ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಅಧಿಕಾರಕ್ಕಾಗಿ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿದೆ. ಸಂವಿಧಾನದಲ್ಲಿರುವ ಬಹುತ್ವದ ಅಂಶವನ್ನು ಬಿಜೆಪಿ ಸರ್ಕಾರ ಧಿಕ್ಕರಿಸಿದೆ ಎಂದು ಸಿಪಿಐ ರಾಜ್ಯ ಸಹ ಕಾರ್ಯದರ್ಶಿ ಅಮ್ಜದ್ ಆರೋಪಿಸಿದರು.ನಗರದ ರೋಟರಿ ಸಭಾಂಗಣದಲ್ಲಿ ಸಿಪಿಐ ಜಿಲ್ಲಾ ಮಂಡಳಿಯು ಭಾನುವಾರ ಆಯೋಜಿಸಿದ್ದ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಕ್ಕೆ ಬಂಡವಾಳಶಾಹಿಗಳ ಹಿತಾಸಕ್ತಿ ಮುಖ್ಯವಾಗಿದೆ. ಅವರಿಗಾಗಿ ಮಾತ್ರವೇ ಆರ್ಥಿಕ ನೀತಿ ರೂಪಿಸಿದೆ. ಶ್ರೀಮಂತ– ಬಡವರ ಅಂತರ ಹೆಚ್ಚಿಸಿದೆ. ಶ್ರೀಮಂತರು ಶೇ. 70ರಷ್ಟು ಸಂಪತ್ತು ಹೊಂದಿದ್ದಾರೆ ಎಂದು ಅವರು ಹೇಳಿದರು.ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜನರ ಸಮಸ್ಯೆ ಬಗೆಹರಿಸದೇ, ಭಾವನಾತ್ಮಕ ರಾಜಕಾರಣದಲ್ಲಿ ನಿರತವಾಗಿದೆ. ಭ್ರಷ್ಟಾಚಾರ ಕಿತ್ತೊಗೆಯುತ್ತೇವೆ, ವಿದೇಶದ ಕಪ್ಪು ಹಣ ಹಿಂದಕ್ಕೆ ತರುತ್ತೇವೆ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂಬ ಪ್ರಧಾನಿ ಮೋದಿ ಭರವಸೆ ಹುಸಿಯಾಗಿದೆ ಎಂದು ಅವರು ದೂರಿದರು.ಅಡುಗೆ ಅನಿಲ, ಪೆಟ್ರೋಲ್ ಮುಂತಾದ ಅಗತ್ಯ ವಸ್ತುಗಳ ಬೆಲೆ 2014ಕ್ಕೂ ಇಂದಿಗೂ ಬಹಳ ಹೆಚ್ಚಾಗಿದೆ. ಇದರಿಂದಾಗಿ ಸಾಮಾನ್ಯರ ಜೀವನ ದುಸ್ತರವಾಗಿದೆ. ಕಮ್ಯುನಿಸ್ಟ್ ಪಕ್ಷ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಿದೆ. ಜಾತಿ, ಧರ್ಮ ಆಧಾರಿತ ರಾಜಕಾರಣವು ಪಕ್ಷವನ್ನು ಅಧಿಕಾರದಿಂದ ದೂರ ಇಟ್ಟಿದೆ. ಚುನಾವಣಾ ರಾಜಕಾರಣದಲ್ಲಿ ನಾವು ಹಿನ್ನಡೆ ಸಾಧಿಸಿದ್ದೇವೆ ಎಂಬುದು ನಿಜ. ಆದರೆ, ಜನಪರ ಹೋರಾಟದಲ್ಲಿ ಇಂದಿಗೂ ಸಕ್ರಿಯ ಎಂದರು.ಪದಾಧಿಕಾರಿಗಳಾದ ರಾಮಕೃಷ್ಣ, ಎನ್.ಕೆ. ದೇವದಾಸ್, ರಾಜು, ಸೋಮರಾಜ್ ಅರಸ್ ಇದ್ದರು.