ಸಾರಾಂಶ
ಕನ್ನಡಪ್ರಭವಾರ್ತೆ ಗುಳೇದಗುಡ್ಡ
ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಮತ್ತೆ ಪ್ರಧಾನ ಮಂತ್ರಿಯಾಗಲಿ. ಅವರಿಂದ ದೇಶ ಮತ್ತಷ್ಟು ಅಭಿವೃದ್ಧಿ ಪಥದತ್ತ ಸಾಗಲಿ ಎಂದು ಇಲ್ಲಿನ ಬಿಜೆಪಿ ಮಹಿಳಾ ಮೋರ್ಚಾ ಮಾಜಿ ಅಧ್ಯಕ್ಷೆ ಭಾಗ್ಯಾ ಉದ್ನೂರ ಹೇಳಿದರು.ಇಲ್ಲಿನ ಬಾಗಲಕೋಟೆ ರಸ್ತೆಗಿರುವ ಹೊಸ ಅಂಭಾಭವಾನಿ ದೇವಸ್ಥಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಭಿಷೇಕ ಮತ್ತು ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿ, ಈ ದೇಶಕ್ಕೆ ನರೇಂದ್ರ ಮೋದಿಯವರ ನಾಯಕತ್ವ ಅನಿವಾರ್ಯವಾಗಿದೆ. ಅವರಿಂದ ದೇಶ ಸಮಗ್ರವಾದ ಅಭಿವೃದ್ಧಿ ಸಾಧಿಸಲಿದೆ. ಜಾಗತಿಕ ಮಟ್ಟದಲ್ಲಿ ಭಾರತ ವಿಶ್ವಗುರು ಆಗುವ ಎಲ್ಲ ಭರವಸೆ ಹೊಂದಿದೆ. ಮೂರನೇ ಬಾರಿಗೆ ಪ್ರಧಾನಿಗಳಾಗಲಿ ಎಂಬ ಸದುದ್ದೇಶದಿಂದ ಈ ಪೂಜೆಯನ್ನು ಬಿಜೆಪಿ ಮಹಿಳಾ ಮೋರ್ಚಾ ಹಮ್ಮಿಕೊಂಡಿದೆ. ಬುಧವಾರದ ಮತಎಣಿಕೆ ಬಿಜೆಪಿಗೆ ಶುಭ ಸಂಕಲ್ಪ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಜೆಡಿಎಸ್ ಜಿಲ್ಲಧ್ಯಕ್ಷ ಹನಮಂತ ಮಾವಿನಮರದ ಮಾತನಾಡಿ, ನಾಳೆಯ ಫಲಿತಾಂಶದಲ್ಲಿ ಎನ್ಡಿಎ ಮೈತ್ರಿಕೂಟ ಭಾರೀ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ. ಮೋದಿಯವರ ಆತ್ಮಬಲದ ಮುಂದೆ ವಿರೋಧ ಪಕ್ಷಗಳ ಯಾವ ಪ್ರಯತ್ನಗಳು ಸಫಲವಾಗಲು ಸಾಧ್ಯವಿಲ್ಲ ಎಂದರು.ಬಿಜೆಪಿ ಮಹಿಳಾ ಮೋರ್ಚಾದ ಪದಾಧಿಕಾರಿಗಳಾದ ಗಿರಿಜಾ ಕಲ್ಯಾಣಿ, ಸವಿತಾ ಉಂಕಿ, ದ್ರಾಕ್ಷಾಯಣಿ ಗೊಬ್ಬಿ, ಗೌರಮ್ಮ ಕಲಬುರ್ಗಿ, ವೇದಾ ಶೀಪ್ರಿ, ಅನಸೂಯಾ ಅಲದಿ, ಅಶ್ವಿನಿ ಗಾಣಿಗೇರ, ಶಶಿಕಲಾ ಭಾವಿ, ಸಂಪತ್ ಕುಮಾರ ರಾಠಿ, ಕಮಲಕಿಶೋರ ಮಾಲಪಾಣಿ, ಶಿವಾನಂದ ಎಣ್ಣಿ, ಪುರಸಭೆ ಸದಸ್ಯ ಪ್ರಶಾಂತ ಜವಳಿ ಸೇರಿದಂತೆ ಇನ್ನೂ ಅನೇಕ ಮಹಿಳಾ ಕಾರ್ಯಕರ್ತೆಯರು, ಬಿಜೆಪಿ, ಜೆಡಿಎಸ್ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.