ರಸ್ತೆ ಜಲಾವೃತಗೊಂಡು ತೊಂದರೆಯಾದ ಮಹಾಬಲೇಶ್ವರ ಮಂದಿರದ ಪಶ್ಚಿಮ ದ್ವಾರದ ಮುಂಭಾಗದ ರಸ್ತೆ ಮತ್ತಿತರ ಸ್ಥಳಕ್ಕೆ ಶಾಸಕ ದಿನಕರ ಶೆಟ್ಟಿ ಭೇಟಿ ಪರಿಶೀಲನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಗೋಕರ್ಣ
ರಸ್ತೆ ಜಲಾವೃತಗೊಂಡು ತೊಂದರೆಯಾದ ಮಹಾಬಲೇಶ್ವರ ಮಂದಿರದ ಪಶ್ಚಿಮ ದ್ವಾರದ ಮುಂಭಾಗದ ರಸ್ತೆ ಮತ್ತಿತರ ಸ್ಥಳಕ್ಕೆ ಶಾಸಕ ದಿನಕರ ಶೆಟ್ಟಿ ಭೇಟಿ ಪರಿಶೀಲನೆ ನಡೆಸಿದರು.ಚರಂಡಿ ಹೂಳೆತ್ತದೆ ಬಿಟ್ಟಿರುವುದು ಹಾಗೂ ಅಂಗಡಿ ಮುಂಗಟ್ಟುಗಳು ಚರಂಡಿ ಆಕ್ರಮಿಸಿರುವುದನ್ನ ಗಮನಿಸಿದ ಶಾಸಕರು ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ತೀವ್ರ ತರಾಟೆಗೆ ತೆಗೆದುಕೊಂಡರು. ಧಾರ್ಮಿಕ ಕ್ಷೇತ್ರ, ಪ್ರವಾಸಿ ತಾಣದ ಅವಸ್ಥೆಯ ಬಗ್ಗೆ ಪತ್ರಿಕೆಯಲ್ಲಿ ಬರುತ್ತಿದೆ ಎಂದು ಪ್ರಸ್ತಾಪಿಸಿ ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಕನಿಷ್ಠ ಪಂಚಾಯಿತಿ ಮಟ್ಟದಲ್ಲಿ ನಿರ್ವಹಿಸಬೇಕಾದ ಕಾರ್ಯ ಮಾಡುತ್ತಿಲ್ಲ ಎಂದರೆ ಹೇಗೆ ಎಂದು ಗರಂ ಆದರು. ಹಲವು ಸಬೂಬು ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಅಧಿಕಾರಿಗೆ ತಕ್ಷಣ ಕಾರ್ಯ ಪ್ರಾರಂಭಿಸಿ ಸರಿಪಡಿಸಿ ಎಂದು ಸೂಚಿಸಿದರು.
ಮಹಾಬಲೇಶ್ವರ ಮಂದಿರದ ಪಶ್ಚಿಮ ದ್ವಾರದಿಂದ ಮುಖ್ಯ ಕಡಲತೀರದ ಬಳಿಯ ಸಂಗಮ ನಾಲಾ ಸೇರುವರೆಗಿನ ಚರಂಡಿಯನ್ನ ಬುಧವಾರದಿಂದ ಸ್ವಚ್ಛಗೊಳಿಸಬೇಕು. ಇದರ ಮೇಲೆ ಆಕ್ರಮಿಸಿದ ಅಂಗಡಿ ತೆಗೆದು ಹಾಕಿ ಎಂದಾಗ ಕಾಮಗಾರಿ ಆರಂಭಿಸುತ್ತೇವೆ ಎಂದು ಗ್ರಾಪಂ ಅಧಿಕಾರಿ ಉತ್ತರಿಸಿದರು.ಸ್ವಚ್ಛತೆಗೆ ಸೂಚನೆ:
ಎಲ್ಲೆಂದರಲ್ಲಿ ಕಸ ರಾಶಿಯಿಂದ ಗಬ್ಬು ನಾರುತ್ತಿರುವ ಬಗ್ಗೆ ಸಾರ್ವಜನಿಕರು ಶಾಸಕರ ಬಳಿ ವಿವರಿಸಿ ಕಸ ವಿಲೇವಾರಿ ಸರಿಯಾದ ನಿರ್ವಹಣೆ ಮಾಡುತ್ತಿಲ್ಲ ಎಂದು ದೂರಿದರು. ತಕ್ಷಣ ಶಾಸಕರು ಹತ್ತಿರದಲ್ಲೇ ರಾಶಿ ಬಿದ್ದ ಕಸವನ್ನ ತಕ್ಷಣ ತೆಗೆದು ಸ್ವಚ್ಛಗೊಳಿಸುವಚಂತೆ ಪಿಡಿಓಗೆ ಸೂಚಿಸಿದರು. ಸೋಮವಾರ ಮಾತ್ರ ಕಸ ತೆಗೆಸಿದ್ದೇನೆ ಎಂದು ಉತ್ತರಿಸಿದಾಗ ಈಗ ತೆಗೆಯರಿ ಎಂದರು.ಸ್ವಚ್ಛತೆಯ ನಿರ್ವಹಣೆಯ ಬಗ್ಗೆ ಸ್ಥಳದಿಂದಲೇ ಸಂಬಂಧಿಸಿದ ಇಲಾಖೆಗೆ ದೂರವಾಣಿ ಮೂಲಕ ಮಾತನಾಡಿದ ಶಾಸಕರು ಕೇವಲ ಸಭೆ ನಡೆಸಿದರೆ ಸಾಲುದು ನಿರ್ವಹಣೆ ಬೇಕು ಎಂದು ತಿಳಿಸಿದರು.
ಈ ವೇಳೆ ಗ್ರಾಪಂ ಅಭಿವೃದ್ದಿ ಅಧಿಕಾರಿ ವಿ.ಎ. ಪಟಗಾರ, ಕಾರ್ಯದರ್ಶಿ ಮಂಜುನಾಥ, ಪಿ.ಎಸ್.ಐ. ಅನಿಲ್, ತಾಪಂ ಮಾಜಿ ಸದಸ್ಯ ಮಹೇಶ ಶೆಟ್ಟಿ, ಗ್ರಾಪಂ ಮಾಜಿ ಸದಸ್ಯ ಪ್ರಭಾಕರ ಪ್ರಸಾದ, ಪ್ರಮುಖರಾದ ಗಣಪತಿ ನಾಯ್ಕ, ಸತೀಶ ದೇಶಭಂಡಾರಿ, ಲಕ್ಷ್ಮೀಶ ಗೌಡ, ಗಣೇಶ ಪಂಡಿತ್, ಸಂದೀಪ ಅಗಸಾಲಿ, ರಾಮು ಕೆಂಚನ್, ಮಹೇಶ ನಾಯಕ ಸ್ಥಳೀಯರಿದ್ದರು.