ಕೊಪ್ಪಳ: ಗ್ರಾಮೀಣ ಜನರಿಗೆ ಆಡಳಿತದಲ್ಲಿ ನೇರ ಪಾಲ್ಗೊಳ್ಳುವ ಅವಕಾಶ ಮತ್ತು ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯ ಮಟ್ಟದಲ್ಲೇ ಪರಿಹಾರ ಒದಗಿಸಿ ಗ್ರಾಮಾಭಿವೃದ್ಧಿ ಮತ್ತು ಸ್ವಾಯತ್ತತೆ ರೂಪಿಸುವ ಮೂಲಕ ಗ್ರಾಮೀಣ ಸಬಲೀಕರಣಕ್ಕೆ ಉತ್ತೇಜನ ನೀಡಲಾಗುತ್ತಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಹೇಳಿದರು.
ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಂಚಾಯತ್ ರಾಜ್ ದಿನ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪ್ರಜಾಪ್ರಭುತ್ವ ವಿಕೇಂದ್ರೀಕರಣ ಮತ್ತು ಸ್ಥಳೀಯ ಆಡಳಿತ ಬಲಗೊಳಿಸುವ ನಮ್ಮ ಬದ್ಧತೆ ಪುನರುಜ್ಜೀವನಗೊಳಿಸುವ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಾಧಿಸಿರುವ ಗಮನಾರ್ಹ ಪ್ರಗತಿ ಮತ್ತು ಸಾಮರ್ಥ್ಯ ಸಂಭ್ರಮಿಸುವ ದಿನವಾಗಿದೆ.ಭಾರತ ಸಂವಿಧಾನದ 73ನೇ ತಿದ್ದುಪಡಿ 1992 ರನ್ವಯ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಂವಿಧಾನಾತ್ಮಕ ಸ್ಥಾನಮಾನ ನೀಡಿದೆ. 1993ರ ಏ.24 ರಂದು 73ನೇ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದ್ದು, ಪ್ರತಿ ವರ್ಷ ಏ.24 ರಂದು ರಾಷ್ಟ್ರೀಯ ಪಂಚಾಯತ್ ರಾಜ್ ದಿನ ಆಚರಿಸಲಾಗುತ್ತದೆ. ಗ್ರಾಮೀಣ ಜನರಿಗೆ ಆಡಳಿತದಲ್ಲಿ ನೇರ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಜಿಪಂ ಉಪಕಾರ್ಯದರ್ಶಿ ಟಿ.ಕೃಷ್ಣಮೂರ್ತಿ ಕಾರ್ಯಕ್ರಮ ಉದ್ದೇಶಿಸಿ ಪ್ರಸ್ತಾವಿಕವಾಗಿ ಮಾತನಾಡಿ, 73ನೇ ಸಂವಿಧಾನ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ದಿನ ಸ್ಮರಿಸುವುದಕ್ಕಾಗಿ ಪ್ರತಿ ವರ್ಷ ಏ.24 ರಂದು ರಾಷ್ಟ್ರೀಯ ಪಂಚಾಯತ್ ರಾಜ್ ದಿನ ಆಚರಿಸಲಾಗಿತ್ತದೆ. ಈ ತಿದ್ದುಪಡಿಯು ಪಂಚಾಯತಿಗಳಿಗೆ ಸಂವಿಧಾನಾತ್ಮಕ ಸ್ಥಾನಮಾನ ನೀಡಿದ್ದು, ಭಾರತದಲ್ಲಿ ವಿಕೇಂದ್ರೀಕೃತ ಆಡಳಿತ ಪಯಣದಲ್ಲಿ ಮಹತ್ವದ ಮೈಲುಗಲ್ಲಾಗಿದೆ ಎಂದರು.ಕೊಪ್ಪಳ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಮಾತನಾಡಿ, ಪಂಚಾಯತ್ ರಾಜ್ ವ್ಯವಸ್ಥೆ ವೇದಗಳ ಕಾಲದಿಂದಲು ಇದ್ದು, ಇದು ನಿರಂತರ ಬದಲಾಗುತ್ತ ಬಂದಿದೆ. ಅದರಂತೆ ಭಾರತವು ಹಳ್ಳಿಗಳ ದೇಶವಾಗಿದ್ದು, ಗ್ರಾಮಗಳು ಅಭಿವೃದ್ಧಿ ಹೊಂದಿದರೆ ಮಾತ್ರ ದೇಶ ಸಮಗ್ರ ಅಭಿವೃದ್ಧಿ ಸಾಧಿಸಬಲ್ಲದು. ಈ ನಿಟ್ಟಿನಲ್ಲಿ ಸ್ಥಳೀಯ ಸ್ವಯಂ ಆಡಳಿತ ವ್ಯವಸ್ಥೆ ವಿಶೇಷ ಪಾತ್ರ ವಹಿಸುತ್ತವೆ. ಅಂತಹದೇ ಒಂದು ಪ್ರಮುಖ ವ್ಯವಸ್ಥೆ ಪಂಚಾಯತ್ ರಾಜ್ ವ್ಯವಸ್ಥೆ ಗೌರವಿಸುವ ಉದ್ದೇಶದಿಂದ ಪ್ರತಿ ವರ್ಷ ಏ.24ರಂದು ರಾಷ್ಟ್ರೀಯ ಪಂಚಾಯತ್ ರಾಜ್ ದಿನ ಆಚರಿಸಲಾಗುತ್ತದೆಂದು ಹೇಳಿದರು.
