ಶಿವಾನಂದ ಮಹಾಬಲಶೆಟ್ಟಿ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿಕೃಷ್ಣಾ ನದಿ ಇಲ್ಲಿನ ಜನರ ಜೀವನಾಡಿ ಎಂಬುವುದರಲ್ಲಿ ಎರಡು ಮಾತಿಲ್ಲ. ರೈತರಿಗೆ, ಇಲ್ಲಿನ ಜನರಿಗೆ ಕೃಷ್ಣಾ ನದಿ ಜೀವನೋಪಾಯಕ್ಕೆ ಸಾಕಷ್ಟು ಅಡಿಪಾಯ ಹಾಕಿದೆ ಎಂಬುವುದರಲ್ಲಿ ಎರಡು ಮಾತಿಲ್ಲ. ಆದರೆ, ಈಗ ಬೇಸಿಗೆ ಆವರಿಸಿದೆ. ನೀರು ಸಂಪೂರ್ಣ ಕುಸಿದಿದೆ. ಸಹಜವಾಗಿ ರಬಕವಿ-ಮಹಿಷವಾಡಗಿ ಸೇತುವೆ ಕೂಡ ಸಂಚಾರಕ್ಕೆ ಮುಕ್ತವಾಗಿದೆ.
ಆದರೆ, ವಿಷಯ ಸಂಚಾರಕ್ಕೆ ಸೇತುವೆ ಮುಕ್ತವಾಗಿದೆ ಎಂಬುವುದು ಅಲ್ಲ. ಇದೆ ಕೃಷ್ಣಾ ನದಿಯಲ್ಲಿ ಮರಳು ತೆಗೆಯಲು ಕೂಡ ಕೆಲವರು ಸಂಚು ಹಾಕುತ್ತಿರುವುದು. ನದಿ ಮರಳಿಗೆ ಹೆಚ್ಚಿನ ಬೇಡಿಕೆ ಎಂಬುವುದು ಜನಜನಿತ. ಅಲ್ಲದೆ, ಬೇಸಿಗೆ ವೇಳೆ ನಡೆಯುವ ಕಟ್ಟಡ ಕಾಮಗಾರಿ ಬೇರೆ ದಿನಗಳಲ್ಲಿ ನಡೆಯುವುದು ಬಹಳ ವಿರಳ. ಸಹಜವಾಗಿ ಈ ಸಂದರ್ಭದಲ್ಲಿ ಬೇಡಿಕೆ ಕೂಡ ಹೆಚ್ಚಾಗಿರುತ್ತದೆ. ನದಿಗಯಲ್ಲಿ ನೀರು ಕೂಡ ಖಾಲಿಯಾಗಿದ್ದರಿಂದ ಮರಳು ಕೂಡ ಹೇರಳವಾಗಿ ಸಿಕ್ಕುತ್ತದೆ. ಈ ನಿಟ್ಟಿನಲ್ಲಿ ಮರಳು ಮಾಫಿಯಾ ಈ ಬೇಸಿಗೆ ಸಂದರ್ಭದಲ್ಲಿ ಹೆಚ್ಚಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.ಮರಳು ಮಾಫಿಯಾ?:ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಕುಸಿದಿರುವ ಕಾರಣ ಕೃಷ್ಣೆಯ ಒಡೊಳೊಗಿನ ಮರಳನ್ನು ಯಥೇಚ್ಛವಾಗಿ ಅಕ್ರಮವಾಗಿ ಸಾಗಿಸಲು ಸುತ್ತಲಿನ ಗ್ರಾಮಗಳ ಕೆಲ ಪ್ರಭಾವಿ ಮರಳು ಮಾಫಿಯಾಕ್ಕೆ ಕೈ ಹಾಕುವ ಸಾಧ್ಯತೆ ಇದೆ. ಮರಳನ್ನು ಅಕ್ರಮವಾಗಿ ಸಾಗಿಸಲು ವ್ಯವಸ್ಥಿತ ಜಾಲ ಕೂಡ ಸಮರ್ಪಕವಾಗಿ ಅಧಿಕಾರಿಗಳ ಕಣ್ತಪ್ಪಿಸಿ ಕೆಲಸ ಮಾಡುವುದು ಕೂಡ ಈ ಹಿಂದೆ ಅನೇಕ ಬಾರಿ ದಾಳಿ ವೇಳೆ ಕಂಡುಬಂದಿದೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ಕೃಷ್ಣಾ ತೀರದಲ್ಲಿ ಅಕ್ರಮ ಮರಳುಗಾರಿಕೆ ನಡೆಯದಂತೆ ತಡೆಯಲು ನಿರಂತರ ದಾಳಿ ಕೂಡ ನಡೆಯುತ್ತಿದೆ. ಮಾತ್ರವಲ್ಲ, ಹಿಪ್ಪರಗಿ ಗ್ರಾಮದಲ್ಲಿ 86 ಮೆಟ್ರಿಕ್ ಟನ್ ಮರಳನ್ನು ಕೂಡ ಎಸಿ ಶ್ವೇತಾ ಬೀಡಿಕರ ನೇತೃತ್ವದ ತಂದ ಕೂಡ ಯಶಸ್ವಿಯಾಗಿ ವಶಪಡಿಸಿಕೊಂಡು, ಮರಳು ಮಾಫಿಯಾಗೆ ಎಚ್ಚರಿಕೆ ಕೊಟ್ಟಿದ್ದಾರೆ. ಮಾತ್ರವಲ್ಲ, ಸಂಬಂಧಿಸಿದ ಇಲಾಖೆಯು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಮರಳು ಅಕ್ರಮ ದಂಧೆ ನಡೆಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ಹಾಕಿದ್ದಾರೆ. ಯಾರೇ ಅಕ್ರಮ ದಂಧೆ ನಡೆಸಿದ್ದಲ್ಲಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ತಹಶೀಲ್ದಾರ ಗಿರೀಶ ಸ್ವಾದಿ ಕೂಡ ತಿಳಿಸಿದ್ದಾರೆ.ಸರ್ಕಾರದ ಸಂಪತ್ತನ್ನು ಲೂಟಿ ಮಾಡುವ ವ್ಯವಸ್ಥೆ ಹಾಗೂ ಪಿತೂರಿಯಲ್ಲಿರುವ ಜನತೆಗೆ ಕಾನೂನು ಪ್ರಕಾರ ಕಠಿಣ ಕ್ರಮದೊಂದಿಗೆ ದಂಡ ವಿಧಿಸಲಾಗುವುದು. ಇದೀಗ ಕೃಷ್ಣೆಯ ಒಡಲಲ್ಲಿ ನೀರಿನ ಮಟ್ಟ ಸಂಪೂರ್ಣ ಕುಸಿದಿದೆ. ಸಾರ್ವಜನಿಕರು ಮಿತವಾಗಿ ನೀರನ್ನು ಬಳಕೆ ಮಾಡಬೇಕು. ಒಂದು ವೇಳೆ ಮರಳು ಮಾಫಿಯಾಗೆ ಕೈ ಹಾಕಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದೂ ಎಚ್ಚರಿಸಿದ್ದಾರೆ.ವರ್ಷವಿಡೀ ಬಹುತೇಕ ದಿನಗಳು ಮುಚ್ಚುವ ಈ ಸೇತುವೆ ಕೇವಲ ಬೇಸಿಗೆ ಸಂದರ್ಭ ಹೆಚ್ಚಾಗಿ ಮೇ ತಿಂಗಳಲ್ಲಿ ಸಂಚಾರಕ್ಕೆ ಮುಕ್ತವಾಗುತ್ತದೆ. ಅಥಣಿಯಿಂದ ರಬಕವಿ-ಬನಹಟ್ಟಿ ಕಡೆಗೆ ಬೈಕ್ ಹಾಗೂ ಸೈಕಲ್ ಮೂಲಕ ತೆರಳುವ ಜನತೆ ಬೋಟ್ಗಳ ಮೂಲಕ ಸಾಗುತ್ತಾರೆ. ಇದೀಗ ಸೇತುವೆ ಮೇಲೆ ವಾಹನ ಸಂಚಾರಕ್ಕೆ ಅವಕಾಶವಾಗಿರುವ ಕಾರಣ ಬೋಟ್ ಸಂಚಾರ ಸ್ಥಗಿತಗೊಂಡಿದೆ.ಬೇಸಿಗೆ ಬಂತೆಂದರೆ ಸಾಕು, ಮರಳು ಮಾಫಿಯಾ ಸಕ್ರೀಯವಾಗುತ್ತದೆ. ನೈಸರ್ಗಿಕವಾಗಿ ನದಿ ಪಾತ್ರಕ್ಕೆ ಧಕ್ಕೆ ತರುವ ಈ ಪ್ರಕ್ರಿಯೆ ಪ್ರತಿ ಬೇಸಿಗೆಯಲ್ಲೂ ಅವ್ಯಾಹತವಾಗಿ ನಡೆಯುತ್ತಿದ್ದು, ಇದರಲ್ಲಿ ಕೆಲ ಪ್ರಭಾವಿ ಖದೀಮರೂ ಮುಖ್ಯ ಭೂಮಿಕೆಯಲ್ಲಿದ್ದಾರೆ. ಸಿಮೆಂಟ್ ಚೀಲಗಳು, ಅಟೋಗಳು, ದ್ವಿಚಕ್ರ ವಾಹನಗಳ ಮೂಲಕ ಮರಳು ಸಾಗಾಣಿಕೆ ಮಾಡಿ ಹಣ ದೋಚುವ ದುಷ್ಕರ್ಮಿಗಳನ್ನು ತಡೆದು, ಅಂಥವರ ವಿರುದ್ಧ ಮುಲಾಜಿಲ್ಲದೇ ಕ್ರಮ ಜರುಗಿಸುವ ಮೂಲಕ ತಾಲೂಕಾಡಳಿತ ಕೃಷ್ಣೆಯ ಒಡಲು ಸಂರಕ್ಷಿಸಬೇಕು.
-ನೀಲಕಂಠ ಗೌರಿಹರ ಮುತ್ತೂರ. ಈಲ್ಲಾ ಕಾಂಗ್ರೆಸ್ ಧುರೀಣರು, ರಬಕವಿ.