ಸಾರಾಂಶ
ಗಣಿ ಇಲಾಖೆ ಗುರುತುಪಡಿಸಿರುವ ಸ್ಥಳ ಮರಳುಗಾರಿಕೆಗೆ ಯೋಗ್ಯವಲ್ಲ, ಆದರೂ ಅಲ್ಲಿ ಮರಳು ತೆಗೆದು ಈಗಾಗಲೇ ಕಿಂಡಿ ಅಣೆಕಟ್ಟಿಗೆ ಸಾಕಷ್ಟು ಹಾನಿಗೊಂಡಿದೆ. ಅಲ್ಲದೇ ಮರಳು ಸಂಗ್ರಹಕ್ಕೆ ಕೃಷಿ ಭೂಮಿ ಬಳಕೆ ಮಾಡಿದ್ದಾರೆ, ಇಲ್ಲಿನ ರಸ್ತೆಗಳು ಅಗಲಕಿರಿದಾಗಿದ್ದು ಲಾರಿಗಳ ಓಡಾಟಕ್ಕೆ ಯೋಗ್ಯವಾಗಿಲ್ಲ ಎಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದರು.
ಕನ್ನಡಪ್ರಭ ವಾರ್ತೆ ಕೋಟ
ಇಲ್ಲಿನ ಬಾರಕೂರು ಗ್ರಾಪಂ ಹಾಗೂ ಸಾಲಿಗ್ರಾಮ ಪಪಂ ವ್ಯಾಪ್ತಿಯ ನಾಗರಮಠ ಹಾಗೂ ಹೊಸಾಳ ಗ್ರಾಮದ ಕಿಂಡಿ ಅಣೆಕಟ್ಟುಗಳಿಗೆ ಅಪಾಯವಾಗುವಂತೆ ಮರಳುಗಾರಿಕೆ ನಡೆಸುತ್ತಿರುವವರ ವಿರುದ್ಧ ಸ್ಥಳೀಯರು ಪ್ರತಿಭಟಿಸಿ ಶಾಸಕರಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಈ ವೇಳೆ ಗಣಿ ಇಲಾಖೆ ಗುರುತುಪಡಿಸಿರುವ ಸ್ಥಳ ಮರಳುಗಾರಿಕೆಗೆ ಯೋಗ್ಯವಲ್ಲ, ಆದರೂ ಅಲ್ಲಿ ಮರಳು ತೆಗೆದು ಈಗಾಗಲೇ ಕಿಂಡಿ ಅಣೆಕಟ್ಟಿಗೆ ಸಾಕಷ್ಟು ಹಾನಿಗೊಂಡಿದೆ. ಅಲ್ಲದೇ ಮರಳು ಸಂಗ್ರಹಕ್ಕೆ ಕೃಷಿ ಭೂಮಿ ಬಳಕೆ ಮಾಡಿದ್ದಾರೆ, ಇಲ್ಲಿನ ರಸ್ತೆಗಳು ಅಗಲಕಿರಿದಾಗಿದ್ದು ಲಾರಿಗಳ ಓಡಾಟಕ್ಕೆ ಯೋಗ್ಯವಾಗಿಲ್ಲ ಎಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರು.ಶಾಸಕರು ಸ್ಥಳದಿಂದಲೇ ಗಣಿ ಅಧಿಕಾರಿಗಳನ್ನು ದೂರವಾಣಿಯಲ್ಲಿ ತರಾಟೆಗೆ ತೆಗೆದುಕೊಂಡು ಗ್ರಾಮಸ್ಥರ ವಿರೋಧದ ನಡುವೆ ಮರಳುಗಾರಿಕೆ ನಡೆಸದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ ಜಿಲ್ಲಾಧಿಕಾರಿಗಳಿಗೂ ಕರೆ ಮಾಡಿ, ಸ್ಥಳ ಪರಿಶೀಲನೆ ನಡೆಸಿ ಗ್ರಾಮಸ್ಥರನ್ನು ವಿಶ್ವಾಸಕ್ಕೆ ಪಡೆದು ಮರಳುಗಾರಿಕೆ ನಡೆಸುವ ಸ್ಥಳಗಳ ಗುರುತು ಮಾಡಲು ಇಲಾಖಾಧಿಕಾರಿಗಳಿಗೆ ಸೂಚನೆ ನೀಡುವಂತೆ ಹೇಳಿದರು.
ಈ ವೇಳೆ ಬಾರಕೂರು ಗ್ರಾಪಂ ಸದಸ್ಯ ಪ್ರವೀಣ್ ನಾಗರಮಠ, ವಡ್ಡರ್ಸೆ ಗ್ರಾಪಂ ಸದಸ್ಯ ಕುಶಲ ಶೆಟ್ಟಿ, ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು.