ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ಬಾಣಾವರ ಗ್ರಾಮ ಪಂಚಾಯಿತಿಯಲ್ಲಿ ನಡೆದ ಆಶ್ರಯ ವಸತಿ ಯೋಜನೆಯ ಹಗರಣದ ಹಿನ್ನೆಲೆ ಶಾಸಕ ಕೆ. ಎಂ. ಶಿವಲಿಂಗೇಗೌಡ ಅವರ ವಿರುದ್ಧ ಜೆಡಿಎಸ್ ಮುಖಂಡ ಎನ್. ಆರ್. ಸಂತೋಷ್ ಅವರು ಮಾಡಿದ ಭ್ರಷ್ಟಾಚಾರದ ಆರೋಪಗಳು ಸತ್ಯಕ್ಕೆ ದೂರವಾದವು ಎಂದು ಗಂಡಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಟ್ರೋ ಬಾಬು ತಿಳಿಸಿದರು.ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಾಸಕರ ವಿರುದ್ಧದ ಆರೋಪಗಳು ನಿರಾಧಾರವಾಗಿವೆ. ಅವರು ನಿರಂತರವಾಗಿ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿದ್ದಾರೆ. ಈ ಹಗರಣದ ತನಿಖೆಗೆ ಶಾಸಕರೇ ಒತ್ತಾಯಿಸಿದ್ದರು, ಆಶ್ರಯ ಯೋಜನೆಯ 94 ನಕಲಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿರುವ ಕುರಿತು ವರದಿಯಾದ ನಂತರ, ಜೆಡಿಎಸ್ ಮುಖಂಡ ಎನ್. ಆರ್. ಸಂತೋಷ್ ಅವರು ಶಾಸಕರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು. ತಾಲೂಕು ಪಂಚಾಯಿತಿ ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಜವಾಬ್ದಾರಿಯ ಬಗ್ಗೆ ಸ್ಪಷ್ಟತೆ ಬೇಕಿದೆ. ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಶಾಸಕರು ಆಗಲೇ ಸೂಚಿಸಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಗಂಜಿಗೆರೆ ಚಂದ್ರಶೇಖರ್ ಮಾತನಾಡಿ, ಇತ್ತೀಚೆಗೆ ಕೆಲ ರಾಜಕೀಯ ನಾಯಕರು ಮಾಡುತ್ತಿರುವ ಆರೋಪಗಳು ತಾಲೂಕಿನ ಜನತೆಗೆ ತಪ್ಪು ಸಂದೇಶ ನೀಡುತ್ತಿರುವುದು ಆತಂಕದ ವಿಷಯವಾಗಿದೆ. ರಾಜಕೀಯದಲ್ಲಿ ಔದಾರ್ಯ ಮತ್ತು ಸತ್ಯಧರ್ಮ ಅತ್ಯಂತ ಮುಖ್ಯ. ಜನಪ್ರತಿನಿಧಿಗಳು ಸಭ್ಯ ರಾಜಕಾರಣ ನಡೆಸುವುದು ಅವರ ನೈತಿಕ ಹೊಣೆ, ರಾಜಕೀಯವು ಜನಸೇವೆಗಾಗಿ ಇರುವ ಸಾಧನವಾಗಬೇಕು. ವ್ಯಕ್ತಿಗತ ದ್ವೇಷ ಅಥವಾ ಪಕ್ಷೀಯ ಲಾಭಕ್ಕಾಗಿ ರಾಜಕೀಯ ವೇದಿಕೆಯನ್ನು ದುರುಪಯೋಗ ಪಡಿಸಿಕೊಳ್ಳು ವುದು ಜನತೆಯ ನಂಬಿಕೆಗೆ ಧಕ್ಕೆಯಾಗಿದೆ ಎಂಬ ಎಚ್ಚರಿಕೆಯನ್ನು ನೀಡಿದರು.ಕಾಂಗ್ರೆಸ್ ಮುಖಂಡ ಕಾಟಿಕೆರೆ ಉಮೇಶ್ ಮಾತನಾಡಿ, ಎನ್.ಆರ್. ಸಂತೋಷ್ ಶಾಸಕರ ವಿರುದ್ಧ ಮಾಡಿದ ಆರೋಪಗಳು ಯಾವುದೇ ಸಾಕ್ಷ್ಯಾಧಾರವಿಲ್ಲದ, ನಿರಾಧಾರ ಮತ್ತು ರಾಜಕೀಯ ಪ್ರೇರಿತವಾಗಿವೆ. ಅವರೇ ಹಿಂದೆ ಹಲವು ಭ್ರಷ್ಟಾಚಾರ ಪ್ರಕರಣಗಳಲ್ಲಿ ತೊಡಗಿದ್ದವರು. ಇಂತಹ ವ್ಯಕ್ತಿಯು ಇಂದು ಶುದ್ಧ ರಾಜಕಾರಣದ ಮಾತಾಡುವುದು ನಗಣ್ಯವಾಗಿದೆ ಎಂದು ಕಿಡಿಕಾರಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಸದಸ್ಯ ವೆಂಕಟಮುನಿ, ವೆಂಕಟೇಶ್ (ಸುಭಾಷ್ ನಗರ), ಬಾಲಮುರುಗನ್ ಹಾಗೂ ಇತರ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.