ನಮ್ಮ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವವರು ನಾವು ಸಮಾಜದಲ್ಲಿ ತಂದಿರುವ ಬದಲಾವಣೆಯ ಬಗ್ಗೆ ಮಾತನಾಡುವುದಿಲ್ಲ. ಮಹಿಳೆಯರ ಉಚಿತ ಪ್ರಯಾಣ ಹಾಗೂ ಗೃಹಲಕ್ಷ್ಮಿ ಯೋಜನೆಯಡಿ ನೀಡಲಾಗುತ್ತಿರುವ ೨ಸಾವಿರ ಸಹಾಯಧನ ಮಹಿಳೆಯರನ್ನು ಆರ್ಥಿಕವಾಗಿ ಶಕ್ತಿಗೊಳಿಸಿದೆ. ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ನಮ್ಮ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವವರು ನಾವು ಸಮಾಜದಲ್ಲಿ ತಂದಿರುವ ಬದಲಾವಣೆಯ ಬಗ್ಗೆ ಮಾತನಾಡುವುದಿಲ್ಲ. ಮಹಿಳೆಯರ ಉಚಿತ ಪ್ರಯಾಣ ಹಾಗೂ ಗೃಹಲಕ್ಷ್ಮಿ ಯೋಜನೆಯಡಿ ನೀಡಲಾಗುತ್ತಿರುವ ೨ಸಾವಿರ ಸಹಾಯಧನ ಮಹಿಳೆಯರನ್ನು ಆರ್ಥಿಕವಾಗಿ ಶಕ್ತಿಗೊಳಿಸಿದೆ. ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ತಾಲೂಕಿನ ಸಿಎನ್ ದುರ್ಗಾ ಹೋಬಳಿ ಜೆಟ್ಟಿ ಅಗ್ರಹಾರ, ತೀತಾ, ಬೈರಗೊಂಡ್ಲು, ಪುಟ್ಟಸಂದ್ರ ಗ್ರಾಮದಲ್ಲಿ ತುಮಕೂರು ಹಾಲು ಒಕ್ಕೂಟದಿಂದ ನೂತನವಾಗಿ ನಿರ್ಮಿಸಿಲಾದ ಬಿಎಂಸಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.೨೦೨೩ರ ಚುನಾವಣೆಯ ಪ್ರಣಾಳಿಕೆಯನ್ನು ನಾನೇ ರೂಪಿಸಿದ್ದೆ, ಗ್ಯಾರಂಟಿಗಳಿಗೆ ಹಣ ಹೊಂದಿಸುವುದು ಕಷ್ಟವೆಂದವರು ಆದರೆ ಇಂದು ಸರ್ಕಾರವು ಸಮರ್ಪಕವಾಗಿ ನಿರ್ವಹಿಸಿ ಉತ್ತಮ ಆಡಳಿತ ನೀಡುತ್ತಿದೆ ಎಂದು ಟೀಕಾಕಾರಿಗೆ ಪರೋಕ್ಷವಾಗಿ ಕುಟುಕಿದರು. ರೈತರನ್ನು ಹೈನುಗಾರಿಕೆಗೆ ಉತ್ತೇಜಿಸುವ ಉದ್ದೇಶದಿಂದ ಸರ್ಕಾರವು ಲೀಟರ್‌ಗೆ ೫.ರೂ ಪ್ರೋತ್ಸಾಹ ಧನ ನೀಡುತ್ತಿದೆ. ರಾಜ್ಯದಲ್ಲಿ ತುಮುಲ್ ಸಂಸ್ಥೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಇಡೀ ದೇಶಕ್ಕೆ ಮಾದರಿಯಾಗಿದೆ ಎಂದರು.

ಎಲೆರಾಂಪುರ ಶ್ರೀಮಠದ ಡಾ.ಹನುಮಂತನಾಥ ಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿ ಕಳಂಕ ರಹಿತವಾಗಿ ತುಮಕೂರು ಹಾಲು ಒಕ್ಕೂಟ ಕಾರ್ಯನಿರ್ವಹಿಸುತ್ತಿರುವುದು ನಮ್ಮ ಹೆಮ್ಮೆ. ಶಾಸಕ ವೆಂಕಟೇಶ್ ತುಮುಲ್ ಅಧ್ಯಕ್ಷರಾದ ಮೇಲೆ ಸಾಕಷ್ಟು ಕಾರ್ಯಗಳಾಗಿದ್ದು, ಕೊರಟಗೆರೆ ರೈತರ ಬದುಕು ಅಸನಾಗಿಸಲು ಹೆಚ್ಚು ಒತ್ತನ್ನು ನೀಡಬೇಕಿದೆ ಎಂದು ತಿಳಿಸಿದರು.ತುಮುಲ್ ಅಧ್ಯಕ್ಷ ಹಾಗೂ ಪಾವಗಡ ಶಾಸಕ ವೆಂಕಟೇಶ್ ಮಾತನಾಡಿ, ರೈತ ಭವನಕ್ಕೆ ಜಾಗ ಗುರುತಿಸಲು ಗೃಹ ಸಚಿವರು ಜಿಲ್ಲಾಧಿಕಾರಿಗಳಿಗೆ ಆದೇಶಿಸಿದ್ದು, ನಿರ್ಮಾಣಕ್ಕೆ ೧೦ಕೋಟಿ ಹಣವನ್ನು ಬಿಡುಗಡೆ ಮಾಡುವುದರ ಬಗ್ಗೆ ಸರ್ಕಾರ ಭರವಸೆ ನೀಡಿದೆ. ತುಮುಲ್ ಅಧ್ಯಕ್ಷನಾಗಿ ಸಹಕಾರ ಸಂಘದ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು.