಸ್ವಾಮಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಫಕ್ಕಿರೇಶ ತಾವರಗೇರಿ, ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಯಮನಪ್ಪ ಮಾರಂಬೀಡ, ಮಹ್ಮದಲಿ ಅರಳೇಶ್ವರ, ನಿಂಗಯ್ಯಸ್ವಾಮಿ ಸುರಗಿಮಠ, ಕೆಂಜೋಡಿ ಗಲಬಿ ಇದ್ದರು.
ಮುಂಡಗೋಡ ತಾಲೂಕಿನ ಇಂದೂರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಮೌಲಾಲಿ ಸಭಾಭವನವನ್ನು ಶಾಸಕ ಶಿವರಾಮ ಹೆಬ್ಬಾರ ಉದ್ಘಾಟಿಸಿ ಮಾತನಾಡಿದರು.