ಸಾರಾಂಶ
ತುಮಕೂರು : ಮೈತ್ರಿ ಅಭ್ಯರ್ಥಿ ಸೋಮಣ್ಣ ಮೇಲೆ ಮಾಧುಸ್ವಾಮಿಗೆ ಮುನಿಸು ಇನ್ನೂ ಕಡಿಮೆಯಾಗದ ಬೆನ್ನಲ್ಲೇ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ ಭೇಟಿಯಾಗಿದ್ದು ಚರ್ಚೆಗೆ ಗ್ರಾಸವಾಗಿದೆ.
ಚಿಕ್ಕನಾಯಕನಹಳ್ಳಿ ತಾಲೂಕು ಜೆಸಿ.ಪುರದಲ್ಲಿರುವ ಮಾಧುಸ್ವಾಮಿ ಮನೆಗೆ ಮುದ್ದಹನುಮೇಗೌಡ ಹೂಗುಚ್ಛ ನೀಡಿ ಕುಶಲೋಪರಿ ಮಾತನಾಡಿದರು.ನಗುನಗುತ್ತಲೇ ಕಾಂಗ್ರೆಸ್ ಅಭ್ಯರ್ಥಿಯನ್ನು ಮಾಧುಸ್ವಾಮಿ ಬರ ಮಾಡಿಕೊಂಡ ಮಾಧುಸ್ವಾಮಿ, ಈ ವೇಳೆ ಹೂಗುಚ್ಚ ಎಲ್ಲಾ ಯಾಕೆ ತಂದಿದ್ದೀರಿ ಎಂದ ಹೇಳಿದ್ದಕ್ಕೆ ನೀವು ಜಿಲ್ಲೆಯ ಹಿರಿಯ ನಾಯಕರಿದ್ದೀರಿ, ನಿಮಗೆ ಗೌರವ ಸಲ್ಲಿಸುವ ಉದ್ದೇಶದಿಂದ ಬಂದಿದ್ದೇವೆ ಎಂದರು. ಕೆಲಕಾಲ ಈ ಇಬ್ಬರು ನಾಯಕರು ರಹಸ್ಯ ಮಾತುಕತೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಧುಸ್ವಾಮಿ ಅವರು ಒಬ್ಬ ಅಭ್ಯರ್ಥಿಯಾಗಿ ನಮ್ಮ ಮನೆಗೆ ಬಂದಿದ್ದಾರೆ. ನಾವು ಅವರು ಬಹಳ ಹಳೆಯ ಸ್ನೇಹಿತರು. ಇಬ್ಬರು ಒಟ್ಟಿಗೆ ಶಾಸಕರಾಗಿದ್ದವರು ಎಂದ ಅವರು, ಸ್ನೇಹಿತರು ಅಂತ ಒಬ್ಬ ಅಭ್ಯರ್ಥಿ ಮನೆಗೆ ಬಂದಾಗ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದರು. ಅಭ್ಯರ್ಥಿಯಾದವರು ಬೆಂಬಲ ಕೇಳಿದ್ದಾರೆ. ನಾವು ಬೇರೆ ಪಕ್ಷದಲ್ಲಿ ಇರುವವರು ಬೆಂಬಲಿಸುವುದಕ್ಕೆ ಆಗುತ್ತದೆಯೇ ಎಂದು ಪ್ರಶ್ನಿಸಿದರು.