ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಕರಾವಳಿ ಕರ್ನಾಟಕದಲ್ಲೇ ಮೊದಲ ಬಾರಿಗೆ ಲೆನ್ಸರ್ ರೋಬೊಟಿಕ್ ಲೇಸರ್ ಕ್ಯಾಟರಾಕ್ಟ್ ಸರ್ಜರಿ ಸಿಸ್ಟಮ್ ಜಾರಿಗೊಳಿಸುವ ಮೂಲಕ ಮಂಗಳೂರಿನ ಜನತೆಗೆ ಗುಣಮಟ್ಟಹಾಗೂ ಅತ್ಯುತ್ತಮ ಸೇವೆ ನೀಡಲು ಪ್ರಸಾದ್ ನೇತ್ರಾಲಯ ಮುಂದಾಗಿದೆ ಎಂದು ಕೇಂದ್ರ ಇಂಧನ ಖಾತೆ ರಾಜ್ಯ ಸಚಿವ ಶ್ರೀಪಾದ್ ಎಸ್ಸೋ ನಾಯಕ್ ಹೇಳಿದರು.ಅವರು ಭಾನುವಾರ ಕರಾವಳಿ ಕರ್ನಾಟಕದಲ್ಲಿ ಕಣ್ಣಿನ ಚಿಕಿತ್ಸೆಗೆ ಹೆಸರುವಾಸಿಯಾದ ಪ್ರಸಾದ್ ನೇತ್ರಾಲಯ ಸಮೂಹ ಆಸ್ಪತ್ರೆಯ ಮಂಗಳೂರಿನ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ನೂತನ ರೋಬೋಟಿಕ್ ಕಣ್ಣಿನ ಪೊರೆ ಚಿಕಿತ್ಸೆ ವ್ಯವಸ್ಥೆಯನ್ನು ಉದ್ಘಾಟಿಸಿ ಮಾತನಾಡಿದರು.
ಗೋವಾದಲ್ಲಿ ಡಾ. ಕೃಷ್ಣ ಪ್ರಸಾದ್ ಕೂಡ್ಲು ಅವರು ಅನೇಕ ಶಿಬಿರಗಳನ್ನು ಆಯೋಜಿಸಿ 600ಕ್ಕೂ ಅಧಿಕ ಮಂದಿಗೆ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಇದು ವೈದ್ಯಕೀಯ ಸೇವೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಮಂಗಳೂರಿನ ಖಾಸಗಿ ಸಂಸ್ಥೆಗಳು ಸಾಧನೆ ಮಾಡಿವೆ. ವೈದ್ಯಕೀಯ ಸೇವೆ ಪಡೆಯಲು ನಮ್ಮಲ್ಲಿ ಅನೇಕ ಮಂದಿ ಕಷ್ಟದಲ್ಲಿದ್ದಾರೆ. ಅವರನ್ನು ಗಮನದಲ್ಲಿರಿಸಿ ಸ್ವಯಂ ಪ್ರೇರಿತವಾಗಿ ಸೇವಾ ಮನೋಭಾವದ ಮೂಲಕ ನೆರವಾಗುವುದು ಭಾರತದ ಸಂಸ್ಕೃತಿಯಾಗಿದೆ. ಸಮಾಜಮುಖಿ ಸೇವೆ ನೀಡುವ ಮೂಲಕ ಸಂಸ್ಥೆ ಬೆಳೆಯಲಿ ಎಂದರು.ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಯು.ಟಿ. ಇಫ್ತಿಕಾರ್ ಮಾತನಾಡಿ, ಪ್ರಸಾದ್ ನೇತ್ರಾಲಯ ಆರೋಗ್ಯ ಕ್ಷೇತ್ರದಲ್ಲಿ ಅನೇಕ ಕೊಡುಗೆ ನೀಡಿದೆ. ಮುಂದೆಯೂ ಉತ್ತಮ ಸೇವೆ ನೀಡಲಿ ಎಂದರು.ಲೆನ್ಸಾರ್ ವಿಷನ್ ಪ್ರೈ.ಲಿ. ಭಾರತ ಮತ್ತು ದಕ್ಷಿಣ ಏಷ್ಯಾ ಸ್ಥಾಪಕ ನಿರ್ದೇಶಕ ಸುಧೀರ್ ಕೌಲ್ ಮಾತನಾಡಿ, ಕರಾವಳಿ ಕರ್ನಾಟಕದಲ್ಲಿ ಮೊದಲ ಲೇಸರ್ ಟೆಕ್ನಾಲಜಿಯಾಗಿ ಪ್ರಸಾದ್ ನೇತ್ರಾಲಯದಲ್ಲಿ ಆರಂಭಗೊಂಡಿದೆ. ಹಲವು ವರ್ಷದಿಂದ ಹೊಸ ತಂತ್ರಜ್ಞಾನಕ್ಕೆ ಶ್ರಮಿಸಲಾಗುತ್ತಿದೆ. ಆಧುನಿಕ ತಂತ್ರಜ್ಞಾನ ಕರಾವಳಿಗೆ ಒದಗಿಸಿ ಜನರ ಸೇವೆಗೆ ಪ್ರಸಾದ್ ನೇತ್ರಾಲಯ ಮುಂದಾಗಿದೆ. ಇದರಿಂದ ವೈದ್ಯರು ರೋಗಿಗಳ ಸಮಯ ಉಳಿತಾಯವಾಗಲಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ಮೆಡಿಕಲ್ ಹಬ್ ಆಗಿರುವ ಕರಾವಳಿ ಕರ್ನಾಟಕದಲ್ಲಿ ದೊಡ್ಡ ಕೊಡುಗೆ ನೀಡಲು ಪ್ರಸಾದ್ ನೇತ್ರಾಲಯ ಮುಂದಾಗಿರುವುದು ಶ್ಲಾಘನೀಯ ಎಂದರು.ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣ ಪ್ರಸಾದ್ ಕೂಡ್ಲು ಸ್ವಾಗತಿಸಿದರು. ಡಾ. ವಿಕ್ರಮ್ ಜೈನ್ ವಂದಿಸಿದರು. ಪ್ರೊ. ಬಾಲಕೃಷ್ಣ ಮಡ್ಡೋಡಿ ನಿರೂಪಿಸಿದರು.ಪಾಲಿಕೆ ಸದಸ್ಯ ಸಂದೀಪ್ ಗರೋಡಿ, ನೇತ್ರಜ್ಯೋತಿ ಚಾರಿಟೆಬಲ್ ಟ್ರಸ್ಟ್ ಟ್ರಸ್ಟಿ ರಘುರಾಮ್ ರಾವ್, ವೀಣಾ ರಾವ್, ಆಡಳಿತ ನಿರ್ದೇಶಕಿ ರಶ್ಮಿ ಕೃಷ್ಣ ಪ್ರಸಾದ್, ನಿರ್ದೇಶಕರಾದ ಡಾ. ಹರೀಶ್ ಶೆಟ್ಟಿ, ಡಾ. ಜಾಕೋಬ್ ಚಾಕೋ ಇದ್ದರು.-----------------