ಶಿರಾಲಿ ಸಾರದಹೊಳೆಯ ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವಸ್ಥಾನದ 4ನೇ ವರ್ಷದ ವರ್ಧಂತ್ಯುತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.

ಶಿರಾಲಿ ಸಾರದಹೊಳೆಯಲ್ಲಿ ಹಳೇಕೋಟೆ ಹನುಮಂತ ದೇವರ ವರ್ಧಂತ್ಯುತ್ಸವ

ಕನ್ನಡಪ್ರಭ ವಾರ್ತೆ ಭಟ್ಕಳ

ಶಿರಾಲಿ ಸಾರದಹೊಳೆಯ ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವಸ್ಥಾನದ 4ನೇ ವರ್ಷದ ವರ್ಧಂತ್ಯುತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.

ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಉಜಿರೆ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ ೧೦೦೮ ಮಹಾಮಂಡಲೇಶ್ವರ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಸನಾತನ ಧರ್ಮ ಜಗತ್ತಿಗೆ ಬೆಳಕು ನೀಡುವ ಧರ್ಮವಾಗಿದೆ. ಜ್ಞಾನಯೋಗ, ಕರ್ಮಯೋಗ, ಭಕ್ತಿಯೋಗದ ಮೂಲಕ ಭಗವಂತನನ್ನು ಅರಿಯಬಹುದಾಗಿದೆ. ಭಕ್ತಿಯೋಗ ಅತ್ಯಂತ ಸುಲಭದ ಮಾರ್ಗವಾಗಿದೆ. ಭಕ್ತರು ದಿನಂಪ್ರತಿ ಒಂದು ಗಂಟೆಯಾದರೂ ಧ್ಯಾನದಲ್ಲಿ ತೊಡಗಿಕೊಳ್ಳಬೇಕು. ಆ ಮೂಲಕ ಭಗವಂತನ ಕೃಪೆಗೆ ಪಾತ್ರರಾಗಬಹುದಾಗಿದೆ. ಭಗವಂತನನ್ನು ಅನನ್ಯವಾಗಿ ಚಿಂತಿಸಬೇಕು. ಅಂತಹ ಭಕ್ತನ ಯೋಗಕ್ಷೇಮವನ್ನು ಸ್ವತಃ ಭಗವಂತನೆ ನೋಡಿಕೊಳ್ಳುತ್ತಾನೆ. ಸಮರ್ಪಣಾ ಭಾವದಿಂದ ಭಕ್ತನು ಗುರುವಿನ ಹೃದಯದಲ್ಲಿ ಸ್ಥಾನ ಪಡೆಯುತ್ತಾನೆ ಎಂದರು. ನಾಮಧಾರಿ ಪೀಠ ಉತ್ತರ ಭಾರತ ಸೇರಿದಂತೆ ದೇಶ ವಿದೇಶಗಳಲ್ಲಿ ೧ ಕೋಟಿಗೂ ಹೆಚ್ಚು ಭಕ್ತರನ್ನು ಹೊಂದಿರುವುದು ಹೆಮ್ಮೆಯ ಸಂಗತಿಯಾಗಿದೆ. ಹಿಂದುಳಿದ ವರ್ಗ ಸದಾ ಒಗ್ಗಟ್ಟಾಗಿ ಮುನ್ನಡೆಯುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ಉಪಸ್ಥಿತರಿದ್ದ ದೇವಸ್ಥಾನದ ಆಡಳಿ ಮಂಡಳಿ ಅವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಸಂಕಷ್ಟವೆಂದು ಶ್ರೀ ಹಳೆಕೋಟೆ ಹನುಮಂತ ದೇವಸ್ಥಾನಕ್ಕೆ ಬಂದು ಬೇಡಿದರೆ ಹನುಮಂತ ಖಂಡಿತ ಅನುಗ್ರಹಿಸುತ್ತಾನೆ. ದೇವಸ್ಥಾನದ ಆಡಳಿತ ಮಂಡಳಿ ದೇವಸ್ಥಾನದ ಅಭಿವೃದ್ಧಿಗಾಗಿ ₹ನಾಲ್ಕು ಕೋಟಿಗೂ ಮೊತ್ತದ ಕಾಮಗಾರಿ ಬೇಡಿಕೆ ಪಟ್ಟಿಯನ್ನು ನೀಡಿದ್ದು. ಆ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ ಎಂದರು.

ದೇವಸ್ಥಾನದ ಮೋಕ್ತೆಸರ ಸುಬ್ರಾಯ ನಾಯ್ಕ ಮಾತನಾಡಿದರು. ಈ ಸಂದರ್ಭ ಮಾವಳ್ಳಿ ಹೋಬಳಿ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ನಾಗೇಂದ್ರ ನಾಯ್ಕ, ಉಪಾಧ್ಯಕ್ಷ ರಾಜು ನಾಯ್ಕ, ಮಾಜಿ ಅಧ್ಯಕ್ಷರಾದ ಆರ್.ಕೆ. ನಾಯ್ಕ, ಸುಬ್ರಾಯ ನಾಯ್ಕ, ಕಾರ್ಯದರ್ಶಿ ರವೀಂದ್ರ ನಾಯ್ಕ, ವೇದಮೂರ್ತಿ ಆಗಮ ಪ್ರವೀಣ ಲಕ್ಷ್ಮೀಪತಿ ಗೋಪಾಲಾಚಾರ್ಯ ಮತ್ತಿತರರಿದ್ದರು. ವರ್ಧಂತ್ಯುತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಸಲಾಯಿತು. ಸಾವಿರಾರು ಭಕ್ತರು ದೇವರ ದರ್ಶನ ಪಡೆದರು ಪ್ರಸಾದ ಭೋಜನ ಸ್ವೀಕರಿಸಿದರು.