ಕಾನೂನು ಅರಿವು ಹೊಂದಿದಾಗಲೇ ವ್ಯಕ್ತಿಯ ಹಕ್ಕುಗಳಿಗೆ ನಿಜವಾದ ರಕ್ಷಣೆ ದೊರೆಯುತ್ತದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಸಿ.ಎಸ್. ಶಿವನಗೌಡರ ಹೇಳಿದರು.

ಗದಗ: ಕಾನೂನು ಅರಿವು ಹೊಂದಿದಾಗಲೇ ವ್ಯಕ್ತಿಯ ಹಕ್ಕುಗಳಿಗೆ ನಿಜವಾದ ರಕ್ಷಣೆ ದೊರೆಯುತ್ತದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಸಿ.ಎಸ್. ಶಿವನಗೌಡರ ಹೇಳಿದರು.

ನಗರದ ಗಂಗಾಪೂರ ಪೇಟೆಯಲ್ಲಿ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಎಸ್.ಎ. ಮಾನ್ವಿ ಕಾನೂನು ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗಾಗಿ ಕಾನೂನು ನೆರವು ಸಾಕ್ಷರತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪಿಟಿಸಿಎಲ್ ಕಾಯ್ದೆಯ ಉದ್ದೇಶ ಭೂಮಿಯನ್ನು ಕಳೆದುಕೊಂಡ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ನ್ಯಾಯ ಒದಗಿಸುವುದಾಗಿದೆ. ಅನೇಕ ಸಂದರ್ಭಗಳಲ್ಲಿ ಅರಿವಿನ ಕೊರತೆಯಿಂದ ಜನರು ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಕಾಯ್ದೆ ಮೂಲಕ ಅಂತಹ ಭೂಮಿ ಮರುಪಡೆಯಲು ಅವಕಾಶವಿದೆ. ಪರಿಶಿಷ್ಟ ಜಾತಿ, ಪಂಗಡದವರಿಗೆ ಲಭ್ಯವಿರುವ ಕಾಯ್ದೆಗಳಿಂದ ಸಾಮಾಜಿಕ ಅನ್ಯಾಯ, ಹಿಂಸೆ ಹಾಗೂ ಭೇದ-ಭಾವವನ್ನು ತಡೆಯಲು ಈ ಕಾಯ್ದೆ ಶಕ್ತಿಯುತ ಸಾಧನವಾಗಿದೆ. ಪರಿಶಿಷ್ಟ ವರ್ಗದ ಜನರ ಮೇಲೆ ನಡೆಯುವ ದೌರ್ಜನ್ಯಗಳಿಗೆ ಕಾನೂನು ಕಠಿಣ ಶಿಕ್ಷೆಯನ್ನು ವಿಧಿಸುತ್ತದೆ. ಆದರೆ, ಈ ಕಾಯ್ದೆಗಳ ಬಗ್ಗೆ ಅರಿವು ಇಲ್ಲದಿದ್ದರೆ, ನ್ಯಾಯ ಪಡೆಯಲು ಸಾಧ್ಯವಾಗುವುದಿಲ್ಲ ಎಂದರು.

ಈ ಹಿನ್ನೆಲೆಯಲ್ಲಿ ಕಾನೂನು ಸಾಕ್ಷರತಾ ಕಾರ್ಯಕ್ರಮಗಳು ಅತ್ಯಂತ ಅಗತ್ಯವಾಗಿವೆ. ಗ್ರಾಮೀಣ ಭಾಗದ ಜನರಿಗೆ ಸರಿಯಾದ ಮಾಹಿತಿ ನೀಡಿದರೆ, ಅವರು ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ. ಕಾನೂನು ಸೇವೆಗಳ ಪ್ರಾಧಿಕಾರ ಉಚಿತ ಕಾನೂನು ನೆರವು ನೀಡಲು ಸದಾ ಸಿದ್ಧವಾಗಿದೆ ಎಂದರು.

ವಕೀಲ ಗುರುರಾಜ ಗೌರಿ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ತಮ್ಮ ಕಾನೂನು ಹಕ್ಕುಗಳನ್ನು ತಿಳಿದುಕೊಳ್ಳುವುದು ಅತ್ಯಂತ ಅಗತ್ಯವಿದೆ. ಸಂವಿಧಾನ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕುಗಳನ್ನು ನೀಡಿದರೂ, ಅದರ ಪ್ರಯೋಜನವನ್ನು ಪಡೆಯಲು ಅರಿವು ಮುಖ್ಯವಾಗಿದೆ ಎಂದರು.

ಈ ವೇಳೆ ಸಿಂಡಿಕೇಟ್ ಸದಸ್ಯ ಮೋಹನ ಭಜಂತ್ರಿ, ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಂಚಾಲಕ ಎಸ್.ಎನ್. ಬಳ್ಳಾರಿ ಮಾತನಾಡಿದರು‌.

ಎಸ್‌.ಎ. ಮಾನ್ವಿ ಕಾನೂನು ಕಾಲೇಜಿನ ಪ್ರಾ. ಡಾ. ಸಂಜೀವ ಎಂ. ಹುಲ್ಲೂರ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಎಸ್.ಎ. ಮಾನ್ವಿ, ನಗರಸಭೆ ಸದಸ್ಯ ಕೃಷ್ಣಾ ಪರಾಪೂರ, ಡಾ. ವಿಜಯ ಮುರದಂಡೆ ಸೇರಿದಂತೆ ಹಲವರು ಇದ್ದರು. ಸಂಯೋಜಕರಾಗಿ ಡಾ. ಜ್ಯೋತಿ ಸಿ.ವಿ. ಕಾರ್ಯ ನಿರ್ವಹಿಸಿದರು.