ವಾಹನಗಳ ದಟ್ಟಣೆ ನಿಯಂತ್ರಿಸಲು ರಸ್ತೆ ಅಗಲೀಕರಣ: ಭಂಡಾರಿ ಶ್ರೀನಿವಾಸ್

| Published : May 18 2025, 02:19 AM IST

ವಾಹನಗಳ ದಟ್ಟಣೆ ನಿಯಂತ್ರಿಸಲು ರಸ್ತೆ ಅಗಲೀಕರಣ: ಭಂಡಾರಿ ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರುಪಟ್ಟಣದ ಮುಖ್ಯ ರಸ್ತೆಯಲ್ಲಿ ಸಂಚರಿಸುವ ವಾಹನಗಳ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ಪುರಸಭಾ ನಿಧಿಯ ₹19.50 ಲಕ್ಷ ವೆಚ್ಚದ ಅನುದಾನದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಮಾಡಲಾಗುತ್ತಿದೆ ಎಂದು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಕಡೂರು

ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಂಚರಿಸುವ ವಾಹನಗಳ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ಪುರಸಭಾ ನಿಧಿಯ ₹19.50 ಲಕ್ಷ ವೆಚ್ಚದ ಅನುದಾನದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಮಾಡಲಾಗುತ್ತಿದೆ ಎಂದು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.ಶನಿವಾರ ಪೇಟೆ ಗಣಪತಿ-ಆಂಜನೇಯಸ್ವಾಮಿ ವೃತ್ತದ ಬಳಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಿಂದ ಜೀವನ್ ಆಸ್ಪತ್ರೆ ತನಕ ಚರಂಡಿ ಜೊತೆಗೆ ರಸ್ತೆ ಅಗಲೀಕರಣಕ್ಕಾಗಿ ಪುರಸಭೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿ ಅಗಲೀಕರಣದ ಕಾಮಗಾರಿ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.ಈಗಾಗಲೇ ಪುರಸಭೆಯಿಂದ ಪಟ್ಟಣದ ಹೃದಯ ಭಾಗದ ಕೆಎಲ್‍ವಿ ವೃತ್ತದ ಬಳಿ ರಸ್ತೆ ಅಗಲೀಕರಣ ಕಾಮಗಾರಿಯನ್ನು ಪೂರ್ಣ ಗೊಳಿಸಲಾಗಿದೆ. ಮುಂದುವರಿದ ಭಾಗವಾಗಿ ಮಳೆ ನೀರು ಮತ್ತು ಚರಂಡಿ ನೀರು ರಸ್ತೆಯಲ್ಲಿ ಸಂಗ್ರಹಗೊಂಡು ಪಾದಚಾರಿಗಳಿಗೆ ಸಮಸ್ಯೆ ಆಗಿರುವುದನ್ನು ಮನಗೊಂಡು ಸಕರಾತ್ಮಕ ಸ್ಪಂದನೆಯೊಂದಿಗೆ ಮುಂದುವರಿದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ವಾಹನ ದಟ್ಟಣೆ ಜೊತೆಗೆ ಪಾದಾಚಾರಿಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿ ಕೊಟ್ಟಂತಾಗಲಿದೆ ಎಂದರು.