ಉಡುಪಿ: ಲೋಕ ಕಲ್ಯಾಣಾರ್ಥ ನಡೆಸುತ್ತಿರುವುದರಿಂದ ಈ ಯಾಗ ಅತ್ಯಂತ ಅರ್ಥಪೂರ್ಣವಾಗಿದೆ. ಹತ್ತು ಜನರು ಸೇರಿ ಪ್ರಾರ್ಥಿಸುವುದರಿಂದ ಕಾಲಕಾಲಕ್ಕೆ ಮಳೆ ಬೆಳೆ, ಮಕ್ಕಳಿಗೆ ವಿದ್ಯೆ, ಆರೋಗ್ಯ ಹೆಚ್ಚಿ ಸಮಾಜ ಸುಭಿಕ್ಷೆಯಾಗುತ್ತದೆ ಎಂದು ರಾಜ್ಯ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಹೇಳಿದರು.
ಶುಕ್ರವಾರ ಇಲ್ಲಿನ ಕೊಡವೂರು ಶಂಕರನಾರಾಯಣ ದೇವಾಲಯದಲ್ಲಿ ಆರಂಭವಾದ ಮಹಾರುದ್ರ ಯಾಗದ ಮೊದಲ ದಿನ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.75 ವರ್ಷಗಳ ನಂತರ ಇಂತಹ ಯಾಗ ಈ ದೇವಾಲಯದಲ್ಲಿ ನಡೆಯುತ್ತಿದೆ, ಇದು ಕೇವಲ ಒಬ್ಬರಿಂದ ಸಾಧ್ಯವಿಲ್ಲ, ಪ್ರಸಾದ್ರಾಜ್ ಕಾಂಚನ್ ಅವರ ನೇತೃತ್ವದಲ್ಲಿ ಭಕ್ತರೆಲ್ಲರೂ ಸೇರಿ ಈ ಯಾಗ ಮಾಡುವುದರಿಂದ ಸಮಾಜಕ್ಕೆ ಒಳಿತಾಗುತ್ತದೆ ಎಂದು ಹಾರೈಸಿದರು.ದೇವಳದ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಅಧ್ಯಕ್ಷತೆ ವಹಿಸಿದ್ದರು, ಮಹಾರುದ್ರ ಯಾಗದ ಸೇವಾಕರ್ತರಾದ ಪ್ರಸಾದ್ ರಾಜ್ ಕಾಂಚನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಯಾಗ ಸಮಿತಿ ಪ್ರಧಾನ ಸಂಚಾಲಕ ಕೆ. ಕೃಷ್ಣಮೂರ್ತಿ ಆಚಾರ್ಯ ಸ್ವಾಗತಿಸಿದರು.
ಮಾಜಿ ಸಚಿವ ಅಭಯಚಂದ್ರ ಜೈನ್, ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ದಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಸುವರ್ಣ, ಕೊಲ್ಲೂರು ದೇವಳದ ಟ್ರಸ್ಟಿ ಸದಸ್ಯ ಸುರೇಂದ್ರ ಶೆಟ್ಟಿ, ಸಂಚಾಲಕರಾದ ತಾರಾನಾಥ ಪೂಜಾರಿ, ಪ್ರಮುಖರಾದ ಉದಯಕುಮಾರ್ ಶೆಟ್ಟಿ ಮುನಿಯಾಲು, ಕಿಶನ್ ಹೆಗ್ಡೆ ಕೊಳ್ಕೆಬೈಲು, ಅಮೃತಾ ಕೃಷ್ಣಮೂರ್ತಿ, ಸತೀಶ್ ಶೆಟ್ಟಿ ಪಟ್ಲ, ವಿವಿಧ ಸಂಘಟನೆಗಳ ನಾಗರಾಜ ಸುವರ್ಣ, ಶಂಕರ ಶೆಟ್ಟಿ ಬೆಂಗಳೂರು, ನಾರಾಯಣ ಬಲ್ಲಾಳ್, ದಿನಕರ ಹೇರೂರು, ಗುರುರಾಜ ರಾವ್, ಚಂದ್ರಶೇಖರ್, ನರೇಂದ್ರ ಎಂ., ಶಶಿಧರ ಅಮೀನ್, ನವೀನ್ ಕುಂದರ್, ರಮೇಶ್ ಮಾಸ್ಟರ್ ಮುಂತಾದವರು ವೇದಿಕೆಯಲ್ಲಿದ್ದರು. ಶಂಕರ - ನಾರಾಯಣರಲ್ಲಿ ಬೇಧ ಇಲ್ಲ: ಮಹರ್ಷಿ: ಸಾನಿಧ್ಯ ವಹಿಸಿದ್ಧ ಮಹರ್ಷಿ ಡಾ. ಆನಂದ ಗುರೂಜಿ ಅವರು, ಶಂಕರ - ನಾರಾಯಣ ಇಬ್ಬರೂ ಇಲ್ಲಿ ಜೊತೆಯಾಗಿ ನೆಲೆಸಿ, ನಮ್ಮಲ್ಲಿ ಬೇಧ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ, ಹಾಗಿರುವಾಗ ನಮ್ಮ ನಡುವೆ ಬೇಧ ಇರಬಾರದು. ಅದೂ ಶಂಕರ - ನಾರಾಯಣರಿಬ್ಬರ ಸನ್ನಿಧಿಯಲ್ಲಿ ನಡೆಯುತ್ತಿರುವ ಈ ಮಹಾರುದ್ರ ಯಾಗ ಅತ್ಯಂತ ಶ್ರೇಯಸ್ಕರವಾದುದು, ಇದರಿಂದ ಸೇವಾಕರ್ತರಿಗೆ ಮಾತ್ರವಲ್ಲದೇ ಸಮಾಜಕ್ಕೆ ಕಲ್ಯಾಣವಾಗುತ್ತದೆ ಎಂದು ಆಶೀರ್ದಿಸಿದರು.