ಸಾರಾಂಶ
ಅಂಗವಿಕಲರಿಗೆ ಯೋಜನೆಗಳ ಬಗ್ಗೆ ತಿಳಿಸುವ ಉದ್ದೇಶದಿಂದ ಗ್ರಾಮಸಭೆ ನಡೆಸಲಾಗುತ್ತದೆ ಎಂದು ತಾಪಂ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ಮಹಾಂತೇಶ ಕುರ್ತಕೋಟಿ ಹೇಳಿದರು.
ಹುಬ್ಬಳ್ಳಿ: ಗ್ರಾಮೀಣ ಪ್ರದೇಶದ ಅಂಗವಿಕಲರು ಸರ್ಕಾರದ ಯಾವುದೇ ಸೌಲಭ್ಯಗಳಿಂದ ವಂಚಿತರಾಗಬಾರದು ಎಂಬ ದೃಷ್ಟಿಯಿಂದ ವಿಕಲಚೇತನರ ಗ್ರಾಮಸಭೆ ಏರ್ಪಡಿಸಲಾಗಿದೆ ಎಂದು ತಾಪಂ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ಮಹಾಂತೇಶ ಕುರ್ತಕೋಟಿ ಹೇಳಿದರು.
ತಾಲೂಕಿನ ಅಂಚಟಗೇರಿ ಗ್ರಾಪಂ ವತಿಯಿಂದ ವಿಕಲಚೇತನರಿಗೆ ಏರ್ಪಡಿಸಿದ್ದ ಗ್ರಾಮಸಭೆಯಲ್ಲಿ ಮಾತನಾಡಿದರು.ಅಂಗವಿಕಲರಿಗೆ ಸಾಕಷ್ಟು ಸೌಲಭ್ಯಗಳಿವೆ. ಆದರೆ, ಗ್ರಾಮೀಣ ಪ್ರದೇಶದ ಅಂಗವಿಕಲರಿಗೆ ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ಹಾಗಾಗಿ, ಅಂಗವಿಕಲರಿಗೆ ಯೋಜನೆಗಳ ಬಗ್ಗೆ ತಿಳಿಸುವ ಉದ್ದೇಶದಿಂದ ಗ್ರಾಮಸಭೆ ನಡೆಸಲಾಗುತ್ತದೆ ಎಂದರು.
ಅಂಚಟಗೇರಿ ಪಿಡಿಒ ಎಫ್. ಎಫ್. ಶಿರಗೇರಿ ಮಾತನಾಡಿ, ಅಂಗವಿಕಲರು ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಗ್ರಾಪಂ ಅಧ್ಯಕ್ಷ ಮಂಜುನಾಥ ತಿಪ್ಪಣ್ಣ ಗಾಣಿಗೇರ, ಉಪಾಧ್ಯಕ್ಷೆ ಮಲ್ಲವ್ವ ಯಲ್ಲಪ್ಪ ಜಮ್ಯಾಳ, ಸದಸ್ಯರಾದ ಫಕ್ಕಿರವ್ವ ಸಾದರ, ಮಂಜುಳಾ ಮಾಳಗಿಮನಿ, ನಾಗನಗೌಡರ ಪಾಟೀಲ, ಭೀಮಪ್ಪ ನಾಗಪ್ಪ ವಾಲ್ಮೀಕಿ, ಸಹದೇವಪ್ಪ ದುರ್ಗಪ್ಪ ಮಾಳಗಿ, ವಿ.ಆರ್.ಡಬ್ಲ್ಯೂ ಮಲ್ಲಮ್ಮ ವಾಲ್ಮೀಕಿ, ಎಂಬಿಕೆ ರಂಜಿತಾ ಶಿವಳ್ಳಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.