ಈ ಕುರಿತು ಪುರಸಭೆ ಸಾಮಾನ್ಯ ಸಭೆಯಲ್ಲಿ ಪಟ್ಟಣದ ಅಭಿವೃದ್ಧಿ ದೃಷ್ಟಿಕೋನಕ್ಕೆ ಮುಂದುವರಿಸಲು ಪುರಸಭಾ ನಿಧಿ ಅನುದಾನದಲ್ಲಿ ಚರಂಡಿ ವ್ಯವಸ್ಥೆ ಹಾಗೂ ರಸ್ತೆ ಅಗಲೀಕರಣ ಕಾಮಗಾರಿ ನಡೆಸಲಾಗುತ್ತಿದೆ. ಇದಕ್ಕೆ ಈ ಭಾಗದ ಅಂಗಡಿ ಮಾಲೀಕರು ಮತ್ತು ವರ್ತಕರು ಅಭಿವೃದ್ಧಿ ಕಾಮಗಾರಿಗೆ ಯಾವುದೇ ಅಪಸ್ವರಕ್ಕೆ ಆಸ್ಪದ ನೀಡದಂತೆ ಪಟ್ಟಣದ ಬೆಳವಣಿಗೆಗೆ ಸಹಕರಿಸುತ್ತಿರುವುದು ಶ್ಲಾಘನೀಯ ಸಂಗತಿ. ರಸ್ತೆ ಅಗಲೀಕರಣದ ಜೊತೆಗೆ ಹಾದು ಹೋಗಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆಯೂ ನಡೆಯಲಿದೆ. ಚರಂಡಿ ನೀರು ಸರಾಗವಾಗಿ ಹರಿಯುವಂತೆ ಗುಣಮಟ್ಟದ ಚರಂಡಿ ನಿರ್ಮಾಣಕ್ಕೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದರು.ಪುರಸಭೆಗೆ ಕಂದಾಯ ಪಾವತಿದಾರರ ಸಹಕಾರದಿಂದ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ಕೊಡಲಾಗುತ್ತಿದೆ. ಈಗಾಗಲೇ ನಿರೀಕ್ಷೆಗೂ ಮೀರಿ ಪಟ್ಟಣದ ಜನತೆ ಕಂದಾಯ ಪಾವತಿ ಮಾಡುತ್ತಿದ್ದು, ಸರಕಾರ ನಿಗಧಿತ ಅವಧಿಯಲ್ಲಿ ಕಂದಾಯ ಪಾವತಿ ಮಾಡಿದರೆ ಶೇ.5ರಷ್ಟು ರಿಯಾಯಿತಿಯನ್ನು ಜೂ.30 ರವರೆಗೂ ಗಡುವು ವಿಸ್ತರಿಸಿರುವುದು ಪಾವತಿದಾರರಿಗೆ ಹೆಚ್ಚಿನ ಅನುಕೂಲವಾಗಿದೆ. ಕಂದಾಯ ಪಾವತಿ ಮಾಡದ ವಾಣಿಜ್ಯ ಮಳಿಗೆಗಳು ಮತ್ತು ನಿವೇಶನದ ಪಾವತಿದಾರರು ಸಕಾಲದಲ್ಲಿ ಕಂದಾಯ ಪಾವತಿಸಿ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಗೋವಿಂದರಾಜು, ಮರುಗುದ್ದಿ ಮನು, ಮೋಹನ್, ಸಂದೇಶ್‍ಕುಮಾರ್, ಪುರಸಭೆ ಅಭಿಯಂತರರಾದ ಎಸ್.ಎಸ್. ಜಗದೀಶ್, ಆರ್.ಪಿ. ಜಗದೀಶ್, ಮುಖಂಡರಾದ ಚಿನ್ನರಾಜು, ಡಿಶ್ ಮಂಜುನಾಥ್, ಕಾಂತರಾಜ್ ಹಾಗೂ ಸಿಬ್ಬಂದಿ ಇದ್ದರು.17ಕೆಕೆಡಿಯು1.ಕಡೂರು ಪಟ್ಟಣದ ಗಣಪತಿ-ಆಂಜನೇಯಸ್ವಾಮಿ ವೃತ್ತದ ಬಳಿ ಆಂಜನೇಯಸ್ವಾಮಿ ದೇವಸ್ಥಾನದಿಂದ ಜೀವನ್ ಆಸ್ಪತ್ರೆತನಕ ಚರಂಡಿ ಜೊತೆಗೆ ರಸ್ತೆ ಅಗಲೀಕರಣವನ್ನು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿ ಅಗಲೀಕರಣದ ಕಾಮಗಾರಿ ಪರಿಶೀಲಿಸಿದರು.