ಸಾರಾಂಶ
ಮುದ್ದೇಬಿಹಾಳ : ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆ ಭಾನುವಾರ ತಡರಾತ್ರಿ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆ ಸುರಿದಿದೆ. ಪರಿಣಾಮ ಕೆಲವು ಕಡೆಗಳಲ್ಲಿ ಹಳ್ಳ ಹಾಗೂ ಕೆರೆ ಕಟ್ಟೆಗಳು ತುಂಬಿ ಹರಿದಿವೆ. ನೀರಿನ ರಭಸಕ್ಕೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಕೆಲವು ಮನೆಗಳಿಗೆ ಹಾನಿಯಾಗಿದೆ.
ಭಾನುವಾರ ತಡರಾತ್ರಿ ರೋಹಿಣಿ ಮಳೆ ಅಬ್ಬರ ಕಂಡು ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಮೂರ್ನಾಲ್ಕು ದಿನಗಳಿಂದ ಬಿಸಿಲಿನಂದ ಕೂಡಿದ್ದ ಝಳದಲ್ಲಿ ಜನರು ಮಳೆ ಯಾವಾಗ ಬರುತ್ತದೆ ಎಂದು ಆಕಾಶದತ್ತ ನೋಡುತ್ತಿದ್ದರು. ಹವಾಮಾನ ಇಲಾಖೆ ಜೂ.೨ರಿಂದ ೫ ೮, ೯ರವರೆಗೆ ಕೆಲವು ಮಳೆ ಸುರಿಯುವ ಅಥವಾ ಗುಡುಗು ಸಹಿತ ಸಾಮಾನ್ಯವಾಗಿ ಮೋಡಕವಿದ ವಾತಾವರಣ ಇರುತ್ತದೆ ಎಂದು ಮಾಹಿತಿ ನೀಡಿತ್ತು. ಅದರಂತೆ ಭಾನುವಾರ ಮುದ್ದೇಬಿಹಾಳ ಪಟ್ಟಣದಲ್ಲಿ ೫೫.೫೦ ಮಿ.ಮೀ , ನಾಲತವಾಡ ೨೨.೪೦ಮಿ.ಮೀ, ಢವಳಗಿ ೧೨೦ಮಿ.ಮೀ, ತಾಳಿಕೋಟಿ೭೧.೩೦ಮಿ.ಮೀ ಭೀಕರ ಮಳೆ ಸುರಿದಿದೆ. ಇದರಿಂದ ಭೂಮಿ ತಂಪೆರೆಯುವದರೊಂದಿಗೆ ಅಪಾರ ಪ್ರಮಾಣ ಹಾನಿಯನ್ನು ಉಂಟು ಮಾಡಿದೆ.
ಎನ್ಡಿಆರ್ಎಫ್ ನಿಯಮದಡಿ ಪರಿಹಾರ:
ತಹಸೀಲ್ದಾರ್ ಬಸವರಾಜ ನಾಗರಾಳ ಮಾಹಿತಿ ನೀಡಿ, ಹವಾಮಾನ ಇಲಾಖೆ ಮುನ್ಸೂಚನೆಯಂತೆ ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆ ಉತ್ತಮ ಮಳೆಯಾಗಿದೆ. ಆದರೆ ಮಳೆಯಿಂದಾಗಿ ಸಂಪೂರ್ಣ ಬಿದ್ದು ಹಾನಿಗೊಳಗಾದ ಮನೆಗಳಿಗೆ ಎನ್ಡಿಆರ್ಎಫ್ ನಿಯಮದಂತೆ ₹1.20 ಲಕ್ಷ ಹಾಗೂ ಭಾಗಶಃ ಮನೆ ಬಿದ್ದು ಹಾನಿಗೊಳಗಾದ ಮನೆಗಳಿಗೆ ₹6500 ಸರ್ಕಾರ ಆಯಾ ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರ ನೀಡಲು ಸೂಚಿಸಿದೆ. ಅದರಂತೆ ಅಧಿಕಾರಿಗಳು ಸಮಕ್ಷಮ ಸ್ಥಳ ಪರಿಶಲನೆ ನೆಡೆಸಿ ಸಂಪೂರ್ಣ ವರದಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಿ ಕೊಡುವ ಮೂಲಕ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ಮಳೆಯಿಂದ ಎಲ್ಲೆಲ್ಲಿ ಹಾನಿ?
ತಾಲೂಕಿನ ಅಡವಿ ಹುಲಗಬಾಳದಿಂದ ತಾಂಡಾಗಳಿಗೆ ಹೋಗುವ ದೊಡ್ಡ ಹಳ್ಳ ಸಂಪೂರ್ಣ ತುಂಬಿ ಹರಿಯುತ್ತಿರುವುದರಿಂದ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡು ಜನರು ಪರದಾಡಬೇಕಾಯಿತು. ಕುಂಟೋಜಿ ಗ್ರಾಮದ ಮಲ್ಲನಗೌಡ ಬಸನಗೌಡ ಬಿರಾದಾರ, ಢವಳಗಿ ಗ್ರಾಮದ ಭೀಮಪ್ಪ ಮಾದರ ಹಾಗೂ ಗುರಲಿಂಗಪ್ಪ ಮೂಲಿಮನಿ, ಚೊಂಡಿ ಗ್ರಾಮದ ಯಂಕವ್ವ ಪಾಟೀಲ ಎಂಬುವರ ಮನೆಗಳು ಮಳೆಯಿಂದ ಹಾನಿಗೊಳಗಾಗಿವೆ. ಪಟ್ಟಣದ ಹುಡ್ಕೋ ಬಡಾವಣೆ, ಮಾರುತಿನ ನಗರ, ವಿದ್ಯಾನಗರ, ಮಹಾಂತೇಶ ನಗರ, ಕಿಲ್ಲಾ ಗಲ್ಲಿ, ಸರಾಫ ಬಜಾರ, ಕುಂಬಾರ ಓಣಿ, ಮೈಬೂಬ ನಗರ ಬಡಾವಣೆಗಳಲ್ಲಿ ಮಳೆಯಿಂದಾಗಿ ಚರಂಡಿಗಳು ಸಂಪೂರ್ಣ ತುಂಬಿ ರಸ್ತೆ ಮೇಲೇಲ್ಲ ಹರಿದು ವಾಹ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.