-ಸಮಗ್ರ ಅಭಿವೃದ್ಧಿ ಕುರಿತು ವಿಸ್ತೃತ ಸಮಾಲೋಚನೆ
ಕನ್ನಡಪ್ರಭ ವಾರ್ತೆ ಕಲಬುರಗಿಲೋಕಸಭಾ ಕ್ಷೇತ್ರದ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರು ಗುರುವಾರ ನವದೆಹಲಿಯಲ್ಲಿರುವ ಭಾರತೀಯ ಪುರಾತತ್ವ ಸರ್ವೇಕ್ಷಣೆ (ಎಎಸ್ಐ) ಪ್ರಧಾನ ಕಚೇರಿಯಲ್ಲಿ ಎಎಸ್ಐ ಮಹಾನಿರ್ದೇಶಕ ಯದುಬೀರ್ ಸಿಂಗ್ ರಾವತ್ ಹಾಗೂ ಹೆಚ್ಚುವರಿ ಮಹಾನಿರ್ದೇಶಕರಾದ (ಸಂರಕ್ಷಣೆ) ಶ್ರೀ ಜಾನ್ವಿಜ್ ಶರ್ಮಾ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದರು.
ಸಭೆಯಲ್ಲಿ ಕಲಬುರಗಿ ಜಿಲ್ಲೆಯ ಐತಿಹಾಸಿಕ ಬೌದ್ಧ ತಾಣವಾದ ‘ಸನ್ನತಿ’ ಹಾಗೂ ಪ್ರಸಿದ್ಧ ‘ಗುಲ್ಬರ್ಗ ಕೋಟೆ’ಯ ಸಂರಕ್ಷಣೆ, ಜೀರ್ಣೋದ್ಧಾರ ಮತ್ತು ಸಮಗ್ರ ಅಭಿವೃದ್ಧಿ ಕುರಿತು ವಿಸ್ತೃತವಾಗಿ ಸಮಾಲೋಚಿಸಲಾಯಿತು.ಈ ಭಾಗದ ಅಪಾರ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿರುವ ಈ ಪಾರಂಪರಿಕ ತಾಣಗಳನ್ನು ಕಾಲಮಿತಿಯಲ್ಲಿ ಸಂರಕ್ಷಿಸಿ ಅಭಿವೃದ್ಧಿಪಡಿಸುವ ಅಗತ್ಯವನ್ನು ಸಂರಕ್ಷಣೆ ದೃಷ್ಟಿಯಿಂದ ಸಂಸದರು ಪ್ರತಿಪಾದಿಸಿದರು.
ಸಂಸದರ ಮನವಿಗೆ ಧನಾತ್ಮಕವಾಗಿ ಸ್ಪಂದಿಸಿದ ಎಎಸ್ಐ ಹಿರಿಯ ಅಧಿಕಾರಿಗಳು, ಪ್ರಸ್ತಾಪಿಸಲಾದ ವಿಷಯಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕಲಬುರಗಿಯ ಶ್ರೀಮಂತ ಪುರಾತತ್ವ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಜೋಪಾನವಾಗಿಟ್ಟುಕೊಳ್ಳುವ ಹಾಗೂ ಪ್ರಚಾರ ಪಡಿಸುವ ನಿಟ್ಟಿನಲ್ಲಿ ಈ ಭೇಟಿ ಪ್ರಮುಖ ಹೆಜ್ಜೆಯಾಗಿದೆ.
ಫೋಟೋ- ಆರ್ಕೆ ಎಎಸ್ಐ