ಸಂಭ್ರಮದ ಶರಣಬಸವೇಶ್ವರರ ಜೋಡು ರಥೋತ್ಸವ

| Published : Sep 03 2025, 01:01 AM IST

ಸಾರಾಂಶ

೨೭ನೇ ವರ್ಷದ ಜೋಡು ರಥೋತ್ಸವದೊಂದಿಗೆ ಶ್ರಾವಣ ಮಾಸದಲ್ಲಿ ತಿಂಗಳ ಕಾಲ ಯಾದಗಿರಿಯ ಬೆಳಗಿಮಠದ ಮಲ್ಲಿಕಾರ್ಜುನ ಶಾಸ್ತಿ, ಗದಗಿನ ವೀರೇಶ್ವರ ಪುಣ್ಯಾಶ್ರಮದ ಲಿಂಗಯ್ಯ ಸ್ವಾಮಿಗಳು ಗುಂಡಗರ್ತಿ ನೇತೃತ್ವದಲ್ಲಿ ನಡೆದ ಪುರಾಣ ಪ್ರವಚನ ಮಂಗಳವಾರ ರಾತ್ರಿ ಸಂಪನ್ನಗೊಂಡಿತು.

ಕಾರಟಗಿ:

ಪಟ್ಟಣದ ಆರಾಧ್ಯ ದೈವ ಶ್ರೀಶರಣ ಬಸವೇಶ್ವರ ೨೭ನೇ ಜೋಡು ರಥೋತ್ಸವ ಮಂಗಳವಾರ ಸಂಜೆ ಅಪಾರ ಸಂಖ್ಯೆಯ ಭಕ್ತರ ನಡುವೆ ಶ್ರದ್ಧಾ-ಭಕ್ತಿಯಿಂದ ನೆರವೇರಿತು.

ದೇವಸ್ಥಾನದ ಮುಂದೆ ಅಲಂಕೃತ ರಥಗಳಿಗೆ ಸಂಜೆ ೫.೫೫ರ ಮೂಹೂರ್ತಕ್ಕೆ ಅರ್ಚಕ ಮುತ್ತಯ್ಯ ಸ್ವಾಮಿ ಉತ್ಸವ ಮೂರ್ತಿ ತಂದು ಪೂಜೆ ಸಲ್ಲಿಸಿದ ಬಳಿಕ ಭಕ್ತರ ಜಯಘೋಷಣೆಗಳ ನಡುವೆ ನಿಧಾನವಾಗಿ ರಥ ಚಲಿಸಿದವು. ನೆರೆದ ಭಕ್ತರು ಜೋಡು ರಥಗಳನ್ನು ರಥ ಬೀದಿಯಲ್ಲಿ ಎಳೆದರು. ವಿವಿಧ ಭಜನಾ ತಂಡ, ಭಾಜಾ ಭಜಂತ್ರಿ, ಡೊಳ್ಳು ಸೇರಿದಂತೆ ವಿವಿಧ ವಾದ್ಯ ಮೇಳಗಳ ನಡುವೆ ರಥಗಳು ಪಾದಗಟ್ಟೆ ವರೆಗೆ ತಲುಪಿ ಮರಳಿ ಸ್ವ-ಸ್ಥಾನಕ್ಕೆ ಬಂದು ತಲುಪಿದವು.ರಥಬೀದಿಯ ಎರಡು ಬದಿ ಮನೆ ಮೇಲೆ ಹಾಗೂ ರಸ್ತೆಯ ಬದಿ ನಿಂತ ಭಕ್ತರು ರಥಕ್ಕೆ ಬಾಳೆಹಣ್ಣು, ಹೂ ಮತ್ತು ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು.

೨೭ನೇ ವರ್ಷದ ಜೋಡು ರಥೋತ್ಸವದೊಂದಿಗೆ ಶ್ರಾವಣ ಮಾಸದಲ್ಲಿ ತಿಂಗಳ ಕಾಲ ಯಾದಗಿರಿಯ ಬೆಳಗಿಮಠದ ಮಲ್ಲಿಕಾರ್ಜುನ ಶಾಸ್ತಿ, ಗದಗಿನ ವೀರೇಶ್ವರ ಪುಣ್ಯಾಶ್ರಮದ ಲಿಂಗಯ್ಯ ಸ್ವಾಮಿಗಳು ಗುಂಡಗರ್ತಿ ನೇತೃತ್ವದಲ್ಲಿ ನಡೆದ ಪುರಾಣ ಪ್ರವಚನ ಮಂಗಳವಾರ ರಾತ್ರಿ ಸಂಪನ್ನಗೊಂಡಿತು. ಬೆಳಗ್ಗೆ ಶರಣ ಬಸವೇಶ್ವರರ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ವಿಶೇಷ ಪೂಜೆ ನಡೆದವು.

ಸಂಜೆ ದೇವಸ್ಥಾನಕ್ಕೆ ಕಾಂಗ್ರೆಸ್ ಮುಖಂಡ ವೆಂಕಟೇಶ ತಂಗಡಗಿ, ಪುರಸಭೆ ಅಧ್ಯಕ್ಷೆ ರೇಖಾ ರಾಜಶೇಖರ ಆನೆಹೊಸುರ, ವಿವಿಧ ವಾರ್ಡ್‌ಗಳ ಸದಸ್ಯರು, ವಿವಿಧ ಪಕ್ಷಗಳ ಮುಖಂಡರು, ಉದ್ಯಮಿಗಳು, ವರ್ತಕರು, ಪ್ರಮುಖರು, ಪುರಾಣ ಸಮಿತಿ ಸೇರಿದಂತೆ ವಿವಿಧ ಗ್ರಾಮಗಳ ಅಪಾರ ಸಂಖ್ಯೆಯ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.