ಹಾನಗಲ್ಲ ತಾಲೂಕಿನ ಸರಕಾರಿ ಶಾಲೆಗಳು ಸುಧಾರಣೆ ಕಾಣಬೇಕು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಬೇಕು. ಈ ನಿಟ್ಟಿನಲ್ಲಿ ಕಾಳಜಿ ವಹಿಸಿ ಕೆಲಸ ಮಾಡಲಾಗುತ್ತಿದೆ. ಸಮುದಾಯ ಹಾಗೂ ಸಂಘ, ಸಂಸ್ಥೆಗಳ ಸಹಭಾಗಿತ್ವದಡಿ ಶಾಲೆಗಳಿಗೆ ಸೌಲಭ್ಯ ಕಲ್ಪಿಸಿ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಲು ಗಮನ ನೀಡಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಹಾನಗಲ್ಲ: ತಾಲೂಕಿನ ಸರಕಾರಿ ಶಾಲೆಗಳು ಸುಧಾರಣೆ ಕಾಣಬೇಕು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಬೇಕು. ಈ ನಿಟ್ಟಿನಲ್ಲಿ ಕಾಳಜಿ ವಹಿಸಿ ಕೆಲಸ ಮಾಡಲಾಗುತ್ತಿದೆ. ಸಮುದಾಯ ಹಾಗೂ ಸಂಘ, ಸಂಸ್ಥೆಗಳ ಸಹಭಾಗಿತ್ವದಡಿ ಶಾಲೆಗಳಿಗೆ ಸೌಲಭ್ಯ ಕಲ್ಪಿಸಿ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಲು ಗಮನ ನೀಡಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. ಶನಿವಾರ ಸಂಜೆ ತಾಲೂಕಿನ ಶೀಗಿಹಳ್ಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರಿನ ಶಿ ಫಾರ್ ಸೊಸೈಟಿ ವತಿಯಿಂದ ನೂತನವಾಗಿ ನಿರ್ಮಿಸಿದ ಕಂಪ್ಯೂಟರ್ ಪ್ರಯೋಗಾಲಯ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ೭೫ ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ೫೦%-೫೦% ಎನ್ನುವ ಕಾರ್ಯಕ್ರಮದ ಘೋಷಣೆ ಮಾಡಲಾಗಿತ್ತು. ಈ ಕಾರ್ಯಕ್ರಮದಡಿ ೧೨೫ ಶಾಲೆಗಳನ್ನು ೩.೨೫ ಕೋಟಿ ರು. ವೆಚ್ಚದಲ್ಲಿ ಸುಧಾರಿಸಲಾಗಿದೆ. ಈ ಪೈಕಿ ಅರ್ಧ ಹಣವನ್ನು ಗ್ರಾಮಸ್ಥರು ಭರಿಸಿದ್ದರೆ, ಉಳಿದರ್ಧ ಹಣ ವೈಯಕ್ತಿಕವಾಗಿ ನೀಡಲಾಗಿದೆ. ಓಸ್ಯಾಟ್, ರೌಂಡ್ ಟೇಬಲ್, ರೋಟರಿ, ಡ್ರೀಮ್ ಸ್ಕೂಲ್ ಫೌಂಡೇಶನ್‌ನಂಥ ಹಲವು ಸಂಸ್ಥೆಗಳ ಸಹಭಾಗಿತ್ವದಡಿ ಶಾಲಾ ಕಟ್ಟಡ ನಿರ್ಮಾಣ, ಮಕ್ಕಳಿಗೆ ತರಬೇತಿಯಂತ ಅನುಕೂಲತೆ ಪಡೆಯಲಾಗುತ್ತಿದೆ. ಪರಿವರ್ತನ ಕಲಿಕಾ ಕೇಂದ್ರದ ಮೂಲಕ ಜಾಗತಿಕ ಸ್ಪರ್ಧೆಗೆ ತಾಲೂಕಿನ ವಿದ್ಯಾರ್ಥಿಗಳು, ಯುವ ಸಮೂಹವನ್ನು ಸಜ್ಜುಗೊಳಿಸಲು ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದ ಅವರು, ಶಿ ಫಾರ್ ಸೊಸೈಟಿಯ ಸದಸ್ಯರು ಕಂಪ್ಯೂಟರ್ ಸಾಕ್ಷರತೆ ಹೆಚ್ಚಿಸುವ ಉದ್ದೇಶದಿಂದ ಕಂಪ್ಯೂಟರ್ ಲ್ಯಾಬ್‌ಗೆ ನೆರವು ನೀಡಿರುವುದು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲವಾಗಲಿದೆ ಎಂದರು. ಶಿ ಫಾರ್ ಸೊಸೈಟಿಯ ಸಂಸ್ಥಾಪಕ ಅಧ್ಯಕ್ಷೆ ಹರ್ಷಿಣಿ ವೆಂಕಟೇಶ, ನಿರ್ದೇಶಕಿ ಕವಿತಾ ಪ್ರಭಾಕರ ಮಾತನಾಡಿ, ಕಳೆದ ಹಲವು ವರ್ಷಗಳಿಂದ ರಾಜ್ಯದ ಸುಮಾರು ೪೫ ಶಾಲೆಗಳಲ್ಲಿ ಕಂಪ್ಯೂಟರ್ ಲ್ಯಾಬ್ ಆರಂಭಕ್ಕೆ ಅಗತ್ಯ ಹಣಕಾಸಿನ ನೆರವು ಒದಗಿಸಲಾಗಿದೆ. ಸಂಸ್ಥೆ ಆರೋಗ್ಯ ಜಾಗೃತಿ ಕಾರ್ಯಕ್ರಮಗಳ ಜೊತೆಗೆ ಶೈಕ್ಷಣಿಕ ಚಟುವಟಿಕೆಗಳಲ್ಲಿಯೂ ಸಹ ಕಾರ್ಯಶೀಲವಾಗಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಯೊಂದು ಮಗುವೂ ಸಹ ಕಂಪ್ಯೂಟರ್ ಜ್ಞಾನ ಹೊಂದುವ ಅಗತ್ಯವಿದೆ ಎಂದರು. ಎಸ್‌ಡಿಎಂಸಿ ಅಧ್ಯಕ್ಷ ಸಿದ್ದನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ತಾಲೂಕಾ ಶಿಕ್ಷಣ ಸುಧಾರಣಾ ಸಮಿತಿ ಸದಸ್ಯೆ ಅನಿತಾ ಶಿವೂರ, ಬಿಇಒ ಆರ್.ವಿ. ಚಿನ್ನಿಕಟ್ಟಿ, ಇಸಿಒ ವಿ.ಟಿ. ಪಾಟೀಲ, ಬಿ.ಎನ್. ಸಂಗೂರ, ಸಿಆರ್‌ಪಿ ನಾಗರಾಜ ಸಿಂಗಾಪೂರ ಇದ್ದರು.