ನಿರಂತರ ಅಪಘಾತ, ಅನಾಹುತಕ್ಕೆ ಕಾರಣ ಆಗುತ್ತಿರುವ ಇಲ್ಲಿನ ಬೂದಾಳ್ ವರ್ತುಲ ರಸ್ತೆಯ ಎಚ್‌ಕೆಎನ್‌ ವೃತ್ತ- ಬಾಷಾ ನಗರವರೆಗೆ ಬ್ರೇಕ್ ಬ್ರಿಡ್ಜ್‌ (ಹಂಪ್‌)ಗಳನ್ನು ಅಳವಡಿಸಲು ಒತ್ತಾಯಿಸಿ ಜ.14ರಂದು ಬೆಳಿಗ್ಗೆ 10 ಗಂಟೆಯಿಂದ ರಸ್ತೆ ತಡೆ ನಡೆಸಲಾಗುವುದು ಎಂದು ಭಾರತೀಯ ಅಂಬೇಡ್ಕರ್ ಮಹಾಸೇನೆ ರಾಜ್ಯ ಮತ್ತು ಜಿಲ್ಲಾ ಘಟಕ ಎಚ್ಚರಿಸಿವೆ.

- ಸ್ಥಳಕ್ಕೆ ಬಂದು ಹಂಪ್‌ಗಳ ಹಾಕುವವರೆಗೂ ಹೋರಾಟ: ನೂರುಲ್ಲಾ ಮಾಹಿತಿ- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ನಿರಂತರ ಅಪಘಾತ, ಅನಾಹುತಕ್ಕೆ ಕಾರಣ ಆಗುತ್ತಿರುವ ಇಲ್ಲಿನ ಬೂದಾಳ್ ವರ್ತುಲ ರಸ್ತೆಯ ಎಚ್‌ಕೆಎನ್‌ ವೃತ್ತ- ಬಾಷಾ ನಗರವರೆಗೆ ಬ್ರೇಕ್ ಬ್ರಿಡ್ಜ್‌ (ಹಂಪ್‌)ಗಳನ್ನು ಅಳವಡಿಸಲು ಒತ್ತಾಯಿಸಿ ಜ.14ರಂದು ಬೆಳಿಗ್ಗೆ 10 ಗಂಟೆಯಿಂದ ರಸ್ತೆ ತಡೆ ನಡೆಸಲಾಗುವುದು ಎಂದು ಭಾರತೀಯ ಅಂಬೇಡ್ಕರ್ ಮಹಾಸೇನೆ ರಾಜ್ಯ ಮತ್ತು ಜಿಲ್ಲಾ ಘಟಕ ಎಚ್ಚರಿಸಿವೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆ ರಾಜ್ಯಾಧ್ಯಕ್ಷ ನೂರುಲ್ಲಾ, ಅಂದು ಬೆಳಗ್ಗೆ 10 ರಿಂದಲೇ ಭಾರತೀಯ ಅಂಬೇಡ್ಕರ್ ಮಹಾಸೇನೆ ಬೂದಾಳ್ ರಸ್ತೆಯ ಬಳಿ ವರ್ತುಲ ರಸ್ತೆ ತಡೆ ನಡೆಸಲಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಬ್ರೇಕ್ ಬ್ರಿಡ್ಜ್‌ಗಳನ್ನು ಅಳವಡಿಸಬೇಕು. ಅಲ್ಲಿಯವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದರು.

ಬೂದಾಳ್ ವರ್ತುಲ ರಸ್ತೆ, ಎಚ್‌ಕೆಎನ್ ವೃತ್ತ, ಬಾಷಾ ನಗರ ಸಂದಿಸುವಂತಹ ವಿಶಾಲ ರಸ್ತೆಯಲ್ಲಿ ಅತಿ ವೇಗ, ಅಜಾಗರೂಕತೆಯಿಂದ ಚಾಲಕರು ವಾಹನಗಳ ಚಾಲನೆ ಮಾಡುತ್ತಾರೆ. ಲಘು ವಾಹನ, ಭಾರಿ ವಾಹನ, ಪ್ರಯಾಣಿಕರ ವಾಹನ, ಸರಕು ಸಾಗಾಣಿಕೆ ವಾಹನ ಹೀಗೆ ಅತಿ ವೇಗ, ಅಜಾಗರೂಕತೆಯಿಂದ ಸಾಗುವ ವಾಹನಗಳಿಂದಾಗಿ ಪದೇಪದೇ ಅಪಘಾತವಾಗುತ್ತಿವೆ ಎಂದು ದೂರಿದರು.