ಅಧ್ಯಕ್ಷನಾದ ೧೫ ದಿನದಲ್ಲಿ ೧೦೦ಕೋಟಿ ಹಣ ಸರ್ಕಾರದಿಂದ ತುಮುಲ್‌ಗೆ ಬಂದಿದೆ, ೧೦೦ ಕೋಟಿ ಹಣದಲ್ಲಿ ಪ್ರತಿ ಲೀಟರ್‌ಗೆ ಎರಡೂವರೆ. ರೂ ನೀಡಿ ತುಮುಲ್ ನಷ್ಟದ ಸಂದರ್ಭದಲ್ಲಿ ಎರಡು ರುಪಾಯಿ ಹಿಂಪಡೆದಿದ್ದೇವೆ, ಲಾಭ ಬಂದ ಕೂಡಲೇ ರಾಸುಗಳಿಗೆ ವಿಮೆ, ಮಿಲ್ಕಿಂಗ್ ಮಿಷಿನ್‌ನ್ನು ಫಲಾನುಭವಿಗಳಿಗೆ ರೈತರಿಗೆ ಸಹಕಾರ ಸಂಘ ನೆರವಾಗಿದೆ, ಜಿಲ್ಲೆಯಲ್ಲಿ ಮೊದಲಿಗೆ ಕೇವಲ ೭ಲಕ್ಷ ಲೀಟರ್ ಹಾಲು ಉತ್ಪಾದನೆಯಿತ್ತು, ಈಗ ೧೦ಲಕ್ಷ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ೧೫ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೈರಿಯನ್ನ ಅತೀ ಶೀಘ್ರದಲ್ಲಿ ಗೃಹ ಸಚಿವರಿಂದ ಉದ್ಘಾಟನೆಯಾಗಲಿದೆ ಎಂದರು. ಈ ವೇಳೆ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿ.ಪಂ ಸಿಇಓ ಪ್ರಭು, ಎಸ್ಪಿ ಆಶೋಕ್, ಕೆಪಿಸಿಸಿ ಕಾರ್ಯದರ್ಶಿ ವಸಂತಮ್ಮ, ತುಮಕೂರು ಕೆಎಂಎಫ್ ಎಂಡಿ ಶ್ರೀನಿವಾಸ್, ಗೃಹ ಸಚಿವರ ವಿಶೇಷ ಅಧಿಕಾರಿ ಡಾ.ಕೆ ನಾಗಣ್ಣ, ಮಧುಗಿರಿ ಎಸಿ ಗೋಟೂರು ಶಿವಪ್ಪ, ತಹಸೀಲ್ದಾರ್ ಮಂಜುನಾಥ.ಕೆ, ತುಮುಲ್ ನಿರ್ದೇಶಕ ಸಿದ್ದಗಂಗಯ್ಯ, ಗ್ಯಾರಂಟಿ ಸಮಿತಿ ಅಧ್ಯಕ್ಷ ವೆಂಕಟೇಶ್, ತಾ.ಪಂ ಇಒ ಅಪೂರ್ವ, ಜಿ.ಪಂ ಮಾಜಿ ಸದಸ್ಯ ಮಹಾಲಿಂಗಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ಥ್ ನಾರಾಯಣ್, ಅರಕೆರೆ ಶಂಕರ್, ಅಗ್ರಹಾರ ಗ್ರಾ.ಪಂ ಅಧ್ಯಕ್ಷ ಸಿ.ಡಿ ಪ್ರಭಾಕರ್, ತೀತಾ ಗ್ರಾ.ಪಂ ಅಧ್ಯಕ್ಷೆ ಸುಮಂಗಳಮ್ಮ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಮ್ಮ ಸೇರಿದಂತೆ ಇತರರು ಇದ್ದರು. ಶ್ರೀಮಹಾಲಕ್ಷ್ಮೀ ಕೃಪೆಯಿಂದ ಮುಖ್ಯಮಂತ್ರಿಯಾಗಲಿ..!

೨೦೧೩ರ ವಿಧಾನ ಸಭೆ ಚುನಾವಣೆಯಲ್ಲಿ ಡಾ.ಜಿ ಪರಮೇಶ್ವರ ಅವರು ಗೆದ್ದಿದ್ದರೆ ಅಂದು ಅವರೇ ಈ ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶವಿತ್ತು, ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ಕೃಪೆಯಿಂದ ಈ ಬಾರಿ ಮುಖ್ಯಮಂತ್ರಿ ಆಗುವ ಅವಕಾಶ ಸಿಗಲಿ ಎಂದು ಶನಿವಾರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಎಲೆರಾಂಪುರ ಡಾ.ಹನುಮಂತನಾಥ ಸ್ವಾಮೀಜಿ ಮತ್ತು ಪಾವಗಡ ಶಾಸಕ ವೆಂಕಟೇಶ್ ಗೃಹ ಸಚಿವರ ಪರವಾಗಿ ಬ್ಯಾಟ್ ಬೀಸಿದರು.