ಸಾರಾಂಶ
ಧರ್ಮಸ್ಥಳದಲ್ಲಿ ಶ್ರೀಸನ್ನಿಧಿ ಅತಿಥಿಗೃಹದಲ್ಲಿ ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಸಂಸ್ಥೆಗಳ (ರುಡ್ಸೆಟ್ ಸಂಸ್ಥೆಗಳ) ನಿರ್ದೇಶಕರ ವಾರ್ಷಿಕ ಸಮ್ಮೇಳನ ನಡೆಯಿತು.
ಧರ್ಮಸ್ಥಳದಲ್ಲಿ ರುಡ್ಸೆಟ್ ಸಂಸ್ಥೆಗಳ ನಿರ್ದೇಶಕರ ವಾರ್ಷಿಕ ಸಮ್ಮೇಳನ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿನಿರುದ್ಯೋಗ ಸಮಸ್ಯೆ ನಿವಾರಣೆಯೊಂದಿಗೆ ದೇಶದ ಪ್ರಗತಿಯಲ್ಲಿ ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಸಂಸ್ಥೆಗಳ ಸೇವೆ ಮತ್ತು ಸಾಧನೆ ಶ್ಲಾಘನೀಯ ಎಂದು ಕೆನರಾ ಬ್ಯಾಂಕ್ನ ಮಹಾಪ್ರಬಂಧಕ ಎಂ. ಭಾಸ್ಕರ ಚಕ್ರವರ್ತಿ ಹೇಳಿದ್ದಾರೆ.ಶುಕ್ರವಾರ ಧರ್ಮಸ್ಥಳದಲ್ಲಿ ಶ್ರೀಸನ್ನಿಧಿ ಅತಿಥಿಗೃಹದಲ್ಲಿ ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಸಂಸ್ಥೆಗಳ (ರುಡ್ಸೆಟ್ ಸಂಸ್ಥೆಗಳ) ನಿರ್ದೇಶಕರ ವಾರ್ಷಿಕ ಸಮ್ಮೇಳನದಲ್ಲಿ ಅವರು ಶುಭಾಶಂಸನೆ ನೀಡಿ ಮಾತನಾಡಿದರು.ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ಪ್ರಾಯೋಗಿಕವಾಗಿ ಉಜಿರೆಯಲ್ಲಿ ಆರಂಭಿಸಿದ ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಸಂಸ್ಥೆ ಮಾದರಿಯಾಗಿದ್ದು ಕೇಂದ್ರ ಸರ್ಕಾರವೂ ಇದಕ್ಕೆ ಮಾನ್ಯತೆ ನೀಡಿದೆ. ದೇಶದೆಲ್ಲೆಡೆ ಇಂದು ೬೭೦ ಸಂಸ್ಥೆಗಳು ನಿರುದ್ಯೋಗಿಗಳಿಗೆ ಸ್ವ-ಉದ್ಯೋಗ ತರಬೇತಿ ನೀಡುತ್ತಿದ್ದು ದೇಶದ ಆರ್ಥಿಕ ಪ್ರಗತಿಯಲ್ಲಿ ಇವುಗಳ ತ್ಯಾಗ, ಸೇವೆ ಮತ್ತು ಸಾಧನೆ ಅಮೂಲ್ಯ ಎಂದು ಶ್ಲಾಘಿಸಿದರು.ರುಡ್ಸೆಟ್ ಸಂಸ್ಥೆಗಳ ರಾಷ್ಟ್ರೀಯ ನಿಯಂತ್ರಕ ಬೆಂಗಳೂರಿನ ಆರ್.ಆರ್. ಸಿಂಗ್ ಮಾತನಾಡಿ, ತರಬೇತಿ ನೀಡುವಾಗ ನಿರುದ್ಯೋಗಿಗಳಲ್ಲಿ ನಾಯಕತ್ವ ಗುಣವನ್ನೂ ಬೆಳೆಸಬೇಕು ಎಂದರು.ರುಡ್ಸೆಟ್ ಸಂಸ್ಥೆಗಳ ಮಹಾನಿರ್ದೇಶಕ ರಾಜು ಎನ್. ಕೋರಿ ಮಾತನಾಡಿ, ಗ್ರಾಮೀಣ ಪ್ರದೇಶದ ಬೇಡಿಕೆಗೆ ಅನುಗುಣವಾಗಿ ಹೊಸತನದ ತರಬೇತಿ ನೀಡಬೇಕು ಎಂದು ಸಲಹೆ ನೀಡಿದರು.ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಸಮ್ಮೇಳನ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಉತ್ತಮ ಸೇವೆ, ಸಾಧನೆಗೆ ಎಲ್ಲಾ ನೌಕರರನ್ನು ಅಭಿನಂದಿಸಿದರು.ಸಂಸ್ಥೆಗಳ ಪ್ರಗತಿ, ಸಾಧನೆ ಗುರುತಿಸಿ ಹೊಸ ಯೋಜನೆಗಳನ್ನು ರೂಪಿಸುವುದೇ ವಾರ್ಷಿಕ ಸಮ್ಮೇಳನದ ಉದ್ದೇಶ ಎಂದರು.ಬ್ಯೂಟಿ ಪಾರ್ಲರ್, ಹೊಲಿಗೆ ಮೊದಲಾದ ವೃತ್ತಿಗಳನ್ನು ಮನೆಯಲ್ಲೆ ಮಾಡಬಹುದು ಎಂದು ಅವರು ಸಲಹೆ ನೀಡಿದರು. ನಿರ್ದೇಶಕರು ಮತ್ತು ಸಿಬ್ಬಂದಿ ಉತ್ತಮ ಗುಣಮಟ್ಟದ ತರಬೇತಿಗೆ ವೈಯಕ್ತಿಕ ಗಮನ ಹರಿಸಬೇಕೆಂದು ಹೇಳಿದರು.ರುಡ್ಸೆಟ್ ಸಂಸ್ಥೆಗಳ ಕೇಂದ್ರೀಯ ಕಾರ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ವಿಜಯಕುಮಾರ್ ಸ್ವಾಗತಿಸಿದರು. ಉಜಿರೆ ಸಂಸ್ಥೆಯ ನಿರ್ದೇಶಕ ಅಜೇಯ ವಂದಿಸಿದರು.ಹಿರಿಯ ಉಪನ್ಯಾಸಕಿ ಅನಸೂಯ ಕಾರ್ಯಕ್ರಮ ನಿರ್ವಹಿಸಿದರು.
ಸಮಾವೇಶದಲ್ಲಿ, ಉನ್ನತ ಸಾಧನೆ ಮಾಡಿದ ರುಡ್ಸೆಟ್ ಸಂಸ್ಥೆಗಳನ್ನು ಗೌರವಿಸಲಾಯಿತು.ಆರ್ಥಿಕ ಆದಾಯ: ರುಡ್ಸೆಟ್ ಸಂಸ್ಥೆ, ಒನ್ಗೋಲ್ (ಪ್ರಥಮ), ರುಡ್ಸೆಟ್ ಸಂಸ್ಥೆ, ಧಾರವಾಡ (ದ್ವಿತೀಯ).ವಾರ್ಷಿಕ ಕಾರ್ಯಯೋಜನೆ: ರುಡ್ಸೆಟ್ ಸಂಸ್ಥೆ, ವಿಜಯಪುರ (ಪ್ರಥಮ), ರುಡ್ಸೆಟ್ ಸಂಸ್ಥೆ, ಹಾಜಿಪುರ (ದ್ವಿತೀಯ).