ಡಿವೈಎಸ್ಪಿ, ಪಾಲಿಕೆ ಆಯುಕ್ತರಿಗೆ 3-4 ಸಲ ಮನವಿ ಮಾಡಿದ್ದರೂ ಆ ಭಾಗದಲ್ಲಿ ಬ್ರೇಕ್ ಬ್ರಿಡ್ಜ್ ಅಳ‍ವಡಿಸುತ್ತಿಲ್ಲ. ನಿತ್ಯವೂ ಶಾಲಾ-ಕಾಲೇಜಿಗೆಂದು ಸಾವಿರಾರು ಮಕ್ಕಳು, ವಯೋ ವೃದ್ಧರು, ವಿಕಲಚೇತನರು ಇಲ್ಲಿ ಸಾಗುತ್ತಾರೆ. ತುತ್ತು ಅನ್ನಕ್ಕಾಗಿ, ನಾಲ್ಕು ಕಾಸು ದುಡಿಯಲೆಂದು ಕೆಲಸಕ್ಕೆ ಹೋಗುವವರೂ ಇಲ್ಲಿಯೇ ಸಂಚರಿಸುತ್ತಾರೆ. ಇಲ್ಲಿ ಪಾದಚಾರಿ ಮಾರ್ಗವೂ ಸಹಿತ ಸರಿಯಾಗಿಲ್ಲ. ವಿಶಾಲ ರಸ್ತೆ ಕಾರಣಕ್ಕೆ, ಎಲ್ಲಿಯೂ ಹಂಪ್‌ಗಳಿಲ್ಲದ್ದರಿಂದ ಅತಿ ವೇಗವಾಗಿ ವಾಹನ ಚಾಲನೆ ಮಾಡುವುದರಿಂದ ಮಕ್ಕಳಾದಿಯಾಗಿ ಎಲ್ಲರೂ ಪ್ರಾಣ ಕೈಯಲ್ಲೇ ಹಿಡಿದು ಸಾಗಬೇಕಾಗಿದೆ ಎಂದು ಅಳಲು ತೋಡಿಕೊಂಡರು.

ಸಂಘಟನೆಯ ಮಹೊಮ್ಮದ್ ಇರ್ಫಾನ್, ಅಬು ಸಲೇಹಾ, ಮಕ್ಸೂದ್ ಹುಸೇನ್, ಪಾಪು, ಆರ್.ಧ್ರುವ, ಅನಿಲಕುಮಾರ, ಮಂಜಮ್ಮ, ವಿಶಾಲಾಕ್ಷಿ, ಮನ್ಸೂರ್ ಇದ್ದರು.

- - -

(ಕೋಟ್‌) ಸಾಮಾನ್ಯ ಪಾದಚಾರಿಗಳಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು, ವಾಹನಗಳ ವೇಗಕ್ಕೆ, ಅತಿ ವೇಗದ ಚಾಲನೆಗೆ ಬ್ರೇಕ್ ಹಾಕಬೇಕೆಂಬುದು ನಮ್ಮ ಒತ್ತಾಯ. ಅಲ್ಲಿ ಒಂದೂವರೆ ತಿಂಗಳಲ್ಲೇ 18 ಅಪಘಾತಗಳು ಸಂಭವಿಸಿವೆ.

- ನೂರುಲ್ಲಾ, ರಾಜ್ಯಾಧ್ಯಕ್ಷ.

- - -

-12ಕೆಡಿವಿಜಿ5:

ದಾವಣಗೆರೆಯಲ್ಲಿ ಸೋಮವಾರ ಭಾರತೀಯ ಅಂಬೇಡ್ಕರ್ ಮಹಾಸೇನೆ ರಾಜ್ಯಾಧ್ಯಕ್ಷ ನೂರುಲ್ಲಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.