ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಕ್ಯಾಷ್ ಕಲೆಕ್ಟಿಂಗ್ ಏಜೆಂಟ್ನ್ನು ರಸ್ತೆಯಲ್ಲಿಯೇ ಅಡ್ಡಗಟ್ಟಿದ ದುಷ್ಕರ್ಮಿಗಳ ಗ್ಯಾಂಗ್ ಬರೋಬ್ಬರಿ ₹31.38 ಲಕ್ಷ ನಗದನ್ನು ದೋಚಿ ಪರಾರಿಯಾಗಿರುವ ಘಟನೆ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಸಮೀಪದ ಸಕಲವಾರ ರಸ್ತೆಯಲ್ಲಿ ಭಾನುವಾರ ಸಂಜೆ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು ದಕ್ಷಿಣ
ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಕ್ಯಾಷ್ ಕಲೆಕ್ಟಿಂಗ್ ಏಜೆಂಟ್ನ್ನು ರಸ್ತೆಯಲ್ಲಿಯೇ ಅಡ್ಡಗಟ್ಟಿದ ದುಷ್ಕರ್ಮಿಗಳ ಗ್ಯಾಂಗ್ ಬರೋಬ್ಬರಿ ₹31.38 ಲಕ್ಷ ನಗದನ್ನು ದೋಚಿ ಪರಾರಿಯಾಗಿರುವ ಘಟನೆ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಸಮೀಪದ ಸಕಲವಾರ ರಸ್ತೆಯಲ್ಲಿ ಭಾನುವಾರ ಸಂಜೆ ನಡೆದಿದೆ.ಕೈಲಾಸ್ ಎಂಬ ಯುವಕ ದರೋಡೆಗೆ ಒಳಗಾದ ವ್ಯಕ್ತಿ. ಈತ ಕ್ಯಾಷ್ ಕಲೆಕ್ಟಿಂಗ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದು, ಉಡಾನ್ ಕಂಪನಿಯ ವಿವಿಧ ಬ್ರಾಂಚ್ಗಳಿಂದ ಹಣ ಸಂಗ್ರಹಿಸುತ್ತಿದ್ದ. ಎಂದಿನಂತೆ ಭಾನುವಾರ ಕೂಡ ವಿವಿಧ ಬ್ರಾಂಚ್ಗಳಿಂದ ಒಟ್ಟು ₹31,38,625 ಹಣ ಸಂಗ್ರಹ ಮಾಡಿಕೊಂಡು ಮಾಡಿ ತನ್ನ ಜುಪಿಟರ್ ಸ್ಕೂಟರ್ನ ಡಿಕ್ಕಿಯಲ್ಲಿಟ್ಟುಕೊಂಡು ಹೋಗುತ್ತಿದ್ದ. ಈ ಸಂದರ್ಭದಲ್ಲಿ ಎರಡು ಬೈಕ್ಗಳಲ್ಲಿ ಸುಮಾರು 1 ಕಿ.ಮೀ ಕೈಲಾಸ್ನ ಸ್ಕೂಕಟರ್ ಬೆನ್ನಟ್ಟಿಕೊಂಡು ಬಂದ ನಾಲ್ವರು ಅಪರಿಚಿತ ದುಷ್ಕರ್ಮಿಗಳು ಬನ್ನೇರುಘಟ್ಟ ಸಮೀಪದ ನಿರ್ಜನ ಪ್ರದೇಶವಾದ ಸಕಲವಾರ ರಸ್ತೆಯಲ್ಲಿ ಅಡ್ಡಗಟ್ಟಿದ್ದಾರೆ. ಆಗ ದರೋಡೆಕೋರರು ಕೈಲಾಸ್ಗೆ ಲಾಂಗ್ ತೋರಿಸಿ ಹಲ್ಲೆಗೈದು ಬೆದರಿಸಿದ್ದು, ಆತನ ಬಳಿ ಇದ್ದ ₹31,38,625 ಹಣವನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದಾರೆ.ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕಾಗಮಿಸಿದ ಬನ್ನೇರುಘಟ್ಟ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದ್ದು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.