ವಿರೋಧದ ಮಧ್ಯೆ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣ

| Published : Jan 06 2025, 01:02 AM IST

ಸಾರಾಂಶ

ತೀವ್ರ ವಿವಾದ, ಗೊಂದಲ, ಆತಂಕಗಳ ನಡುವೆಯೇ ಅನಗೋಳದಲ್ಲಿ ಭಾನುವಾರ ಛತ್ರಪತಿ ಸಂಭಾಜಿ ಮಹಾರಾಜರ ಪ್ರತಿಮೆ ಭಾನುವಾರ ಅನಾವರಣಗೊಂಡಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ತೀವ್ರ ವಿವಾದ, ಗೊಂದಲ, ಆತಂಕಗಳ ನಡುವೆಯೇ ಅನಗೋಳದಲ್ಲಿ ಭಾನುವಾರ ಛತ್ರಪತಿ ಸಂಭಾಜಿ ಮಹಾರಾಜರ ಪ್ರತಿಮೆ ಭಾನುವಾರ ಅನಾವರಣಗೊಂಡಿದೆ. ಪುತ್ಥಳಿ ಅನಾವರಣ ಕಾರ್ಯಕ್ರಮ ರಾಜಕೀಯ ಜಟಾಪಟಿಗೆ ಕಾರಣವಾಗಿತ್ತು. ವಿವಾದದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪ್ರತಿಮೆ ಅನಾವರಣಕ್ಕೆ ಅನುಮತಿ ನಿರಾಕರಿಸಿತ್ತು. ಪ್ರತಿಮೆ ಅನಾವರಣ ಮಾಡಿಯೇ ಮಾಡುತ್ತೇವೆ ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಘೋಷಿಸಿದ್ದರು. ಈ ಹಿನ್ನೆಲೆ ಭಾನುವಾರ ಬೆಳಗ್ಗೆಯೇ ಶ್ರೀರಾಮ ಸೇನೆ ಹಿಂದೂಸ್ತಾನ ಸಂಘಟನೆ ಅಧ್ಯಕ್ಷ ರಮಾಕಾಂತ ಕೊಂಡುಸ್ಕರ್‌ ಬೆಂಬಲಿಗರು ಪ್ರತಿಮೆ ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ ಅಭಯ ಪಾಟೀಲ ಮತ್ತು ಕೊಂಡುಸ್ಕರ್‌ ಬೆಂಬಲಿಗರ ಮಧ್ಯೆ ಜಟಾಪಟಿಯೂ ನಡೆಯಿತು.

ಯುವಕರ ಗುಂಪು ಚದುರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಬೆಳಗ್ಗೆಯಿಂದಲೇ ಅನಗೋಳದ ಡಿವಿಎಸ್‌ ವೃತ್ತದ ಸುತ್ತಮುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. 21 ಅಡಿ ಎತ್ತರದ ಸಂಭಾಜಿ ಮಹಾರಾಜರ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ.

ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣಕ್ಕೆ ಜ.5ರಂದು ದಿನಾಂಕ ನಿಗದಿ ಮಾಡಲಾಗಿತ್ತು. ಶಾಸಕ ಅಭಯ ಪಾಟೀಲ ಮತ್ತು ಮೇಯರ್‌ ಸವಿತಾ ಕಾಂಬಳೆ, ಉಪಮೇಯರ್‌ ಆನಂದ ಚವ್ಹಾಣ್‌ ಸೇರಿದಂತೆ ಪಾಲಿಕೆ ಸದಸ್ಯರು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಸಂಭಾಜಿ ಮಹಾರಾಜರ ಪ್ರತಿಮೆ ಮತ್ತು ಭವನದ ಕಾಮಗಾರಿ ಪೂರ್ಣಗೊಂಡಿಲ್ಲ. ಹಾಗಾಗಿ, ಕಾರ್ಯಕ್ರಮ ಮುಂದೂಡಬೇಕೆಂದು ಕೆಲವರು ಆಗ್ರಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕೂಡ ಕಾಮಗಾರಿ ಅರ್ಧವಾಗಿರುವುದರಿಂದ ತರಾತುರಿಯಲ್ಲಿ ಪ್ರತಿಮೆ ಅನಾವರಣ ಮಾಡುವುದು ಸರಿಯಲ್ಲ. ಮೇಯರ್‌ ಅವರ ಅಧಿಕಾರವಧಿ ಇನ್ನೂ ಇದೆ. ಅವರ ಅವಧಿಯಲ್ಲೇ ಕಾಮಗಾರಿ ಪೂರ್ಣಗೊಂಡ ನಂತರ ಉದ್ಘಾಟನೆ ಕಾರ್ಯಕ್ರಮ ಮಾಡಲಾಗುವುದು ಎಂದು ಹೇಳಿದ್ದರು.

