ರಾಜ್ಯಮಟ್ಟದ ಟೆನ್ನಿಸ್‌ ಪಂದ್ಯಾವಳಿಗೆ ಚಾಲನೆ

| Published : Nov 08 2025, 02:00 AM IST

ಸಾರಾಂಶ

ಬೆಂಗಳೂರ ನಂತರ ಬರೋಬ್ಬರಿ ಎಂಟು ಟೆನ್ನಿಸ್ ಕೋರ್ಟ್‌ಗಳನ್ನು ಹೊಂದಿರುವ ಏಕೈಕ ನಗರ ಎಂಬ ಹೆಗ್ಗಳಿಕೆಗೆ ಧಾರವಾಡ ಪಾತ್ರವಾಗಿದೆ. ಮಕ್ಕಳಲ್ಲಿ ಕ್ರೀಡಾ ಮನೋಭಾವ ಬೆಳೆಸಲು ಮತ್ತು ಅವರಿಗೆ ಅಗತ್ಯ ಸೌಲಭ್ಯ ಒದಗಿಸಲು ಬದ್ಧರಾಗಿದ್ದೇವೆ ಎಂದು ಸಂತೋಷ ಲಾಡ್‌ ಹೇಳಿದರು.

ಧಾರವಾಡ:

ಕ್ರೀಡೆಯು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತ್ಯಗತ್ಯ. ಕ್ರೀಡಾ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ಧಾರವಾಡ ಇದೀಗ ಟೆನ್ನಿಸ್ ಕ್ರೀಡೆಯಲ್ಲಿಯೂ ಮುಂಚೂಣಿಗೆ ಬರುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್‌ ಹೇಳಿದರು.

ಡಿಡಿಎಲ್‌ಟಿಎ ಆವರಣದ ರಾಜ್ಯಾಧ್ಯಕ್ಷ ಪೆವಲಿನ್‌ದಲ್ಲಿ ಶುಕ್ರವಾರದಿಂದ ಮೂರು ದಿನ ನಡೆಯಲಿರುವ ರಾಜ್ಯಮಟ್ಟದ ಪುರುಷರ ಲಾನ್ ಟೆನ್ನಿಸ್ ಪಂದ್ಯಾವಳಿಗೆ ಟೆನ್ನಿಸ್‌ ಆಟವಾಡುವ ಮೂಲಕ ಚಾಲನೆ ನೀಡಿದ ಅವರು, ಧಾರವಾಡದಲ್ಲಿ 2023ರಲ್ಲಿ ಐಟಿಎಫ್ ಪಂದ್ಯಾವಳಿ ಆಯೋಜಿಸಲಾಗಿತ್ತು. 30 ದೇಶಗಳಿಂದ ಟೆನ್ನಿಸ್ ಆಟಗಾರರು ಭಾಗವಹಿಸಿದ್ದು, ಜಿಲ್ಲೆಯ ಹೆಮ್ಮೆಯ ಸಂಗತಿ ಎಂದರು.

ಬೆಂಗಳೂರ ನಂತರ ಬರೋಬ್ಬರಿ ಎಂಟು ಟೆನ್ನಿಸ್ ಕೋರ್ಟ್‌ಗಳನ್ನು ಹೊಂದಿರುವ ಏಕೈಕ ನಗರ ಎಂಬ ಹೆಗ್ಗಳಿಕೆಗೆ ಧಾರವಾಡ ಪಾತ್ರವಾಗಿದೆ. ಮಕ್ಕಳಲ್ಲಿ ಕ್ರೀಡಾ ಮನೋಭಾವ ಬೆಳೆಸಲು ಮತ್ತು ಅವರಿಗೆ ಅಗತ್ಯ ಸೌಲಭ್ಯ ಒದಗಿಸಲು ಬದ್ಧರಾಗಿದ್ದೇವೆ. ಧಾರವಾಡದಲ್ಲಿ ಕ್ರೀಡಾ ವಾತಾವರಣವನ್ನು ಮತ್ತಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಮಹತ್ವದ್ದು, ಇದರಿಂದಾಗಿ ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ಮಕ್ಕಳಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ ಎಂದು ಹೇಳಿದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಧಾರವಾಡ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆ ಕಾಣುತ್ತಿದೆ. ಕ್ರೀಡಾಮಟ್ಟದಲ್ಲಿ ಸಾಧನೆ ಮಾಡುತ್ತಿರುವುದು ಸಂತೋಷ ತಂದಿದೆ. ಕ್ರೀಡಾ ಕ್ಷೇತ್ರದಲ್ಲಿ ಧಾರವಾಡದ ಯುವಜನರು ಉತ್ತಮ ಸಾಧನೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಗತಿ ಸಾಧಿಸಲು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಜಿಮಖಾನ್‌ ಆಭಿವೃದ್ಧಿಯಾಗಲಿ..

