ಸಾರಾಂಶ
ಶಿವಮೊಗ್ಗ ಹಾಗೂ ಬೀದರ ನಗರಗಳಲ್ಲಿ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದನ್ನು ಖಂಡಿಸಿ ರಾಣಿಬೆನ್ನೂರು ತಾಲೂಕು ಬ್ರಾಹ್ಮಣ ಸಂಘದ ಪದಾಧಿಕಾರಿಗಳು ಹಾಗೂ ಸಮಾಜದ ಜನರು ಶನಿವಾರ ತಹಸೀಲ್ದಾರ್ ಆರ್.ಎಚ್. ಭಾಗವಾನ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಾಣಿಬೆನ್ನೂರು: ಶಿವಮೊಗ್ಗ ಹಾಗೂ ಬೀದರ ನಗರಗಳಲ್ಲಿ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದನ್ನು ಖಂಡಿಸಿ ತಾಲೂಕು ಬ್ರಾಹ್ಮಣ ಸಂಘದ ಪದಾಧಿಕಾರಿಗಳು ಹಾಗೂ ಸಮಾಜದ ಜನರು ಶನಿವಾರ ತಹಸೀಲ್ದಾರ್ ಆರ್.ಎಚ್. ಭಾಗವಾನ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕರ್ನಾಟಕ ಮಹಾಸಭಾ ಜಿಲ್ಲಾ ಪ್ರತಿನಿಧಿ ದತ್ತಾತ್ರೇಯ ನಾಡಿಗೇರ (ಭಾರಂಗಿ) ಮಾತನಾಡಿ, ಪರೀಕ್ಷಾ ಕೇಂದ್ರದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ಹಾಗೂ ಇತರ ಸಮಾಜದ ಕೆಲವು ವಿದ್ಯಾರ್ಥಿಗಳ ಕೈಗೆ ಕಟ್ಟಿಕೊಂಡಿದ್ದ ಕಾಶಿದಾರ-ಶಿವದಾರವನ್ನು ತೆಗೆಸಿರುವ ಘಟನೆ ಅತ್ಯಂತ ಖೇದಕರ. ವರ್ಷಪೂರ್ತಿ ಕಷ್ಟಪಟ್ಟು ಅಧ್ಯಯನ ಮಾಡಿ ಉತ್ತಮ ಭವಿಷ್ಯದ ಆಸೆಪಟ್ಟ ವಿದ್ಯಾರ್ಥಿ ಹಾಗೂ ಆತನ ಏಳಿಗೆಗೆ ನೂರೆಂಟು ಕನಸು ಕಟ್ಟಿಕೊಂಡ ಪಾಲಕರಿಗೆ ಪರೀಕ್ಷಾ ಸಿಬ್ಬಂದಿಯ ಕೃತ್ಯದಿಂದ ಮರ್ಮಾಘಾತವಾಗಿದೆ. ಇಂತಹ ಮನೋಸ್ಥಿತಿಯ ವ್ಯಕ್ತಿಗಳನ್ನು ಶಿಕ್ಷಣ ಅಥವಾ ಸರ್ಕಾರಿ ಸೇವೆಯಿಂದ ವಜಾ ಮಾಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ನಮ್ಮ ಸಂಸ್ಕಾರ, ಆಚರಣೆ ರೀತಿ-ನೀತಿಗಳು ವ್ಯವಸ್ಥೆಗೆ ದುರುಪಯೋಗವಾಗುತ್ತಿದ್ದರೆ ಮಾತ್ರ ಆ ಸಂದರ್ಭದಲ್ಲಿ ಅದಕ್ಕೆ ನಿರ್ಬಂಧನೆ ಹಾಕಬೇಕು. ಬ್ರಾಹ್ಮಣರು ಸ್ವಾಭಾವಿಕವಾಗಿಯೇ ಶಾಂತಿಪ್ರಿಯರು, ಹಾಗಂತ ಹೇಡಿಗಳಲ್ಲ. ಸರ್ಕಾರ ಕೂಡಲೆ ತನಿಖೆ ನಡೆಸಿ ತಪ್ಪಿತಸ್ಥ ಹೀನಮನಸ್ಸಿನ ಪರೀಕ್ಷಾ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ಬ್ರಾಹ್ಮಣ ಸಮಾಜದ ತಾಲೂಕು ಕಾರ್ಯದರ್ಶಿ ಗೋವಿಂದ ಚಿಮ್ಮಲಗಿ, ಸತೀಶ ಕುಲಕರ್ಣಿ, ಗುರುರಾಜ ನಾಡಿಗೇರ, ಗಣೇಶ ನಾಡಿಗೇರ, ಮನೋಜ ನರಗುಂದ, ನಾಗರಾಜ ಕುಲಕರ್ಣಿ, ಉಮೇಶ ವಿಶ್ವರೂಪ, ರವೀಂದ್ರ ವರಗಿರಿ, ಸುಮತಿ ವಿಶ್ವರೂಪ, ಕುಸುಮಾ ವಾಧಿರಾಜ, ಶಾರದಾ ಜೋಶಿ, ಶಾರದಾ ಕುಲಕರ್ಣಿ, ಶ್ರುತಿ ಬಿ.ಎಸ್., ಎಸ್.ಡಿ. ತಂಡಿ ಮತ್ತಿತರರಿದ್ದರು.