ಕನ್ನಡಪ್ರಭ ವಾರ್ತೆ, ಕೊಪ್ಪ

ಮಲೆನಾಡಿನ ಸಂಸ್ಕೃತಿ, ಜನಪದ ಕಲೆ, ಹಾಡು, ನೃತ್ಯ ಮತ್ತು ಸಂಪ್ರದಾಯ ನಮ್ಮ ಜೀವನದ ಅವಿಭಾಜ್ಯ ಅಂಗ. ಆಧುನಿಕತೆ ಅಬ್ಬರದ ನಡುವೆಯೂ ನಮ್ಮ ಬೇರು ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವ ಮಹತ್ತರ ಕಾರ್ಯ ಜಾನಪದ ಸ್ಪರ್ಧೆಗಳು ಮಾಡುತ್ತಿವೆ ಎಂದು ಅಮ್ಮ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ್ ಎಸ್. ಶೆಟ್ಟಿ ಅಭಿಪ್ರಾಯಪಟ್ಟರು.

ಮಲೆನಾಡು ಜಾನಪದ ಸ್ಪರ್ಧೆ ಅಂಗವಾಗಿ ಹಲುಮಕ್ಕಿ ಬಿಜಿಎಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಮಲೆನಾಡ ಜಾನಪದ ಕಲಾ ವೈಭವದಲ್ಲಿ ಮಾತನಾಡಿ ಯುವ ಪೀಳಿಗೆ ಜಾನಪದ ಕಲೆಯತ್ತ ಆಸಕ್ತಿ ತೋರುತ್ತಿರುವುದು ಅತ್ಯಂತ ಸಂತಸ ಹಾಗೂ ಆಶಾದಾಯಕ ಬೆಳವಣಿಗೆ ಎಂದರು. ಜಾನಪದ ಕಲೆಗಳು ಕೇವಲ ಮನರಂಜನೆಗಾಗಿ ಹುಟ್ಟಿದವುಗಳಲ್ಲ. ಅವು ನಮ್ಮ ಪೂರ್ವ ಜರ ಜೀವನಶೈಲಿ, ಮೌಲ್ಯ, ಸಂಸ್ಕೃತಿ, ನಂಬಿಕೆ ಹಾಗೂ ಸಮಾಜದ ಇತಿಹಾಸ. ಮುಂದಿನ ತಲೆಮಾರಿಗೆ ತಲುಪಿಸುವ ಅಮೂಲ್ಯ ನಿಧಿಯಾಗಿವೆ ಎಂದು ಹೇಳಿದರು.

ಮಲೆನಾಡಿನ ಜಾನಪದ ಗೀತೆಗಳು ಇಲ್ಲಿನ ಪ್ರಕೃತಿ ಸೌಂದರ್ಯ, ಕೃಷಿ ಸಂಸ್ಕೃತಿ, ಗ್ರಾಮೀಣ ಬದುಕು ಹಾಗೂ ಜನರ ಭಾವನೆ ಪ್ರತಿಬಿಂಬಿಸುತ್ತವೆ. ಕೋಲಾಟದಂತಹ ಜನಪದ ನೃತ್ಯ ಸಹಕಾರ, ಸಾಮರಸ್ಯ ಹಾಗೂ ಸಮುದಾಯದ ಏಕತೆ ಸಂದೇಶ ಸಾರಿದರೆ ಭಾವಗೀತೆಗಳು ಕನ್ನಡ ಸಾಹಿತ್ಯದ ಸೊಗಡನ್ನು ಜನಮಾನಸಕ್ಕೆ ತಲುಪಿಸುತ್ತವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕುಂಚೂರು ರತ್ನಾಕರ,ಕಾರ್ಯಕ್ರಮ ಉದ್ಘಾಟಿಸಿದ್ದ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಕಳಸಪ್ಪ ಅವರನ್ನು ಸುಧಾಕರ್ ಶೆಟ್ಟಿ ಅಭಿನಂದಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದ ಅಮ್ಮ ಫೌಂಡೇಶನ್ ತಾಲೂಕು ವಿಭಾಗದ ಮುಖ್ಯಸ್ಥ ಸತೀಶ್, ಮನೋಜ್ ರಮೇಶ್ ಹಾಗೂ ಶೇಖರ್ ಪೂಜಾರಿ ಅವರ ಸೇವೆ ಶ್ಲಾಘಿಸಿದರು.


ಮಲೆನಾಡಿನ ಸಂಸ್ಕೃತಿ ಮತ್ತು ಪರಂಪರೆ ಉಳಿಸಿ ಬೆಳೆಸುವಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮ ಮಹತ್ತರ ಪಾತ್ರ ವಹಿಸುತ್ತಿದೆ ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲಿ ಎಂದು ಹಾರೈಸಿದರು.