ಗ್ರಾಮೀಣ ಬ್ಯಾಂಕ್‌ಗಳು ರೈತರ ಊರುಗೋಲು

| Published : Sep 17 2025, 01:05 AM IST

ಸಾರಾಂಶ

ದೊಡ್ಡಬಳ್ಳಾಪುರ: ಸ್ವಾತಂತ್ರ್ಯ ಪೂರ್ವದಲ್ಲೇ ಸ್ಥಾಪನೆಯಾಗಿರುವ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್ 11,903 ಸದಸ್ಯರನ್ನು ಹೊಂದಿದೆ. ರೈತರಿಗೆ ಆರ್ಥಿಕ ಊರುಗೋಲಾಗಿ ಕೆಲಸ ಮಾಡುತ್ತಿದೆ ಎಂದು ಬ್ಯಾಂಕ್‌ ಅಧ್ಯಕ್ಷ ಆರ್.ಸಿ.ಶಿವಕುಮಾರ್ ಹೇಳಿದರು.

ದೊಡ್ಡಬಳ್ಳಾಪುರ: ಸ್ವಾತಂತ್ರ್ಯ ಪೂರ್ವದಲ್ಲೇ ಸ್ಥಾಪನೆಯಾಗಿರುವ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್ 11,903 ಸದಸ್ಯರನ್ನು ಹೊಂದಿದೆ. ರೈತರಿಗೆ ಆರ್ಥಿಕ ಊರುಗೋಲಾಗಿ ಕೆಲಸ ಮಾಡುತ್ತಿದೆ ಎಂದು ಬ್ಯಾಂಕ್‌ ಅಧ್ಯಕ್ಷ ಆರ್.ಸಿ.ಶಿವಕುಮಾರ್ ಹೇಳಿದರು.

ನಗರದಲ್ಲಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ವತಿಯಿಂದ ನಡೆದ 2024-25ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆ ಹಾಗೂ ರೈತರ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಅವರು, ಕೃಷಿಗೆ ಪೂರಕವಾಗಿರುವ ಕೋಳಿ ಸಾಕಾಣಿಕೆಯಿಂದ ಮೊದಲುಗೊಂಡು ದ್ರಾಕ್ಷಿ ಸೇರಿದಂತೆ ಎಲ್ಲಾ ರೀತಿಯ ವಾಣಿಜ್ಯ ಬೆಳೆಗಳಿಗೂ ರೈತರಿಗೆ ಸಾಲ ನೀಡಲಾಗುತ್ತಿದೆ. 2024-25ನೇ ಸಾಲಿನಲ್ಲಿ ₹1.35 ಕೋಟಿ ವಿವಿಧ ಸಾಲ ರೈತರಿಗೆ ನೀಡಲಾಗಿದೆ. ರೈತರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದರೆ ಇತರರಿಗೂ ಸೌಲಭ್ಯ ನೀಡಲು ಸಹಕಾರಿಯಾಗಲಿದೆ ಎಂದರು.

ಬ್ಯಾಂಕಿನ ನಿರ್ದೇಶಕ ಟಿ.ವಿ.ಲಕ್ಷ್ಮೀನಾರಾಯಣ್ ಮಾತನಾಡಿ, ಸಹಕಾರ ತತ್ವದಡಿ ನಡೆಯುವ ಯಾವುದೇ ಸಂಸ್ಥೆಯಲ್ಲಿ ಮತದಾನದ ಹಕ್ಕು ಹಾಗೂ ಸ್ಪರ್ಧಿಸುವ ಅವಕಾಶ ದೊರೆಯಲು ಸಂಸ್ಥೆಯಲ್ಲಿ ವ್ಯವಹಾರ ನಡೆಸಬೇಕು. ಮತ್ತು ಸರ್ವ ಸದಸ್ಯರ ಸಭೆಗಳಿಗೆ ಕಡ್ಡಾಯವಾಗಿ ಹಾಜರಾಗಬೇಕು. ಸದಸ್ಯತ್ವ ಪಡೆದ ಮಾತ್ರಕ್ಕೆ ಮತದಾನದ ಹಕ್ಕು ದೊರೆಯುವುದಿಲ್ಲ ಎಂದರು.

ಬ್ಯಾಂಕಿನಿಂದ ಬೆಳೆ ಸಾಲ ಸೇರಿದಂತೆ ವಿವಿಧ ರೀತಿಯ ಸಾಲಗಳನ್ನು ಪಡೆದು ಸಕಾಲದಲ್ಲಿ ಮರುಪಾವತಿ ಮಾಡಿರುವ ರೈತರನ್ನು ಅಭಿನಂದಿಸಲಾಯಿತು.

ಬ್ಯಾಂಕಿನ ಉಪಾಧ್ಯಕ್ಷ ಎಲ್.ಕೆ.ರಾಮಚಂದ್ರಬಾಬು, ನಿರ್ದೇಶಕರಾದ ಟಿ.ವಿ.ಲಕ್ಷ್ಮೀನಾರಾಯಣ್, ಮುನಿಕೃಷ್ಣ, ಸಿ.ವಿ.ಲಕ್ಷ್ಮೀಪತಯ್ಯ, ಸಿ.ಅಶ್ವತ್ಥನಾರಾಯಣಗೌಡ, ಜಿ.ನರಸಿಂಹಮೂರ್ತಿ, ರಾಮಾಂಜಿನಪ್ಪ, ಉಗ್ರಯ್ಯ, ಬಿ.ಬಸವರಾಜು, ವಿ.ವೇಣುಕುಮಾರ್, ಸಿ.ಮುನಿಯಾನಾಯ್ಕ, ಲಕ್ಷಮ್ಮ, ರಾಜಲಕ್ಷ್ಮೀ, ಆ‌ರ್.ಶೋಭ, ಬ್ಯಾಂಕಿನ ವ್ಯವಸ್ಥಾಪಕ ಎಸ್.ದಕ್ಷಿಣಮೂರ್ತಿ ಇದ್ದರು.

15ಕೆಡಿಬಿಪಿ4-

ದೊಡ್ಡಬಳ್ಳಾಪುರದಲ್ಲಿ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕಿನ ವತಿಯಿಂದ ನಡೆದ 2024-25ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದ ರೈತರನ್ನು ಸತ್ಕರಿಸಲಾಯಿತು.