ಸಾರಾಂಶ
ತಾಲೂಕಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನರ ಸಮಸ್ಯೆಗಳು ಬಹಳಷ್ಟಿದ್ದು, ಅಧಿಕಾರಿಗಳು ಸೂಕ್ತ ಸ್ಪಂದನೆ ನೀಡಬೇಕೆಂದು ದಲಿತ ಮುಖಂಡರು ಸಮುದಾಯಗಳ ಕುಂದುಕೊರತೆ ಸಭೆಯಲ್ಲಿ ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಕಾಗವಾಡ
ತಾಲೂಕಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನರ ಸಮಸ್ಯೆಗಳು ಬಹಳಷ್ಟಿದ್ದು, ಅಧಿಕಾರಿಗಳು ಸೂಕ್ತ ಸ್ಪಂದನೆ ನೀಡಬೇಕೆಂದು ದಲಿತ ಮುಖಂಡರು ಸಮುದಾಯಗಳ ಕುಂದುಕೊರತೆ ಸಭೆಯಲ್ಲಿ ಒತ್ತಾಯಿಸಿದರು.ಪಟ್ಟಣದ ಬಸವ ನಗರದ ಅಂಬೇಡ್ಕರ ಸಭಾ ಭವನದಲ್ಲಿ ನಡೆದ ತಾಲೂಕುಮಟ್ಟದ ಅಧಿಕಾರಿಗಳ, ಚುನಾಯಿತ ಸದಸ್ಯರ, ಪ.ಜಾ, ಪ.ಪಂ ಮುಖಂಡರ, ಸಮಾಜ ಬಾಂಧವರ ಕುಂದುಕೊರತೆ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆದುಕೊಂಡ ಮುಖಂಡರು, ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲವೆಂದು ಆಕ್ರೋಶ ಹೊರಹಾಕಿದ್ದಾರೆ.
ಜುಗೂಳ ಗ್ರಾಮದ ಎಸ್ಸಿ ಸಮುದಾಯದ ಸ್ಮಶಾನ ಭೂಮಿ ವಿವಾದ ತಾರಕಕ್ಕೇರಿದ್ದು, ಕಳೆದ ಅನೇಕ ತಿಂಗಳುಗಳಿಂದ ಈ ಕುರಿತು ಹೋರಾಟ ಮಾಡಿ, ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗದಿರುವುದು ಅಧಿಕಾರಿಗಳ ಕರ್ತವ್ಯ ಪ್ರಜ್ಞೆಗೆ ಹಿಡಿದ ಕೈಗನ್ನಡಿಯಾಗಿದೆ. ಕೂಡಲೇ ಗ್ರಾಮದ ಸ್ಮಶಾನ ಸಮಸ್ಯೆ ಬಗೆಹರಿಸಬೇಕೆಂದು ಎಸ್ಸಿ ಸಮುದಾಯದವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಇನ್ನೂ ತಾಲೂಕಿನಾದ್ಯಂತ ಅಕ್ರಮ ಸರಾಯಿ ಮಾರಾಟಾ ಜೋರಾಗಿದ್ದು, ಅಬಕಾರಿ ಅಧಿಕಾರಿಗಳೇ ಇದಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆಂಬ ಆರೋಪವೂ ಕೇಳಿ ಬಂದಿತು. ಸಭೆಯಲ್ಲಿ ಕೆಲ ಇಲಾಖೆಯ ಅಧಿಕಾರಿಗಳು ಗೈರ ಆಗಿರುವುದನ್ನು ಗಂಭೀರವಾಗಿ ಪರಿಗಣಿಸಿ, ಅವರಿಗೆ ನೋಟಿಸ್ ನೀಡುವ ಕುರಿತು ನಿರ್ಣಯಿಸಲಾಯಿತು.ತಳವಾರ ಸಮಾಜಕ್ಕೆ ಸಿಕ್ಕಿರುವ ಎಸ್ಟಿ ಕೇಟಗರಿಯಿಂದಾಗಿ ನಮ್ಮ ಹಕ್ಕುಗಳು ಚ್ಯುತಿ ಉಂಟಾಗುತ್ತಿದೆ ಎಂದು ಮುಖಂಡರು ಆರೋಪಿಸಿದರು. ಅಲ್ಲದೇ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಕಲಿ ಜಾತಿ ಪ್ರಮಾಣ ಪತ್ರಗಳ ಹಾವಳಿ ಹೆಚ್ಚಾಗಿದೆ. ಅದಕ್ಕೆ ಕಡಿವಾಣ ಹಾಕಬೇಕೆಂದು ಸೂಚಿಸಿದರು. ಸರ್ಕಾರದ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ತಹಸೀಲ್ದಾರ್ ನೀಡಿದರು.
