ಬುದ್ದಿಯನ್ನು ಪ್ರಚೋದನೆ ಗೊಳಿಸುವುದೇ ರಾಜಹಾಸ್ಯದ ಲಕ್ಷಣ ಎಂದು ಅಣಕುವಾಡು ಖ್ಯಾತಿಯ ಎನ್. ರಾಮನಾಥ್ ಹೇಳಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಬುದ್ದಿಯನ್ನು ಪ್ರಚೋದನೆ ಗೊಳಿಸುವುದೇ ರಾಜಹಾಸ್ಯದ ಲಕ್ಷಣ ಎಂದು ಅಣಕುವಾಡು ಖ್ಯಾತಿಯ ಎನ್. ರಾಮನಾಥ್ ಹೇಳಿದರು. ಪಟ್ಟಣದ ಲಯನ್ಸ್ ಭವನದಲ್ಲಿ ಲಯನ್ಸ್ ಚಾರಿಟಬಲ್ ಟ್ರಸ್ಟ್, ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪ, ಕನ್ನಡ ಸಾಹಿತ್ಯ ಪರಿಷತ್ತು, ಚಿದಂಬರೇಶ್ವರ ಗ್ರಂಥಾಲಯ ಹಾಗೂ ಕುವೆಂಪು ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಹಾಸ್ಯ ಸಂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮನ್ನು ನಾವು ಅಣಕಿಸಿಕೊಳ್ಳುವುದೇ ಶ್ರೇಷ್ಠ ಹಾಸ್ಯ. ಈ ಹಿನ್ನಲೆಯಲ್ಲಿ ಅಣಕುವಾಡುಗಳೂ ಸಹ ಹಾಸ್ಯ ಸಾಹಿತ್ಯದ ಅವಿಭಾಜ್ಯ ಅಂಗಗಳೆನಿಸಿವೆ. ಅಣಕ ಎಂದರೆ ಕೇವಲ ಅಣಕಿಸುವುದೇ ಅಲ್ಲ, ಅನುಕರಿಸುವುದು ಎಂಬ ಅರ್ಥವೂ ಇದೆ. ಜನಪ್ರಿಯ ಹಾಡು, ಭಾವಗೀತೆ, ಜನಪದ ಗೀತೆಗಳ ಅಣಕುವಾಡುಗಳ ಮೂಲಕ ಸಮಾಜ, ವ್ಯವಸ್ಥೆ, ವ್ಯಕ್ತಿಗಳ ವಿಡಂಬನೆಯು ಜನರನ್ನು ಸುಲಭವಾಗಿ ತಲುಪುತ್ತದೆ ಎಂದರು.

ಎನ್.ರಾಮನಾಥ್ ರವರು ಹತ್ತಾರು ಜನಪ್ರಿಯ ಅಣಕುವಾಡುಗಳ ಮೂಲಕ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದರು. ಕವಿ ಡಾ. ಎ. ಭಾನು ಕೇಳುಗರ ಸ್ವಾರಸ್ಯಕರ ಪ್ರಶ್ನೆಗಳನ್ನು ಸವಾಲಾಗಿ ಸ್ವೀಕರಿಸಿ ಪದಗಳೊಂದಿಗೆ ಪನ್ ಮಾಡಿ ಹಾಸ್ಯ ರಸೋಸ್ಪತ್ತಿ ಮಾಡಿದರು. ನಗೆ ಸರಣಿಯನ್ನೇ ಸೃಷ್ಟಿಸುತ್ತಾ ಹೋಗುವುದು ರಾಮನಾಥ್ ಅವರ ವೈಶಿಷ್ಟ್ಯ ಎಂದ ಅವರು ರಾಮನಾಥ್ ಬರೆದಿರುವ ಮಂಕುದಿಣ್ಣೆಯ ಕಗ್ಗದ ಹಲವು ಪದ್ಯಗಳನ್ನು ವ್ಯಾಖ್ಯಾನಿಸಿ ಸಭಿಕರನ್ನು ರಂಜಿಸಿದರು. ಕಾರ್ಯಕ್ರಮದಲ್ಲಿ ಅಣಕು ರಾಮನಾಥ್ ಹಾಗೂ ಡಾ.ಭಾನು ಅವರನ್ನು ಸನ್ಮಾನಿಸಲಾಯಿತು. ವಿಶೃಂಖ ವಿಶಿಷ್ಟ ರೀತಿಯಲ್ಲಿ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಡಾ. ನಾಗರಾಜ್, ಬರಹಗಾರ ತುರುವೇಕೆರೆ ಪ್ರಸಾದ್, ಸಿ.ಪಿ. ಪ್ರಕಾಶ್, ಸುನಿಲ್ ಬಾಬು, ಉಷಾ ಶ್ರೀನಿವಾಸ್ ಮೊದಲಾದವರು ಹಾಸ್ಯ ಪ್ರಸಂಗಗಳನ್ನು ಹಂಚಿಕೊಂಡರು. ವಾಸವಿ ಸತೀಶ್, ವಿರೂಪಾಕ್ಷ ಹಲವು ಅಣಕುವಾಡುಗಳನ್ನು ಹಾಡಿ ರಂಜಿಸಿದರು. ಲಯನ್ಸ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಚೌದ್ರಿ ನಾಗೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಸಾಪ ಅಧ್ಯಕ್ಷ ಡಿ.ಪಿ.ರಾಜು, ಚಿದಂಬರೇಶ್ವರ ಗ್ರಂಥಾಲಯದ ಸಂಸ್ಥಾಪಕ ಟಿ.ರಾಮಚಂದ್ರು, ಲಯನ್ಸ್ ಕ್ಲಬ್ ಅಧ್ಯಕ್ಷ ಪರಮೇಶ್, ಕುವೆಂಪು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವೆಂಕಟೇಶ್, ಇನ್ನರ್ವೀಲ್ ಕ್ಲಬ್ ಆಫ್ ಸಂಕಲ್ಪದ ಅಧ್ಯಕ್ಷೆ ಇಂದಿರಾ ಪ್ರಭಾಕರ್, ಲ.ಗಂಗಾಧರ ದೇವರ ಮನೆ ಇತರರು ಉಪಸ್ಥಿತರಿದ್ದರು. ಶರೀತಾ ಪ್ರಾರ್ಥಿಸಿದರು, ಎಸ್.ಎಂ. ಕುಮಾರಸ್ವಾಮಿ ಸ್ವಾಗತಿಸಿದರು. ಉಪನ್ಯಾಸಕಿ ಹಂಸರೇಖಾ ನಿರೂಪಿಸಿದರು. ಲ.ಎಚ್.ಆರ್. ರಂಗನಾಥ್ ವಂದಿಸಿದರು.