ಕಿವಿಗೆ ಅಸಹನೀಯ ಶಬ್ದ ಹೊರಸೂಸುವ ಡಿಜೆಗಳಿಂದಾಗಿ ಅನಾರೋಗ್ಯ ಪೀಡಿತರು, ವಯೋವೃದ್ಧರು ಮಕ್ಕಳು ಹಾಗೂ ಸಾರ್ವಜನಿಕರಿಗೆ ತೊಂದರೆ ಆಗುವ ಹಿನ್ನೆಲೆಯಲ್ಲಿ ನೂತನ ಪೊಲೀಸ್ ಆಯುಕ್ತ ಭೂಷಣ ಬೊರಸೆ ಅವಳಿ ನಗರದಲ್ಲಿ ಶಬ್ದ ಮಾಲಿನ್ಯ ಉಲ್ಲಂಘನೆ ಮಾಡದಂತೆ ಮುಂಚಿತವಾಗಿಯೇ ಎಚ್ಚರಿಕೆ ನೀಡಿದ್ದರು.
ಧಾರವಾಡ:
ಗಣೇಶ ಹಬ್ಬದಲ್ಲಿ ಅತೀ ಹೆಚ್ಚಿನ ಶಬ್ದದ ಡಿಜೆಗಳನ್ನು ಹಚ್ಚದಂತೆ, ಶಬ್ದ ಮಾಲಿನ್ಯ ನಿಯಂತ್ರಣ ನಿಯಮಾವಳಿ ಮೀರದಂತೆ ಪೊಲೀಸ್ ಇಲಾಖೆ ಎಚ್ಚರಿಸಿದರೂ, ನಿಯಂತ್ರಣವಿಲ್ಲದೇ ಡಿಜೆ ಬಳಸಿದ ಹು-ಧಾ ಮಹಾನಗರ 4 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 6 ಜನ ಡಿಜೆ ಮಾಲೀಕರು ಹಾಗೂ ಆಪರೇಟರ್ಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ.ಕಿವಿಗೆ ಅಸಹನೀಯ ಶಬ್ದ ಹೊರಸೂಸುವ ಡಿಜೆಗಳಿಂದಾಗಿ ಅನಾರೋಗ್ಯ ಪೀಡಿತರು, ವಯೋವೃದ್ಧರು ಮಕ್ಕಳು ಹಾಗೂ ಸಾರ್ವಜನಿಕರಿಗೆ ತೊಂದರೆ ಆಗುವ ಹಿನ್ನೆಲೆಯಲ್ಲಿ ನೂತನ ಪೊಲೀಸ್ ಆಯುಕ್ತ ಭೂಷಣ ಬೊರಸೆ ಅವಳಿ ನಗರದಲ್ಲಿ ಶಬ್ದ ಮಾಲಿನ್ಯ ಉಲ್ಲಂಘನೆ ಮಾಡದಂತೆ ಮುಂಚಿತವಾಗಿಯೇ ಎಚ್ಚರಿಕೆ ನೀಡಿದ್ದರು. ಇಷ್ಟಾಗಿಯೂ ನಿಯಮ ಉಲ್ಲಂಘಿಸಿದ್ದರಿಂದ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಹುಬ್ಬಳ್ಳಿಯ ಅಮರಗೋಳ ಅಧ್ಯಾಪಕ ನಗರದಿಂದ ಗಾಮನಗಟ್ಟಿಗೆ ತೆರಳುವ ರಸ್ತೆಯಲ್ಲಿ ಮೆರವಣಿಗೆ ಸಂದರ್ಭದಲ್ಲಿ ಹೆಚ್ಚಿನ ಶಬ್ದ ಹಾಗೂ ಕಣ್ಣಿಗೆ ರಾಚುವ ಬೆಳಕಿನ ಡಿಜೆ ಹಚ್ಚಿದ್ದ ಎಸ್.ಎಸ್. ಡಿಜೆ ಸೌಂಡ್ ಸಿಸ್ಟಮ್ ಆಪರೇಟರ್ ಹಾಗೂ ಮಾಲೀಕ ಪ್ರಶಾಂತ ಮೇಲೆ, ಧಾರವಾಡ ಉಪ ನಗರ ವ್ಯಾಪ್ತಿಯ ಮರಾಠಾ ಕಾಲನಿ ಗಣಪತಿ ಗುಡಿಯಿಂದ ಶಿವಾಜಿ ವೃತ್ತ, ಸಿಬಿಟಿ ಹಾಗೂ ಎತ್ತಿನ ಗುಡ್ಡ ರಸ್ತೆ ವರೆಗೆ ನಡೆದ ಮೆರವಣಿಗೆಯ ಪ್ರಕರಣದಲ್ಲಿ ಡಿಜೆ ಮಾಲೀಕರಾದ ನಂದಿನಿ ಹಾಗೂ ಆಪರೇಟರ್ ಪ್ರವೀಣ ಸವಣೂರ, ವಿದ್ಯಾಗಿರಿ ಠಾಣೆ ವ್ಯಾಪ್ತಿಯ ನವಲೂರು ಗ್ರಾಮದಲ್ಲಿ ನಡೆದ ಮೆರವಣಿಗೆಯಲ್ಲಿ ನಿಯಮ ಉಲ್ಲಂಘಿಸಿದ ಭದ್ರಾವತಿಯ ಸುನೀಲ ಹಾಗೂ ಆಪರೇಟರ್ ನಿತೇಶ ಕುಂದೂರ, ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ಸುಭಾಸ ರಸ್ತೆಯಲ್ಲಿ ನಡೆದ ಮೆರವಣಿಗೆಯಲ್ಲಿ ನಿಯಮ ಉಲ್ಲಂಘಿಸಿದ ಡಿಜೆ ಮಾಲೀಕ ಪ್ರಶಾಂತ ಕಾಂಬಳೆ ಹಾಗೂ ಆಪರೇಟರ್ ಶ್ರೇಯಸ್ ಮೇಲೆ ಪ್ರಕರಣ ದಾಖಲಿಸಲಾಗಿದೆ.