ತಹಸೀಲ್ದಾರ್ ರಾಜೇಶ ಬುರ್ಲಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಇಒ ವೀರಣ್ಣಾ ವಾಲಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಸವರಾಜ ಯಾದವಾಡ, ಡಿಎಸ್ಪಿ ಪ್ರಶಾಂತ ಮುನ್ನೋಳ್ಳಿ, ಸಿಪಿಐ ಸಂತೋಶ ಹಳ್ಳೂರ, ಬಿಇಒ ಎಂ.ಆರ್. ಮುಂಜೆ, ಟಿಎಚ್ಓ ಡಾ. ಬಸಗೌಡಾ ಕಾಗೆ, ಬಿಸಿಯೂಟದ ಅಧಿಕಾರಿ ಮಲ್ಲಿಕಾರ್ಜುನ ನಾಮದಾರ, ಉಪತಹಸೀಲ್ದಾರ್ ರಷ್ಮಿ ಜಕಾತಿ, ಅಣ್ಣಾಸಾಬ ಕೋರೆ, ಅಬಕಾರಿ ಇಲಾಖೆ ಮಹಾಂತೇಶ ಬಂಡಗಾರ, ಪಶು ಇಲಾಖೆ ಡಾ.ಜ್ಞಾನೇಶ್ವರ ಕಾಂಬಳೆ, ಹೆಸ್ಮಾಂ ಎಇಇ ದುರ್ಯೋಧನ ಮಾಳಿ, ಅರಣ್ಯ ಇಲಾಖೆ ರಾಕೇಶ ಅರ್ಜುನವಾಡ, ಆಹಾರ ಇಲಾಖೆ ಸಂಗಮೇಶ ಬಾಗೇವಾಡಿ, ಕೃಷಿ ಇಲಾಖೆ ಕಾಂತಿನಾಥ ಬಿರಾದರ, ಕಾಗವಾಡ ಪಪಂ ಮುಖ್ಯಾಧಿಕಾರಿ ಕೆ.ಕೆ.ಗಾವಡೆ, ಸಿಡಿಪಿಒ ಮೇಲ್ವಿಚಾರಕಿ ಸುಜಾತಾ ಪಾಟೀಲ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು ಮತ್ತು ದಲಿತ ಮುಖಂಡರಾದ ಸಂಜಯ ತಳವಳಕರ, ವಿವೇಕ ಕರಪೆ, ವಿದ್ಯಾಧರ ಧೊಂಡಾರೆ, ಪ್ರಕಾಶ ಧೊಂಡಾರ, ಉಮೇಶ ಮನೋಜ, ಮಹಾದೇವ ಕಾಂಬಳೆ, ಪ್ರತಾಪ ಕಾಂಬಳೆ, ಹೇಮಂತ ಹಿರೇಮನಿ, ರಾಜು ಹಿರೇಮನಿ, ಪ್ರಮೋದ ಕಾಂಬಳೆ, ಗೋಪಾಲ ಕಾಂಬಳೆ, ರವಿ ಕುರಣೆ, ಬಾಳಾಸಾಬ ಕಾಂಬಳೆ ಸೇರಿದಂತೆ ತಾಲೂಕಿನ ದಲಿತ ಮುಖಂಡರು ಉಪಸ್ಥಿತರಿದ್ದರು. ಸಭೆಯಲ್ಲಿ ಕೆಲ ಅಧಿಕಾರಿಗಳು ನಿದ್ರೆಗೆ ಜಾರಿದ್ದು, ಸಭೆಯ ಕುರಿತು ಅವರಿಗಿರುವ ಕಾಳಜಿ ಪ್ರದರ್ಶಿಸಿದಂತೆ ಭಾಸವಾಯಿತು.