ಸಾರಾಂಶ
ಮಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ಎಸ್ಎಸ್)ದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರ ಕರ್ನಾಟಕ ಪ್ರಾಂತ ಪ್ರವಾಸ ಈ ಬಾರಿ ಕರಾವಳಿ ಜಿಲ್ಲೆಗೆ ಆಯೋಜನೆಗೊಂಡಿದೆ. ಡಾ.ಮೋಹನ್ ಭಾಗವತ್ ಅವರು ಡಿ.6 ರಿಂದ 11ರ ವರೆಗೆ ದ.ಕ.ಜಿಲ್ಲೆಗೆ ಭೇಟಿ ನೀಡಲಿದ್ದಾರೆ.
ಡಿ.6ರಂದು ಸಂಜೆ ಮಂಗಳೂರಿಗೆ ಆಗಮಿಸಲಿದ್ದಾರೆ. ಡಿ.7ರಂದು ಸಂಜೆ 5.30ಕ್ಕೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಕ್ರೀಡೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಉಳಿದಂತೆ ಸಂಘದ ಶಾಖೆಗೆ ಭೇಟಿ, ಬೌದ್ಧಿಕ್ ವರ್ಗ, ವಿವಿಧ ಬೈಠಕ್ಗಳನ್ನು ಆಯೋಜಿಸಲಾಗಿದೆ. ಡಿ.11ರಂದು ಸರಸಂಘಚಾಲಕರು ನಿರ್ಗಮಿಸಲಿದ್ದಾರೆ. ಕಲ್ಲಡ್ಕದಲ್ಲಿ ಕ್ರೀಡೋತ್ಸವ ಹೊರತುಪಡಿಸಿ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳು ಇರುವುದಿಲ್ಲ, ಉಳಿದಂತೆ ಎಲ್ಲ ಕಾರ್ಯಕ್ರಮಗಳೂ ಖಾಸಗಿಯಾಗಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
2013ರಲ್ಲಿ ಮಂಗಳೂರು ಹೊರವಲಯದ ಕೆಂಜಾರಿನಲ್ಲಿ ನಡೆದ ವಿಭಾಗ ಸಾಂಘಿಕ್ನಲ್ಲಿ ಭಾಗವಹಿಸಲು ಸರಸಂಘಚಾಲಕರು ಆಗಮಿಸಿದ್ದರು. ಅದಕ್ಕೂ ಮೊದಲು 2011ರಲ್ಲಿ ಪುತ್ತೂರು ವಿವೇಕಾನಂದ ಕಾಲೇಜು ಆವರಣದಲ್ಲಿ ನಡೆದ ನಾಲ್ಕು ದಿನಗಳ ಅಖಿಲ ಭಾರತ ಪ್ರತಿನಿಧಿ ಸಭಾ ಬೈಠಕ್ಗೆ ಆಗಮಿಸಿದ್ದರು. ಇದೇ ಮೊದಲ ಬಾರಿಗೆ ಸರಸಂಘಚಾಲಕರು ಆರು ದಿನಗಳ ಕಾಲ ದ.ಕ. ಜಿಲ್ಲೆಯಲ್ಲಿ ತಂಗುತ್ತಿರುವುದು ವಿಶೇಷ.