ಸಾರಾಂಶ
ಗಂಗಾವತಿ: ಅಂಜನಾದ್ರಿ ಬೆಟ್ಟದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಡಿ.23, 24ರಂದು ನಡೆಯುವ ಹನುಮಮಾಲೆ ವಿಸರ್ಜನೆಯ ಪೂರ್ವದಿನವಾದ ಶುಕ್ರವಾರ ವಿಶ್ವ ಹಿಂದೂ ಪರಿಷತ್, ಬಜರಂಗದಳ ನೇತೃತ್ವದಲ್ಲಿ ನಗರದಲ್ಲಿ ಸಂಕೀರ್ತನೆ ಯಾತ್ರೆ ಜರುಗಿತು.ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿರುವ ಶ್ರೀಚೆನ್ನಬಸವಸ್ವಾಮಿ ಮಂದಿರದಿಂದ ಪ್ರಾರಂಭಗೊಂಡ ಯಾತ್ರೆಗೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಮತ್ತು ಮಾಜಿ ಶಾಸಕ ಪರಣ್ಣ ಮುನವಳ್ಳಿ ಭಗವಾಧ್ವಜ ಹಿಡಿದು ಚಾಲನೆ ನೀಡಿದರು.ಆಂಜನೇಯಸ್ವಾಮಿಯ ಮೂರ್ತಿಯನ್ನು ತೆರೆದ ವಾಹನದಲ್ಲಿರಿಸಿ ಪ್ರಾರಂಭಗೊಂಡ ಮೆರವಣಿಗೆ ಚೆನ್ನಬಸವಸ್ವಾಮಿ ವೃತ್ತ, ಮಹಾವೀರ ವೃತ್ತ, ಮಹಾತ್ಮಗಾಂಧಿ ವೃತ್ತ, ಬಸವಣ್ಣ ಸರ್ಕಲ್, ಅಂಬೇಡ್ಕರ ವೃತ್ತದ ಮೂಲಕ ಕೊಟ್ಟೂರು ಬಸವೇಶ್ವರ ದೇವಸ್ಥಾನಕ್ಕೆ ತಲುಪಿತು.ಮೆರವಣಿಗೆಯಲ್ಲಿ ಜೈ ಭಜರಂಗಬಲಿ, ಜೈ ಆಂಜನೇಯಸ್ವಾಮಿ, ಜೈ ಶ್ರೀರಾಮ್ ಎನ್ನುವ ಘೋಷಣೆಗಳನ್ನು ಮಾಲಾಧಿಕಾರಿಗಳು ಹಾಕಿದರು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ನಗರಸಭಾ ಸದಸ್ಯ ರಮೇಶ ಚೌಡ್ಕಿ, ವಾಸುದೇವ ನವಲಿ, ಬಜರಂಗದಳದ ಪುಂಡಲೀಕ ದಳವಾಯಿ, ವಿನಯ್ ಪಾಟೀಲ್, ದೊಡ್ಡಬಸಯ್ಯ, ರಾಮಂಜನೇಯ, ಯಮನೂರು ಚೌಡ್ಕಿ, ಯಂಕರೆಡ್ಡಿ ಕೇಸರಹಟ್ಟಿ, ಮನೋಹರಗೌಡ ಹೇರೂರು, ವೀರೇಶ ಬಲಕುಂದಿ, ಪಂಪಣ್ಣ ನಾಯಕ ಸೇರಿದಂತೆ 200ಕ್ಕೂ ಹೆಚ್ಚು ಮಾಲಾಧಾರಿಗಳು ಭಾಗವಹಿಸಿದ್ದರು.ಬಿಗಿ ಭದ್ರತೆ: ಸಂಕೀರ್ತನೆ ಯಾತ್ರೆಯ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯಬಾರದೆಂಬ ಕಾರಣಕ್ಕೆ ಪೊಲೀಸ್ ಬಿಗಿ ಭದ್ರತೆ ವಹಿಸಲಾಗಿತ್ತು. ಕೊಪ್ಪಳ, ರಾಯಚೂರು ಎಸ್ಪಿಗಳು ಸೇರಿದಂತೆ ಪೊಲೀಸ್ ಅಧಿಕಾರಿಗಳು ನಿಗಾವಹಿಸಿದ್ದರು.