ವಿಶೇಷ ಉಪನ್ಯಾಸ:ಫೌಂಡೇಶನ್ ಫಾರ್ ಎಕಾಲಾಜಿಕಲ್ ಸೆಕ್ಯೂರಿಟಿ (ಎಫ್.ಇ.ಎಸ್) ಸಂಸ್ಥೆಯ ಜಿಲ್ಲಾ ಸಂಯೋಜಕ ವಾಸುದೇವ ಮೂರ್ತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ,ರಾಷ್ಟ್ರೀಯ ಪಂಚಾಯತ್ ರಾಜ್ ದಿನ ಕುರಿತಂತೆ ಮೂರು ಹಂತದ ಆಡಳಿತ ಕ್ರಮದಲ್ಲಿ ಗ್ರಾಪಂ ಮಟ್ಟದ ಸ್ಥಳೀಯ ಆಡಳಿತದೊಂದಿಗೆ ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆ ಹಾಗೂ ಸಮುದಾಯ ಆಸ್ತಿ ಸಂರಕ್ಷಿಸುವಲ್ಲಿ ಇರುವ ಕಾನೂನು ನಿಯಮ ಬಗ್ಗೆ, ಗೋಮಾಳಗಳ ಅಭಿವೃದ್ಧಿಯಿಂದ ಜೀವ ವೈವಿಧ್ಯತೆಯ ಉಳಿವು ಸಾಧ್ಯತೆ ಎನ್ನುವ ಕುರಿತು ತಿಳಿಸಿದರು.
ಸಾಧಕರಿಗೆ ಸನ್ಮಾನ:ಕರವಸೂಲಿಯಲ್ಲಿ ಜಿಲ್ಲೆಯಲ್ಲಿಯೇ ಶೇ100% ಸಾಧನೆ ಮಾಡಿದ ಪಿಡಿಓ & ಕರವಸೂಲಿಗಾರರಿಗೆ & ಅತ್ಯುತ್ತಮ ಅರಿವು ಕೇಂದ್ರ ನಿರ್ವಹಣೆ ಮಾಡಿದ ಪಿಡಿಓ & ಗ್ರಂಥಪಾಲಕರಿಗೆ ಮತ್ತು ಅತ್ಯುತ್ತಮ ವಾಹನ ಚಾಲಕಿ, ಕಸ ವಿಂಗಡಣೆಗಾರರಿಗೆ ಮತ್ತು ವಿಭಾಗ, ಜಿಲ್ಲಾಮಟ್ಟದ ಗಾಂಧಿ ಗ್ರಾಮ ಪುರಸ್ಕಾರ ಪಡೆದ ಪಿಡಿಓ ಮತ್ತು ಮಹಾತ್ಮ ಗಾಂಧಿ ನರೇಗಾದಡಿ ಉತ್ತಮ ಪ್ರಗತಿ ಸಾಧಿಸಿದ ಪಿಡಿಓ ಮತ್ತು ಮಹಿಳಾ ಸ್ನೇಹ ಗ್ರಾಪಂ ಪಿಡಿಓಗಳಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜಿಪಂ ಅಧಿಕಾರಿ, ಎಲ್ಲ ಯೋಜನೆಗಳ ಸಂಯೋಜಕರು, ಪಿಡಿಓ, ಗ್ರಂಥಪಾಲಕರು, ಕರವಸೂಲಿಗಾರರು, ವಾಹನ ಚಾಲಕಿಯರು ಇನ್ನಿತರ ಸಿಬ್ಬಂದಿ ಉಪಸ್ಥಿತಿದ್ದರು.