ಹೀಗಾಗಿ ಪ್ರತಿಮೆ ಅನಾವರಣ ಕಾರ್ಯಕ್ರಮ ಗೊಂದಲದ ಗೂಡಾಗಿತ್ತು. ಈ ಸಂಬಂಧ ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಅವರು ಶಾಸಕ ಅಭಯ ಪಾಟೀಲ ಸೇರಿದಂತೆ ಸ್ಥಳೀಯರ ಜೊತೆಗೆ ಸಭೆ ನಡೆಸಿ, ಮನವೊಲಿಸಿ, ಕಾರ್ಯಕ್ರಮ ಮುಂದೂಡುವ ಪ್ರಯತ್ನ ಮಾಡಿದ್ದರು. ಆದರೆ, ಶಾಸಕ ಅಭಯ ಪಾಟೀಲ ಸೇರಿದಂತೆ ಪಾಲಿಕೆ ಆಡಳಿತಾರೂಢ ಪಕ್ಷದ ಸದಸ್ಯರೆಲ್ಲರೂ ಪ್ರತಿಮೆ ಅನಾವರಣಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ಪ್ರತಿಮೆ ಅನಾವರಣ ಮಾಡಿಯೇ ಮಾಡುತ್ತೇವೆ ಎಂದು ಪಟ್ಟು ಹಿಡಿದರು.

ಪಾಲಿಕೆ ಅಧಿಕಾರಿ ವಿರುದ್ಧ ಮೇಯರ್‌ ಗರಂ:

ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣಗೊಳಿಸಲು ಸಿದ್ಧತೆಯ ಪರಿಶೀಲನೆಗೆ ಆಗಮಿಸಿದ ಮೇಯರ್‌ ಸವಿತಾ ಕಾಂಬಳೆ ಮತ್ತು ಉಪಮೇಯರ್‌ ಆನಂದ ಚವ್ಹಾಣ ಅವರಿಗೆ ಪಾಲಿಕೆ ಉಪ ಆಯುಕ್ತೆ ಲಕ್ಷ್ಮಿ ನಿಪ್ಪಾಣಿಕರ ತಡೆದ ಪ್ರಸಂಗವೂ ನಡೆಯಿತು. ಈ ವೇಳೆ ಮೇಯರ್‌ ಸವಿತಾ ಕಾಂಬಳೆ ಅವರು ಗರಂ ಆದರು. ಪ್ರತಿಮೆ ಸುತ್ತಲೂ ಇರುವ ಕಟ್ಟಿಗೆ ಹಾಗೂ ಹಸಿರು ಪರದೆ ಬಿಚ್ಚಬೇಕು. ಇಲ್ಲದಿದ್ದರೆ ನಾನೇ ತೆರಳಿ ಪರದೆ ಬಿಚ್ಚಲೇ ಎಂದು ಪ್ರಶ್ನಿಸಿದರು. ಸ್ಥಳಕ್ಕೆ ಆಗಮಿಸುವಂತೆ ಮೇಲಧಿಕಾರಿಗಳಿಗೆ ತಿಳಿಸುವಂತೆ ಪಟ್ಟು ಹಿಡಿದರು. ಇದಕ್ಕೆ ಪ್ರತ್ಯುತ್ತರ ನೀಡದೇ ನಿಪ್ಪಾಣಿಕರ ಮೌನವಹಿಸಿದರು. ಬಳಿಕ ಮೇಯರ್‌ ಸಮ್ಮುಖದಲ್ಲಿ ಪ್ರತಿಮೆ ಸುತ್ತಲೂ ಹಾಕಿದ್ದ ಬಟ್ಟೆ ತೆರವುಗೊಳಿಸಲಾಯಿತು.

