ಮಕ್ಕಳ ಆರೈಕೆಯಲ್ಲಿ ಆಯಾಗಳ ಪಾತ್ರ ಮಹತ್ವದ್ದು

| Published : Dec 16 2024, 12:47 AM IST

ಸಾರಾಂಶ

ದತ್ತು ಕೇಂದ್ರದಲ್ಲಿ ಮಕ್ಕಳ ಆರೈಕೆಯ ಸೇವೆಯಲ್ಲಿರುವ ಆಯಾಗಳ ಪಾತ್ರ ಅತ್ಯಂತ ಜವಾಬ್ದಾರಿಯಿಂದ ಕೂಡಿರುತ್ತದೆ. ಮಗುವಿಗೆ ಮಾತೃ ವಾತ್ಸಲ್ಯ ನೀಡಬೇಕು

ಗದಗ: ನವಜಾತ ಮತ್ತು ವರ್ಷದೊಳಗಿನ ಮಕ್ಕಳನ್ನು ಪಾಲಕ ಪೋಷಕರು, ಆಯಾಗಳು ಬಹಳಷ್ಟು ಜಾಗೃತಿಯಿಂದ ಆರೈಕೆ ಮಾಡುವದು ಅಗತ್ಯವಿದೆ ಎಂದು ಗದುಗಿನ ಚಿಕ್ಕಮಕ್ಕಳ ತಜ್ಞ ಡಾ. ಶಿವನಗೌಡ ಜೋಳದರಾಶಿ ಹೇಳಿದರು.

ಅವರು ಬೆಟಗೇರಿಯ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆಯಲ್ಲಿ ಗುರುವಾರ ದತ್ತು ಕೇಂದ್ರದಲ್ಲಿ ಮಕ್ಕಳ ಆರೈಕೆಯ ಸೇವೆಯಲ್ಲಿರುವ ಆಯಾಗಳಿಗೆ ಏರ್ಪಡಿಸಿದ್ದ ಬಾಲ ಮಕ್ಕಳ ಆರೈಕೆಯಲ್ಲಿ ಆಯಾಗಳ ಪಾತ್ರ ಕಾರ್ಯಾಗಾರದಲ್ಲಿ ಮಾತನಾಡಿದರು.

ನವಜಾತ ಶಿಶುವಿಗೆ ಹುಟ್ಟಿದ ತಕ್ಷಣ ಮತ್ತು ಮೊದಲ 28 ದಿನಗಳವರೆಗೆ ಕೆಲವು ಅಗತ್ಯ ಆರೈಕೆಗಳ ಅವಶ್ಯಕವಾಗಿರುತ್ತದೆ. ವೈದ್ಯಕೀಯ ಅಧ್ಯಯನದ ಪ್ರಕಾರ ಉಪಚಾರವಿಲ್ಲದೆ ವರ್ಷಗೊಳಗಿನ ಪ್ರತಿ 10 ಮಕ್ಕಳಲ್ಲಿ 5 ಮಕ್ಕಳು ಮೊದಲ 28 ದಿನ ತುಂಬುವುದರೊಳಗೆ ಮರಣ ಹೊಂದುತ್ತದೆ.

ದತ್ತು ಕೇಂದ್ರದಲ್ಲಿ ಮಕ್ಕಳ ಆರೈಕೆಯ ಸೇವೆಯಲ್ಲಿರುವ ಆಯಾಗಳ ಪಾತ್ರ ಅತ್ಯಂತ ಜವಾಬ್ದಾರಿಯಿಂದ ಕೂಡಿರುತ್ತದೆ. ಮಗುವಿಗೆ ಮಾತೃ ವಾತ್ಸಲ್ಯ ನೀಡಬೇಕು. ಮಗುವಿನ ಹಸಿವು ನಿದ್ರೆ ಸಕಾಲಕ್ಕೆ ವ್ಯವಸ್ಥೆ ಮಾಡಬೇಕು. ಪರಿತ್ಯಕ್ತ ಮಕ್ಕಳ ಸೇವೆಯಲ್ಲಿರುವ ಆಯಾಗಳ ಪಾತ್ರ ಹಿರಿದಾದದ್ದು ಮತ್ತು ಗೌರವಯುತವಾದದ್ದು. ತಾಯಿ ಇಲ್ಲದ ಮಕ್ಕಳಿಗೆ ಆಯಾಗಳು ನಿರ್ವಹಿಸುವ ತಾಯಿಯ ಪಾತ್ರ ನಿಜಕ್ಕೂ ಮನ ಮಿಡಿಯುವಂತದ್ದು ಎಂದು ಹೇಳಿ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆಯ ಕಾರ್ಯ ವೈಖರಿ ಹಾಗೂ ಆಯಾಗಳ ಸೇವೆ ಶ್ಲ್ಯಾಘಿಸುವ ಮೂಲಕ ಎಲ್ಲ ಆಯಾಗಳನ್ನು ಗೌರವಿಸಿದರು.

ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ಅಧ್ಯಕ್ಷ ಮಲ್ಲಿಕಾರ್ಜುನ ಬೆಲ್ಲದ ಮಾತನಾಡಿದರು. ದತ್ತು ಕೇಂದ್ರದ ಮಾಜಿ ಅಧ್ಯಕ್ಷ ಮಂಜುನಾಥ ಚನ್ನಪ್ಪನವರ, ಡಾ. ಶ್ವೇತಾ ಪಾಟೀಲ, ಬಿ.ಬಿ. ಕೆಂಚರಡ್ಡಿ, ಶಾರದಮ್ಮ ಜೋಳದರಾಶಿ, ನೀಲವ್ವ ರೊಟ್ಟಿ, ಪಾರವ್ವ ಹಿರೇಮಠ, ಸರೋಜಾ ಕುಂದಗೋಳ, ಸುಂದರಾಬಾಯಿ ಅರವಟಗಿ, ಸುಶೀಲಾ ಬಡಿಗೇರ, ಸುವರ್ಣಾ ಬಾರಕೇರ, ಬಸವ್ವ ಶ್ಯಾವಿ, ಆಶಿಸ್ ತೋನ್ನಿವಾಲ, ಮಾಧುಸಾ ಮೇರವಾಡೆ, ಶಿವಾನಂದ ಮುಳಗುಂದ, ಸತೀಶ್ ರಾಹುತರ ಉಪಸ್ಥಿತರಿದ್ದರು. ಲಲಿತಾಬಾಯಿ ಮೇರವಾಡೆ ವಂದಿಸಿದರು. ನರಸಿಂಹ ಕಾಮಾರ್ತಿ ನಿರೂಪಿಸಿದರು.