- ಮಲೇಬೆನ್ನೂರು ಪುರಸಭೆ ಅಧ್ಯಕ್ಷೆ ಅಕ್ಕಮ್ಮ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ । ಹೈಮಾಸ್ಟ್ ಬೀದಿದೀಪ ದುಸ್ತಿಗೆ ಒತ್ತಾಯ
- - -ಕನ್ನಡಪ್ರಭ ವಾರ್ತೆ ಮಲೇಬೆನ್ನೂರು ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ ತ್ಯಾಜ್ಯ ದಾಸ್ತಾನು ಮಾಡಲು ನಿವೇಶನವಿದ್ದು, ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ₹6.50 ಕೋಟಿ ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದು ಪುರಸಭಾ ಮುಖ್ಯಾಧಿಕಾರಿ ರವಿಪ್ರಕಾಶ್ ತಿಳಿಸಿದರು.
ಪುರಸಭೆ ಸಭಾಂಗಣದಲ್ಲಿ ಸೋಮವಾರ ಅಧ್ಯಕ್ಷೆ ಅಕ್ಕಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಕೇಂದ್ರ ೨೫%, ರಾಜ್ಯ ೨೫% ಪುರಸಭೆ ೨೫% ಮತ್ತು ಬ್ಯಾಂಕ್ ಸಾಲ ೨೫% ಒಟ್ಟು ಆರೂವರೆ ಕೋಟಿ ರು. ಬರುವ ನಿರೀಕ್ಷೆ ಇದೆ. ಅಲ್ಲದೇ, ನಿರಂತರವಾಗಿ ಪುರಸಭೆಗೆ ಕಂದಾಯ ಬರುವ ಆದಾಯದ ಮೂಲಗಳನ್ನು ಗುರುತಿಸಬೇಕಿದೆ ಎಂದು ಸದಸ್ಯರ ಗಮನಕ್ಕೆ ತಂದರು.ಅಮೃತ ೨.೦ ಕಾಮಗಾರಿಯ ಸಹಾಯಕ ಎಂಜಿನಿಯರ್ ಪ್ರಕಾಶ್ ಮಾತನಾಡಿ, ಪಟ್ಟಣದಲ್ಲಿ ೪೪೦೦ ಮನೆಗಳಿದ್ದು ೪೭೦೦ ನಳಗಳನ್ನು ಸಮೀಕ್ಷೆಯಲ್ಲಿ ಗುರುತಿಸಲಾಗಿದೆ. ಜಲಸಿರಿ ಕಾಮಗಾರಿಯು ಶೇ.೩೦ ಮುಕ್ತಾಯವಾಗಿದೆ. ೨೦೨೭ರ ಮಾರ್ಚ್ ಮಾಹೆಗೆ ಸದರಿ ಕಾಮಗಾರಿ ಪೂರ್ಣಮಾಡುತ್ತೇವೆ ಎಂದು ತಿಳಿಸಿದರು.
ಸದಸ್ಯ ಷಾ ಅಬ್ರಾರ್ ಮಾತನಾಡಿ, ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ಹೈಮಾಸ್ಟ್ ಬೀದಿದೀಪ ಹಾಕಿದ್ದು, ದುರಸ್ತಿಗೆ ಬಂದಿದೆ. ಆ ಸ್ಥಳದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುವ ಸಂಭವವಿದ್ದು, ಬೀದಿದೀಪ ಅಗತ್ಯವಾಗಿದೆ. ಶೀಘ್ರವೇ ದುರಸ್ತಿ ಮಾಡಿಸಲು ಒತ್ತಾಯಿಸಿದರು.
ಹೊರವಲಯದಲ್ಲಿನ ಆಶ್ರಯ ಕಾಲೋನಿಗೆ ಡಾ.ನಾಗಪ್ಪ ಬಡಾವಣೆ ಎಂದು ನಾಮಕರಣ ಮಾಡುವ ವಿಷಯ ಬಂದಾಗ ಸದಸ್ಯರಾದ ದಾದಾಪೀರ್, ಸಾಬಿರ್ ಅಲಿ ಹಿಂದಿನ ಸಭೆಯಲ್ಲಿ ಅದೇ ಬಡಾವಣೆಗೆ ಒಬ್ಬ ವ್ಯಕ್ತಿಯ ನಾಮಕರಣ ಮಾಡಲು ನಿರ್ಣಯ ತೆಗೆದುಕೊಳ್ಳಲಾಗಿತ್ತು. ಹಿಂದಿನ ಕಡತ ಪರಿಶೀಲಿಸಿ ಸದ್ಯಕ್ಕೆ ಆ ವಿಷಯ ಚರ್ಚೆ ಬೇಡ ಎಂದು ಆಕ್ಷೇಪ ಎತ್ತಿದರು.
ಟೆಂಡರ್ನಲ್ಲಿ ಕಾಮಗಾರಿಗಳಿಗೆ ೩೫% ನೀಡಿ ಕರೆಯಲು ಅನುಮತಿ ನೀಡಿದರೆ ಕಾಮಗಾರಿಗಳು ಗುಣಮಟ್ಟದ್ದಾಗಿರದೇ ಕಳಪೆ ಆಗಲು ಸಾಧ್ಯವಾಗುತ್ತೆ ಎಂದು ಸದಸ್ಯರಾದ ಮಂಜುನಾಥ್, ಲೋಕೇಶ್, ಪ್ರಶ್ನಿಸಿ ಅಧಿಕಾರಿಗಳು ಆಲೋಚನೆ ಮಾಡಿ ಸೂಕ್ತ ನಿರ್ಮಾನಕ್ಕೆ ಬನ್ನಿ ಎಂದು ಸಲಹೆ ನೀಡಿದರು.ಪುರಸಭೆಯ ಘನತ್ಯಾಜ್ಯ ನಿರ್ವಹಣಾ ಯೋಜನಾ ತಯಾರಿಸುವ ಗುತ್ತಿಗೆದಾರರಿಗೆ ₹೩.೧೨.೯೫೦ ಲಕ್ಷ ಪಾವತಿ ಮಾಡಲು ಸಭೆ ವಿರೋಧ ವ್ಯಕ್ತಪಡಿಸಿತು. ಮೀಸಲಾತಿ ಅನ್ವಯ ಎಲ್ಲ ವರ್ಗದವರಿಗೆ ವಿವಿಧ ಯೋಜನೆಯಡಿ ಸಹಾಯಧನ ನೀಡಲು ಅರ್ಜಿ ನೀಡಲು ತಿಳಿಸಲಾಯಿತು. ವಿವಿಧ ವಿಷಯಗಳಿಗೆ ಸದಸ್ಯರಾದ ಮಂಜು, ಶಿವು ಭೋವಿ, ಸುಲೋಚನಮ್ಮ, ಖಲೀಲ್ ಸಭೆಯಲ್ಲಿ ಚರ್ಚಿಸಿದರು.
- - --ಚಿತ್ರ-೧: ಸಭೆಯಲ್ಲಿ ಸದಸ್ಯರು ಕೆಲ ವಿಷಯಗಳಿಗೆ ಆಕ್ಷೇಪ ವ್ಯಕ್ತಪಡಿಸಿದರು.