ಇದೇ ವೇಳೆ ನಗರದ ಹೃದಯಭಾಗದಲ್ಲಿರುವ ಐತಿಹಾಸಿಕ ಜಿಮ್‌ಖಾನಾ ಕ್ಲಬ್‌ನ ಸಮಗ್ರ ಜೀರ್ಣೋದ್ಧಾರ ಮತ್ತು ಅಭಿವೃದ್ಧಿಗೆ ಕ್ರಮಕೈಗೊಳ್ಳುವಂತೆ ಸಚಿವರಲ್ಲಿ ಬೆಲ್ಲದ ಮನವಿ ಮಾಡಿಕೊಂಡರು. ಈ ಕ್ಲಬ್ ಬ್ರಿಟಿಷರ ಕಾಲದಿಂದಲೂ ತನ್ನದೇ ಆದ ಮಹತ್ವ ಹೊಂದಿದ್ದು, ಕ್ರೀಡೆ, ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಕೇಂದ್ರ ಬಿಂದುವಾಗಿದೆ. ಇದರ ಅಭಿವೃದ್ಧಿಪಡಿಸಬೇಕೆಂದು ತಿಳಿಸಿದರು.

ಹುಬ್ಬಳ್ಳಿಯಲ್ಲಿ ಅಂತಾರಾಷ್ಟ್ರೀಯ ಆಟಗಳನ್ನು ಆಡಲು ಸೂಕ್ತವಾದ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ. ಇದರಿಂದ ನಮ್ಮ ಭಾಗದ ಕ್ರೀಡಾಪಟುಗಳು ಮತ್ತು ಕ್ರೀಡಾಭಿಮಾನಿಗಳು ಬೆಂಗಳೂರಿಗೆ ಹೋಗುವ ಅನಿವಾರ್ಯತೆ ತಪ್ಪುತ್ತದೆ, ಅತ್ಯಾಧುನಿಕ ಸೌಲಭ್ಯ ಹೊಂದಿದ ಕ್ರೀಡಾಂಗಣವನ್ನು ಅವಳಿ ನಗರಗಳಲ್ಲಿ ನಿರ್ಮಿಸಲಾಗುವುದು ಎಂದರು.

ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ, ವಿಪ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್, ಎಫ್.ಎಚ್. ಜಕ್ಕಪ್ಪನವರ, ಮೇಯರ್‌ ಜ್ಯೋತಿ ಪಾಟೀಲ, ಎಸ್.ಆರ್. ಪಾಟೀಲ, ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ., ಪೊಲೀಸ್ ಆಯುಕ್ತ ಎನ್.ಶಶಿಕುಮಾರ, ಜಿಪಂ ಸಿಇಒ ಭುವನೇಶ ಪಾಟೀಲ, ವರಿಷ್ಠಾಧಿಕಾರಿ ಗುಂಜನ್ ಆರ್ಯ, ಪಾಲಿಕೆ ಆಯುಕ್ತ ಡಾ. ರುದ್ರೇಶ ಎಸ್. ಘಾಳಿ ಮತ್ತು ಸಂತೋಷ ಬಿರಾದಾರ ಇದ್ದರು. ಕಾರ್ಯದರ್ಶಿ ಸಂತೋಷ ಶೆಟ್ಟಿ ಅವರು ಸ್ವಾಗತಿಸಿದರು. ಆರತಿ ದೇವಶಿಖಾಮಣಿ ಅವರು ನಿರೂಪಿಸಿ, ವಂದಿಸಿದರು. ಅಮರ ಧರೆಪ್ಪನವರ ಕ್ವಾರ್ಟರ್ ಫೈನಲ್‌ಗೆಸ್ಥಳೀಯ ಆಟಗಾರ ಅಮರ ಧರೆಪ್ಪನವರ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಅಂತಿಮ 16ರ ಹಂತದ ಪಂದ್ಯದಲ್ಲಿ ವಿನಾಯಕ ಕಲ್ಲಿಹಾಳ ಅವರನ್ನು 6-3 ಅಂತರದಿಂದ ಸೋಲಿಸಿದರು. ವೇದಾಂಶ, ಆ್ಯಂಡ್ ಶಿವರಾಜ, ಪ್ರಶಾಂತ ಶಾಂತಕುಮಾರ, ಸುರೇಶ ರೆಡ್ಡಿ, ಅಭಿಷೇಕ ರೆಡ್ಡಿ ಹಾಗೂ ರತನ್ ಕ್ವಾರ್ಟರ್ ಫೈನಲ್ ಹಂತ ಪ್ರವೇಶಿಸಿದ್ದಾರೆ. ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ವೇದಾಂತ, ಧನುಷ್ ಎದುರು 6-2 ಅಂತರದ ಗೆಲುವು ದಾಖಲಿಸಿದರೆ, 6-2ರಿಂದ ಕಾರ್ತಿಕ್ ಕೇದಾರಿ, ಶಿವರಾಜ 6-0 ಯಿಂದ ಭಾಸ್ಕರ, ಪ್ರಶಾಂತ ಶಾಂತಕುಮಾರ 7-5 ರಿಂದ ವಿನಾಯಕ ಕುರುಬರ, ಸುರೇಶ ರೆಡ್ಡಿ 6-0 ಯಿಂದ ದೀಪಕ ಅಂಗಡಿ, ಅಭಿಷೇಕ ರೆಡ್ಡಿ 7-4 ರಿಂದ ಸಚಿನ್ ಕರಾಯ್ ಮತ್ತು ರತನ್ 6-3 ರಿಂದ ಗಿರೀಶ ಅವರನ್ನು ಪರಾಭವಗೊಳಿಸಿ ಮುನ್ನಡೆದರು