ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸಮಾಜದ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮಹಿಳಾ ಶಕ್ತಿಯನ್ನು ಬಳಕೆ ಮಾಡಿಕೊಳ್ಳಲು ಅಗತ್ಯ ವೇದಿಕೆ ನಿರ್ಮಾಣ ಮಾಡಬೇಕಿದೆ ಎಂದು ನಿವೃತ್ತ ಪ್ರಾಂಶುಪಾಲ ಕೆ.ಕಾಳೇಗೌಡ ಹೇಳಿದರು.

ಪಟ್ಟಣದ ಹೊರವಲಯದ ಪುರ ಗ್ರಾಮದ ಶ್ರೀಮಹದೇಶ್ವರ ದೇವಾಲಯದ ಸಭಾಂಗಣದಲ್ಲಿ ನಡೆದ ತಾಲೂಕು ಗ್ರಾಮ ವಿಕಾಸ ಮಹಿಳಾ ಪ್ರಮುಖರ ಅಭ್ಯಾಸ ವರ್ಗವನ್ನು ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಮಹಿಳೆಯರಿಗೆ ವಿಶಿಷ್ಟ ಪಾತ್ರವಿದೆ. ಮನಸ್ಸು ಮಾಡಿದರೆ ಯಾವುದೇ ಸಾಧನೆಯನ್ನು ಮಾಡಬಹುದು. ಗ್ರಾಮ ಪರಿವರ್ತನೆ ಮತ್ತು ವಿಕಾಸದಲ್ಲಿ ಮಹಿಳೆಯರು ಭಾಗವಹಿಸುವಂತೆ ಕರೆ ನೀಡಿದರು.

ಒಬ್ಬ ಮಹಿಳೆ ತನ್ನ ಕುಟುಂಬ ಮತ್ತು ಸಮಾಜವನ್ನು ತಿದ್ದಿ ಬದಲಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಇದಕ್ಕಾಗಿ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ಅವಶ್ಯಕವಾಗಿದೆ. ಉತ್ತಮ ಗುಣ ಬೆಳೆಸಿಕೊಂಡು ಮಹಿಳೆಯರು ಜೀವನದಲ್ಲಿ ಯಶಸ್ಸು ಎಂಬ ಬೆಳಕು ಮೂಡಲು ತಾಳ್ಮೆ ಮತ್ತು ಶ್ರಮ ಎಂಬ ಕತ್ತಲೆಯನ್ನು ದಾಟಬೇಕು ಎಂದರು.

ಮಹದೇಶ್ವರ ದೇವಾಲಯದ ಗುರುಗಳಾದ ಬಸಪ್ಪ ಸ್ವಾಮೀಜಿ ಮಾತನಾಡಿ, ಸಂಸ್ಕಾರವಂತ ಮಕ್ಕಳು ಸಮಾಜದ ಆಸ್ತಿಯಾಗುತ್ತಾರೆ. ಹೀಗಾಗಿ ಮಹಿಳೆಯರು ಮನೆಯಲ್ಲಿಯೇ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು ಎಂದು ಸಲಹೆ ನೀಡಿದರು.


ಕಾರ್ಯಕ್ರಮದಲ್ಲಿ ಗ್ರಾಮ ವಿಕಾಸ ತಂಡದ ಮುಖ್ಯಸ್ಥ ಚಿನ್ನೆನಳ್ಳಿ ತಮ್ಮಣ್ಣಗೌಡ, ತಾಲೂಕು ಪಾಲಕರದ ರಂಗೇಗೌಡ, ಕೆ.ಆರ್.ಪೇಟೆಯ ಶೈಲೆಂದ್ರ, ಬಿದರಹಳ್ಳಿ ರಘುರಾಮ್, ವಡ್ಡರಹಳ್ಳಿ ಮಹಾದೇವ, ತಾಲೂಕು ಸಂಯೋಜಕ ಕಾರಗನಹಳ್ಳಿ ಯತೀಶ್, ಗ್ರಾಮ ವಿಕಾಸ ಕೇಂದ್ರದ ಸಂಯೋಜಕ ಕರೋಟಿ ಪ್ರವೀಣ, ದೊಡ್ಡ ಗುರುಮೂರ್ತಿ, ವಡ್ಡರಹಳ್ಳಿಯ ಮಂಜುನಾಥ್, ಗೂಡೆ ಹೊಸಹಳ್ಳಿಯ ಬಸವರಾಜ್, ಸಿಂಗನಹಳ್ಳಿಯ ಶಿವರಾಮ್ ಮಾತನಾಡಿದರು.

ಗ್ರಾಮ ವಿಕಾಸ ಅಭ್ಯಾಸ ವರ್ಗದಲ್ಲಿ ಭಾಗವಹಿಸಿದ್ದ ಮಹಿಳಾ ಪ್ರಮುಖರಾದ ಭಾರತಿ, ಧನಲಕ್ಷ್ಮಿ, ಭಾಗ್ಯಶ್ರೀ, ಇಂದ್ರ, ಚಂದ್ರಮ್ಮ, ಗೀತಾ, ನಾಗರತ್ನ, ಕಾವ್ಯಶ್ರೀ, ಪ್ರೇಮ, ಹೇಮಾ, ಕೋಮಲ, ಉಷ, ದಿವ್ಯ, ಧನಶ್ರೀ, ಕೀರ್ತನ, ರಂಜಿತ, ಅರ್ಚನಾ, ಭವ್ಯ, ಸುಮಿತ್ರ, ರಾಧಾ, ಶಶಿಕಲಾ, ಸವಿತಾ, ಪಲ್ಲವಿ, ಮಂಜುಳಾ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.