ಆರ್‌ಎಸ್‌ಎಸ್‌ ರಾಷ್ಟ್ರೀಯತೆ ಜಾಗೃತಗೊಳಿಸುವ ಸಂಘಟನೆ: ಮೋಹನ ಗೌಡ

| Published : Oct 03 2025, 01:07 AM IST

ಸಾರಾಂಶ

ದೇಶ ನನಗೆ ಏನು ನೀಡಿದೆ ಎನ್ನುವ ಬದಲು ದೇಶಕ್ಕೆ ನನ್ನಿಂದ ಏನು ಕೊಡುಗೆ ನೀಡಲು ಸಾಧ್ಯ ಎಂಬ ಬಗ್ಗೆ ಚಿಂತಿಸುವ ಕಾರ್ಯವಾಗಬೇಕು.

ಲಕ್ಷ್ಮೇಶ್ವರ: ಕೇಶವ ಬಲರಾಮ ಹೆಗಡೆವಾರ ಅವರಿಂದ ಜನ್ಮತಾಳಿದ ರಾಷ್ಟ್ರೀಯ ಸ್ವಯಂ ಸಂಘ ದೇಶದ ಉನ್ನತಿಗೆ ಶ್ರಮಿಸಿದ ರಾಷ್ಟ್ರೀಯತೆಯನ್ನು ಜಾಗೃತಗೊಳಿಸುವ ಏಕೈಕ ಶ್ರೇಷ್ಠ ಸಂಘವಾಗಿದ್ದು, ೧೦೦ ಸಂವತ್ಸರ ಕಂಡಿರುವ ಆರ್‌ಎಸ್‌ಎಸ್ ದೇಶದ ಬೆಳವಣಿಗೆಯಲ್ಲಿ ಅಮೂಲಾಗ್ರ ಕೊಡುಗೆ ನೀಡಿದೆ ಎಂದು ಆರ್‌ಎಸ್‌ಎಸ್‌ನ ಜಿಲ್ಲಾ ಪ್ರಮುಖ ಮೋಹನ ಗೌಡ ತಿಳಿಸಿದರು.

ಗುರುವಾರ ಪಟ್ಟಣದ ಐತಿಹಾಸಿಕ ಪ್ರಸಿದ್ಧ ಸೋಮೇಶ್ವರ ದೇವಸ್ಥಾನದಲ್ಲಿ ಆರ್‌ಎಸ್‌ಎಸ್ ೧೦೦ ವರ್ಷಗಳ ಸಂಭ್ರಮಾಚರಣೆಯಲ್ಲಿ ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡಿದರು.

ಸ್ವತಂತ್ರ ಭಾರತದ ಕಲ್ಪನೆಯಲ್ಲಿ ಉದಯಿಸಿದ ಸ್ವಯಂ ಸಂಘವು ಸ್ವಾತಂತ್ರ‍್ಯಗಳಿಸುವುಲ್ಲಿ ಮಹತ್ತರ ಪಾತ್ರ ವಹಿಸಿದೆ. ಸಂಘವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ರೇಷ್ಠ ಸಂಘ ಎನ್ನುವ ಕೀರ್ತಿಗೆ ಪಾತ್ರವಾಗಿದೆ, ಸಂಘದ ಸೇವಕರು ದೇಶದ ಬಗ್ಗೆ ಸದಾ ತುಡಿಯುವ ಮನಸ್ಸು ಹೊಂದಿದ್ದಾರೆ. ಸಾಮಾಜಿಕ ಸ್ವಾಸ್ಥ್ಯ, ಸ್ವದೇಶಿ ಬಳಕೆ, ಪರಿವಾರದ ಪರಿಕಲ್ಪನೆಯು ಸಂಘದ ಮೂಲ ಉದ್ದೇಶವಾಗಿದೆ ಎಂದರು.

ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನೂರು ವರ್ಷಗಳ ಹಿಂದೆ ವಿಜಯದಶಮಿಯ ಪವಿತ್ರ ಸಂದರ್ಭದಲ್ಲಿ ಸ್ಥಾಪಿಸಲಾಗಿದ್ದು, ದೇಶ ನನಗೆ ಏನು ನೀಡಿದೆ ಎನ್ನುವ ಬದಲು ದೇಶಕ್ಕೆ ನನ್ನಿಂದ ಏನು ಕೊಡುಗೆ ನೀಡಲು ಸಾಧ್ಯ ಎಂಬ ಬಗ್ಗೆ ಚಿಂತಿಸುವ ಕಾರ್ಯವಾಗಬೇಕು. ಶತಮಾನೋತ್ಸವ ಮಾಡಿ ಬಿಡುವುದು ಸಂಘದ ಉದ್ದೇಶವಾಗಿಲ್ಲ. ಸಮಾಜದ ಏಳ್ಗೆಗಾಗಿ ಶ್ರಮಸುವಲ್ಲಿ ಯುವ ಪಡೆ, ದೇಶದ ನಾಗರಿಕರು ನಿರಂತರವಾಗಿ ಸಾಗಬೇಕಾಗಿದೆ ಎಂದರು.ನಿವೃತ್ತ ಶಿಕ್ಷಕ ಯಲ್ಲಪ್ಪ ಲಿಂಗಶೆಟ್ಟಿ ಮಾತನಾಡಿ, ಸಂಘವು ವಿವಿಧ ಕ್ಷೇತ್ರಗಳಲ್ಲಿ ತನ್ನ ಆದ ವಿಶೇಷ ಕೊಡುಗೆಯನ್ನು ನೀಡಿದ್ದು, ದೇಶದ ಶ್ರೇಷ್ಠತೆ, ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಬೆಳಗುವ ಕಾರ್ಯವನ್ನು ಮಾಡಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಗೋಸೇವೆ, ಧರ್ಮ ಜಾಗೃತಿ ಮೂಡಿಸುವ ಕಾರ್ಯ ಮಾಡುವುದು ಅಗತ್ಯವಾಗಿದೆ ಎಂದರು.ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ನೂರು ವರ್ಷಗಳ ಹಿಂದೆ ರಾಷ್ಟ್ರೀಯತೆಯ ಬೀಜವನ್ನು ದೇಶದ ಜನತೆಯಲ್ಲಿ ಬಿತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವದ ವರ್ಷವನ್ನು ವೀಕ್ಷಿಸುವುದು ಪ್ರಸ್ತುತ ನಮ್ಮೆಲ್ಲ ಸ್ವಯಂಸೇವಕರಿಗೆ ದೊರೆತ ಸೌಭಾಗ್ಯ ಎಂದ ಅವರು, ದೇಶಕ್ಕಾಗಿ ನಾನು ಎನ್ನುವ ಭಾವನೆಯೊಂದಿಗೆ ಪ್ರತಿಯೊಬ್ಬರೂ ಸಾಗಬೇಕು ಎಂದರು.ಕಾರ್ಯಕ್ರಮದಲ್ಲಿ ತಾಲೂಕಿನ ನೂರಾರು ಸ್ವಯಂಸೇವಕರು ಪಾಲ್ಗೊಂಡು ವೀರ ಘೋಷಣೆಗಳನ್ನು ಮೊಳಗಿಸಿದರು.