ಸಂಭಾಜಿ ಮಹಾರಾಜರ ಪ್ರತಿಮೆ ಸ್ವಚ್ಛಗೊಳಿಸಿ, ಕ್ಷೀರಾಭಿಷೇಕ ಮಾಡಿ, ಪೂಜೆ ಸಲ್ಲಿಸಲಾಯಿತು. ಸಂಭಾಜಿ ಪ್ರತಿಮೆ ಹಾಗೂ ಭವನದ ಕಟ್ಟಡವನ್ನು ಝಗಮಗಿಸುವ ವಿದ್ಯುದ್ಧೀಪಾಲಂಕಾರ, ಹೂವಿನಿಂದ ಸಿಂಗರಿಸಲಾಗಿತ್ತು. ಕೇಸರಿ ಧ್ವಜಗಳು ರಾರಾಜಿಸಿದವು. ಪ್ರತಿಮೆ ಅನಾವರಣಕ್ಕೆ ವಿರೋಧಿಸಿದ ಯುವಕರ ಗುಂಪು ಕೇಸರಿ ಧ್ವಜ ತೆಗೆಯಲು ಯತ್ನಿಸಿದಾಗ ಎರಡೂ ಗುಂಪಿನ ಯುವಕರ ಮಧ್ಯೆ ವಾಗ್ವಾದ ನಡೆದು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಯುವಕರ ಗುಂಪನ್ನು ಚದುರಿಸಲು ಪೊಲೀಸರು ಹರಸಾಹಸ ಮಾಡಿದರು. ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿದ ಯುವಕರ ಗುಂಪು ಆಗಮಿಸುತ್ತಿದ್ದರಿಂದ ಅಲ್ಲಲ್ಲಿ ಬ್ಯಾರಿಕೇಡ್‌ ಹಾಕಿ, ಯಾರೂ ಬರದಂತೆ ತಡೆಯಲಾಗಿತ್ತು. ಉದ್ರಿಕ್ತ ಗುಂಪು ಕಾರ್ಯಕ್ರಮ ಸಂಘಟಕರ ವಿರುದ್ಧ ಘೋಷಣೆ ಕೂಗಿದರು.

ಮತ್ತೊಂದೆಡೆ ಶಾಸಕ ಅಭಯ ಪಾಟೀಲ ಬೆಂಬಲಿಗರು ಶೋಭಾಯಾತ್ರೆ ಮೂಲಕ ಆಗಮಿಸಿ, ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣಗೊಳಿಸುವ ಮೂಲಕ ಗೊಂದಲಗಳಿಗೆ ತೆರೆ ಬಿದ್ದಿತು. ಶೋಭಾಯಾತ್ರೆಯಲ್ಲಿ ಕೇಸರಿ ಬಾವುಟ ರಾರಾಜಿಸಿದವು.

ಡಿಸಿಪಿ ರೋಹನ್ ಜಗದೀಶ್ ನೇತೃತ್ವದಲ್ಲಿ 7 ಕೆಎಸ್ಆರ್ ಪಿ ವಾಹನಗಳು, ಎಸಿಪಿ, ಮೂವರು ಸಿಪಿಐಗಳು ಬಿಗಿ ಪೊಲೀಸ್ ಬಂದೋಬಸ್ತ್ ನಿರ್ವಹಿಸುತ್ತಿದ್ದಾರೆ. ಸ್ಥಳಕ್ಕೆ ಪೊಲೀಸ್‌ ಆಯುಕ್ತ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ಕೂಡ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ಭವ್ಯ ಶೋಭಾಯಾತ್ರೆ: ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣಕ್ಕೆ ಅನುಮತಿ ನಿರಾಕರಿಸಿದ ಜಿಲ್ಲಾಡಳಿತಕ್ಕೆ ಸೆಡ್ಡು ಹೊಡೆದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಅನಗೋಳದ ನಾಕಾದಿಂದ ಭವ್ಯ ಶೋಭಾಯಾತ್ರೆ ನಡೆಸಿದರು.

ಕುಂಭ ಹೊತ್ತ ಸಾವಿರಾರು ಮಹಿಳೆಯರು, ಡೋಲ್‌, ತಾಸೆ, ಜಾನಪದ ಕಲಾತಂಡಗಳು, ಕುದರೆ ಸವಾರಿ ಸೇರಿದಂತೆ ವಿವಿಧ ಕಲಾ ತಂಡಗಳು ಶೋಭಾಯಾತ್ರೆಯಲ್ಲಿ ಗಮನ ಸೆಳೆದವು. ಜಿಲ್ಲಾಡಳಿತದ ಅನುಮತಿ ನಿರಾಕರಣೆ ನಡುವೆಯೇ ಮೇಯರ್‌ ಸವಿತಾ ಕಾಂಬಳೆ ಅವರು ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣಗೊಳಿಸಿದರು.